ಮಹಾರಾಷ್ಟ್ರಾವನ್ನು ಮಣಿಸಿ 'ವಿಜಯ್ ಹಜಾರೆ' ಫೈನಲ್ಗೆ ಲಗ್ಗೆ ಇಟ್ಟ ಕರ್ನಾಟಕ

ನವ ದೆಹಲಿ, ಫೆಬ್ರವರಿ 24: ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡಕ್ಕೆ ಮಣ್ಣು ಮುಕ್ಕಿಸಿದ ಕರ್ನಾಟಕ ತಂಡ ಫೈನಲ್ ಪ್ರವೇಶಿಸಿದೆ.
ನವದೆಹಲಿಯ ಫಿರೋಜ್ ಶಾ ಕೋಟ್ಲಾದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರವನ್ನು 9 ವಿಕೆಟ್ ಅಂತರದಿಂದ ಸೋಲಿಸಿದೆ. ಪಂದ್ಯಾವಳಿಯಲ್ಲಿ ಒಂದೂ ಪಂದ್ಯ ಸೋಲದಿದ್ದ ಮಹಾರಾಷ್ಟ್ರ ತಂಡ ಸೆಮಿಫೈನಲ್ ನಲ್ಲಿ ಹೀನಾಯ ಸೋಲು ಕಂಡು ಮನೆಗೆ ತೆರಳಿದೆ.
ರಾಜ್ಯದ ಬೌಲರ್ಗಳ ವಿರುದ್ಧ ರನ್ ಗಳಿಸಲು ತಿಣುಕಾಡಿದ ಮಹರಾಷ್ಟ್ರ ಬ್ಯಾಟ್ಸ್ಮನ್ಗಳು 44.3 ಓವರ್ಗಳಲ್ಲಿ 160 ರನ್ಗಳಿಗೆ ತಮ್ಮೆಲ್ಲಾ ವಿಕೆಟ್ಗಳನ್ನು ಒಪ್ಪಿಸಿದರು. ಸಾಧಾರಣ ಗುರಿಯ ಬೆನ್ನು ಹತ್ತಿದ ಕರ್ನಾಟಕ 30.3 ಓವರ್ನಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿ ಬೀಗಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮಹರಾಷ್ಟ್ರವನ್ನು ರಾಜ್ಯದ ಬೌಲರ್ಗಳು ತಮ್ಮ ಬಿಗಿ ಬೌಲಿಂಗ್ನಿಂದ ಕಟ್ಟಿಹಾಕಿದರು. ಶಿಸ್ತಿನ ಬೌಲಿಂಗ್ ನಡೆಸಿದ ಬೌಲರ್ಗಳು ಮಹಾರಾಷ್ಟ್ರದ ಯಾವೊಬ್ಬ ಆಟಗಾರನೂ ಹೆಚ್ಚು ಕಾಲ ಸ್ಕ್ರೀಸ್ನಲ್ಲಿ ನಿಲ್ಲದಂತೆ ನೋಡಿಕೊಂಡರು.
ಅಲ್ಪ ಪ್ರತಿರೋಧ ತೋರಿದ ಮಹರಾಷ್ಟ್ರದ ಎಸ್.ಮುಂಡೆ 50 ರನ್ ಗಳಿಸಿದರು. ನೌಷಾದ್ ಶೇಖ್ 42 ರನ್ ಗಳಿಸಿದ್ದು ಹೊರತು ಪಡಿಸಿ ಇನ್ನಾವ ಬ್ಯಾಟ್ಸ್ಮನ್ಗಳು ರಾಜ್ಯದ ಬೌಲರ್ಗಳ ಎದುರು ನಿಲ್ಲಲೇ ಇಲ್ಲ. ಮಹಾರಾಷ್ಟ್ರದ 7 ಜನ ಬ್ಯಾಟ್ಸ್ಮನ್ಗಳು ಹತ್ತರ ಗಡಿ ದಾಟದೇ ಔಟಾಗಿ ಪೆವಿಲಿಯನ್ ಸೇರಿದರು.
ಮಹಾರಾಷ್ಟ್ರ ನೀಡಿದ 160 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ರಾಜ್ಯದ ಆರಂಭಿಕ ಬ್ಯಾಟ್ಸ್ಮನ್ಗಳಾದ ಮಯಾಂಕ್ ಅಗರ್ವಾಲ್ ಮತ್ತು ಕರುಣ್ ನಾಯರ್ ಇಬ್ಬರೂ ಅರ್ಧ ಶತಕ ಗಳಿಸಿ ಮಿಂಚಿದರು.
ಮಹರಾಷ್ಟ್ರ ಬೌಲರ್ಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದ ಮಯಾಂಕ್ ಅಗರ್ವಾಲ್ 86 ಬಾಲ್ಗಳಲ್ಲಿ 81 ರನ್ ಗಳಿಸಿದರು. ಅವರ ಇನ್ನಿಂಗ್ಸ್ನಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಇತ್ತು. ಗೆಲುವಿಗೆ ಕೇವಲ 10 ರನ್ಗಳಿದ್ದಾಗ ಅವರು ವಿಕೆಟ್ ಒಪ್ಪಿಸಿದರು. 86 ರನ್ ಗಳಿಸಿದ ಮಯಾಂಕ್ ಅಗರ್ವಾಲ್ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಈ ವರೆಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರರಾದರು.
ಅತ್ಯುತ್ತಮ ಆಟವಾಡಿದ ಕರುಣ್ ನಾಯರ್ 90 ಎಸೆತಗಳಲ್ಲಿ 70 ರನ್ ಗಳಿಸಿ ನಾಟೌಟ್ ಆಗಿ ಉಳಿದರು, ಅವರು 10 ಬೌಂಡರಿ ಬಾರಿಸಿದರು. ಆರ್.ಸಮರ್ಥ್ 3 ರನ್ ಗಳಿಸಿ ಮ್ಯಾಚ್ ಮುಗಿಸಿದರು.
ರಾಜ್ಯವು ಫೆ. 27 ರಂದು ಫಿರೋಜ್ ಶಾ ಕೋಟ್ಲಾನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications