ರಣಜಿ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಹಾಗೂ ಹರಿಯಾಣ ತಂಡಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಬೋನಸ್ ಅಂಕ ಕಲೆ ಹಾಕಿ ಮುಂದಿನ ಹಂತವನ್ನು ತಲುಪುವ ಕರ್ನಾಟಕದ ಆಸೆಗೆ ಪೆಟ್ಟು ಬಿದ್ದಿದೆ. ಈ ಮೂಲಕ ಕರ್ನಾಟಕ ಪ್ರಸಕ್ತ ಸಾಲಿನ ರಣಜಿ ಟೂರ್ನಿಯಲ್ಲಿ ಲೀಗ್ ಹಂತದಲ್ಲೇ ಹೊರ ನಡೆಯಲಿದೆ. ಸಿ ಗುಂಪಿನಿಂದ ಮುಂದಿನ ಹಂತಕ್ಕೆ ಕೇರಳ ಹಾಗೂ ಹರಿಯಾಣ ತಂಡಗಳು ಪ್ರವೇಶ ಪಡೆದಿವೆ.
ಮೂರನೇ ದಿನದಾಟವನ್ನು ಹರಿಯಾಣ 5 ವಿಕೆಟ್ಗೆ 232 ರನ್ಗಳಿಂದ ಆಟ ಮುಂದುವರಿಸಿ, 450 ರನ್ಗಳಿಗೆ ಆಲೌಟ್ ಆಯಿತು. ಬೃಹತ್ ಇನಿಂಗ್ಸ್ ಹಿನ್ನಡೆ ಸಾಧಿಸಿರುವ ಕರ್ನಾಟಕ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ್ದು, ಮೂರನೇ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 108 ರನ್ ಕಲೆ ಹಾಕಿದೆ. ಇನ್ನು 38 ರನ್ಗಳಿಸಿದರೆ, ಹರಿಯಾಣಗೆ ಎರಡನೇ ಇನಿಂಗ್ಸ್ನಲ್ಲಿ ಬ್ಯಾಟಿಂಗ್ಗೆ ಆಹ್ವಾನಿಸಬಹುದು. ನಾಲ್ಕನೇ ದಿನಕ್ಕೆ ದೇವದತ್ ಪಡಿಕ್ಕಲ್ (ಅಜೇಯ 41) ಹಾಗೂ ಆರ್.ಸ್ಮರಣ್ (ಅಜೇಯ 9) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಶುಕ್ರವಾರ ಅಜೇಯ 35 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಹರಿಯಾಣದ ಭರವಸೆಯ ಬ್ಯಾಟರ್ ಶಿಶಾಂತ್ ಸಿಂಧು, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಪ್ರಸಕ್ತ ಋತುವಿನಲ್ಲಿ ಪ್ರದರ್ಶಿಸಿದ ತಮ್ಮ ನೈಜ ಬ್ಯಾಟಿಂಗ್ ಮುಂದುವರಿಸಿದರು. ಚಿನ್ನಸ್ವಾಮಿ ಅಂಗಳದಲ್ಲಿ ಕರ್ನಾಟಕದ ಬೌಲರ್ಗಳ ರಣತಂತ್ರವನ್ನು ಅರಿತು ಬ್ಯಾಟ್ ಮಾಡಿದ ನಿಶಾಂತ್ ಅಬ್ಬರಿಸಿದರು. ಇವರು 184 ಎಸೆತಗಳಲ್ಲಿ 15 ಬೌಂಡರಿ, 6 ಸಿಕ್ಸರ್ ಸಹಾಯದಿಂದ 165 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.
ನಿಶಾಂತ್ ಅವರ ಭರ್ಜರಿ ಆಟದ ಪರಿಣಾಮ ಹರಿಯಾಣ ಅರ್ಹ ಮುನ್ನಡೆ ಸಾಧಿಸಿತು. ಕರ್ನಾಟಕದ ಪರ ಪ್ರಸಿದ್ಧ ಕೃಷ್ಣಾ ಹಾಗೂ ಹಾರ್ದಿಕ್ ರಾಜ್ ತಲಾ ಮೂರು ವಿಕೆಟ್ ಪಡೆದರು. ಇನ್ನು ಯಶೋವರ್ಧನ್ ಪಿ 2 ವಿಕೆಟ್ ಕಬಳಿಸಿದರು.
ಕರ್ನಾಟಕದ ಕೆವಿ ಅನೀಶ್ ಹಾಗೂ ಮಯಾಂಕ್ ಅಗರ್ವಾಲ್ ಆರಂಭಿಕ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಕರ್ನಾಟಕ ತಂಡ 30 ರನ್ ಆಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಮೂರನೇ ವಿಕೆಟ್ಗೆ ಕೆಎಲ್ ರಾಹುಲ್ ಹಾಗೂ ದೇವದತ್ ಪಡಿಕ್ಕಲ್ ಅರ್ಧಶತಕದ ಜೊತೆಯಾಟದ ಕಾಣಿಕೆ ನೀಡಿದರು. ಕೆಎಲ್ ರಾಹುಲ್ 7 ಬೌಂಡರಿ ನೆರವಿನಿಂದ 43 ರನ್ ಬಾರಿಸಿ ಔಟ್ ಆದರು
ದೇವದತ್ ಪಡಿಕ್ಕಲ್ 6 ಬೌಂಡರಿ ನೆರವಿನಿಂದ ಅಜೇಯ 41 ರನ್ ಸಿಡಿಸಿ ಭಾನುವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆರ್ ಸ್ಮರಣ್ ಸಹ ಭಾನುವಾರಕ್ಕೆ ಅಂಗಳ ಪ್ರವೇಶಿಸಲಿದ್ದು ಎಲ್ಲರ ಚಿತ್ತ ಕದ್ದಿದೆ. ಔಪಚಾರಿಕ ಪಂದ್ಯದಲ್ಲಿ ಕರ್ನಾಟಕದ ಆಟಗಾರರು ಹೇಗೆ ಬ್ಯಾಟಿಂಗ್ ನಡೆಸುತ್ತಾರೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.