ಅಹಮದಾಬಾದ್: ಭರವಸೆಯ ಆಟಗಾರ ದೇವದತ್ ಪಡಿಕ್ಕಲ್ (124 ರನ್) ಹಾಗೂ ಕರುಣ್ ನಾಯರ್ (ಅಜೇಯ 130 ರನ್) ಅವರ ಭರ್ಜರಿ ಶತಕದ ನೆರವಿನಿಂದ ಕರ್ನಾಟಕ 8 ವಿಕೆಟ್ಗಳಿಂದ ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ಕೇರಳಾ ತಂಡವನ್ನು ಮಣಿಸಿತು. ಈ ಮೂಲಕ ಕರ್ನಾಟಕ "ಎ" ಗುಂಪಿನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿ 8 ಅಂಕಗಳನ್ನು ಕಲೆ ಹಾಕಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
285 ರನ್ಗಳ ಗುರಿಯನ್ನು ಬೆನ್ನಟ್ಟಿದ ಕರ್ನಾಟಕದ ತಂಡದ ಆರಂಭ ಕಳಪೆಯಾಗಿತ್ತು. ನಾಯಕ ಮಯಾಂಕ್ ಅಗರ್ವಾಲ್ (1) ರನ್ ಕಲೆ ಹಾಕುವಲ್ಲಿ ವಿಫಲರಾದರು. 1 ರನ್ಗಳಿಗೆ 1 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆರಂಭಿಕ ದೇವದತ್ ಪಡಿಕ್ಕಲ್ ಹಾಗೂ ಕರುಣ್ ನಾಯರ್ ಜೋಡಿ ಆಧಾರವಾದರು. ಈ ಜೋಡಿ ಮಧ್ಯದ ಓವರ್ಗಳಲ್ಲಿ ವಿಕೆಟ್ ಬೀಳದಂತೆ ನೋಡಿಕೊಂಡಿತು. ಅಲ್ಲದೆ ಎರಡನೇ ವಿಕೆಟ್ಗೆ 223 ರನ್ಗಳ ಜೊತೆಯಾಟವನ್ನು ನೀಡಿ ಅಬ್ಬರಿಸಿತು.

ಆಡಿದ ಮೊದಲ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದ ದೇವದತ್ ಪಡಿಕ್ಕಲ್ ಎರಡನೇ ಪಂದ್ಯದಲ್ಲೂ ಇದೇ ಲಯ ಮುಂದುವರೆಸಿದರು. ಇವರು 137 ಎಸೆತಗಳಲ್ಲಿ 12 ಬೌಂಡರಿ, 3 ಸಿಕ್ಸರ್ ಸಹಾಯದಿಂದ 124 ರನ್ ಬಾರಿಸಿ ಮಿಂಚಿದರು. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಕರುಣ್ ನಾಯರ್ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ಇವರು 130 ಎಸೆತಗಳಲ್ಲಿ 14 ಬೌಂಡರಿ ಸಹಾಯದಿಂದ ಅಜೇಯ 130 ರನ್ ಸಿಡಿಸಿದರು. ರವಿಚಂದ್ರನ್ ಸ್ಮರಣ್ ಅಜೇಯ 25 ರನ್ ಬಾರಿಸಿ ಜಯದಲ್ಲಿ ಮಿಂಚಿದರು. ಅಂತಿಮವಾಗಿ ಕರ್ನಾಟಕ 48.2 ಓವರ್ಗಳಲ್ಲಿ 2 ವಿಕೆಟ್ಗೆ 285 ರನ್ ಕಲೆ ಹಾಕಿ ಜಯ ಸಾಧಿಸಿತು.
ಟಾಸ್ ಸೊತರೂ ಮೊದಲು ಬ್ಯಾಟ್ ಮಾಡಿದ ಕೇರಳ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕರಾದ ರೋಹನ್ ಕುನ್ನುಮ್ಮಲ್ (12), ಅಭಿಷೇಕ್ ನಾಯರ್ (7), ಅಹಮ್ಮದ್ ಇಮ್ರಾನ್ (0) ರನ್ ಕಲೆ ಹಾಕುವಲ್ಲಿ ವಿಫಲರಾದರು. 49 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಕೇರಳ ಸಂಕಷ್ಟದಲ್ಲಿತ್ತು. ನಾಲ್ಕನೇ ವಿಕೆಟ್ಗೆ ಬಾಬಾ ಅಪರಜಿತ್ ಹಾಗೂ ಅಖಿಲ್ ಸ್ಕೇರಿಯಾ ಜೋಡಿ ಸಮಯೋಚಿತ ಆಟದ ಪ್ರದರ್ಶನ ನೀಡಿತು. ಈ ಜೋಡಿ 77 ರನ್ ಜೊತೆಯಾಟದ ಕಾಣಿಕೆ ನೀಡಿತು. ಬಾಬಾ ಅಪರ್ಜಿತ್ 62 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 71 ರನ್ ಸಿಡಿಸಿ ಔಟ್ ಆದರು. ಅಖಿಲ್ ಸ್ಕೇರಿಯಾ 27 ರನ್ ಸೇರಿಸಿ ಮಿಂಚಿದರು. ಮಧ್ಯಮ ಕ್ರಮಾಂಕದಲ್ಲಿ ವಿಷ್ಣು ವಿನೋದ್ 35 ರನ್ ಸೇರಿಸಿದರು.
ಭರವಸೆಯ ಬ್ಯಾಟರ್ ಮೊಹಮ್ಮದ್ ಅಜರುದ್ಧಿನ್ ಹಾಗೂ ಅಂಕಿತ್ ಶರ್ಮಾ ಜೋಡಿ 8ನೇ ವಿಕೆಟ್ಗೆ 99 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ವೇಳೆ ಮೊಹಮ್ಮದ್ ಅಜರುದ್ಧಿನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 58 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ 144ರ ಸ್ಟ್ರೈಕ್ ರೇಟ್ನಲ್ಲಿ ಅಜೇಯ 84 ರನ್ ಸಿಡಿಸಿದರು. ಅಂತಿಮವಾಗಿ ಕೇರಳ 50 ಓವರ್ಗಳಲ್ಲಿ 7 ವಿಕೆಟ್ಗೆ 284 ರನ್ ಸೇರಿಸಿತು.