ದೇಶೀಯ ಕ್ರಿಕೆಟ್ನಲ್ಲಿ ಹಲವು ಶತಕಗಳನ್ನು ಗಳಿಸುತ್ತಿರುವ ವಿದರ್ಭ ತಂಡದ ನಾಯಕ ಕರುಣ್ ನಾಯರ್ ಅವರ ಬ್ಯಾಟ್ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಮಾರ್ಚ್ 1 ರ ಶನಿವಾರ ನಾಗ್ಪುರದಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ನ ನಾಲ್ಕನೇ ದಿನದಂದು ನಾಯರ್ ಕೇರಳ ವಿರುದ್ಧ ಅದ್ಭುತ ಶತಕ ಬಾರಿಸಿದ್ದಾರೆ. ರಣಜಿ ಟ್ರೋಫಿ ಫೈನಲ್ನಲ್ಲಿ ತಮ್ಮ ಎರಡನೇ ಶತಕ ಮತ್ತು ಅವರ ಪ್ರಥಮ ದರ್ಜೆ ವೃತ್ತಿಜೀವನದ 23ನೇ ಶತಕವನ್ನು ಸಿಡಿಸಿ ಸಂಭ್ರಮಿಸಿದ್ದಾರೆ.
ಕರುಣ್ ನಾಯರ್ ಅವರು 184 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಇದು ಪ್ರಸಕ್ತ ರಣಜಿ ಋತುವಿನಲ್ಲಿ ಉತ್ತಮ ಫಾರ್ಮ್ನಲ್ಲಿರುವ ಕರುಣ್ ನಾಯರ್ ಅವರ ನಾಲ್ಕನೇ ಶತಕದ ಇನ್ನಿಂಗ್ಸ್ ಆಗಿದೆ.

ಕರುಣ್ ನಾಯರ್ ಅವರ ಶತಕವು ವಿದರ್ಭ ತಂಡವನ್ನು ಬಲಪಡಿಸಿದೆ. ಈ ಇನ್ನಿಂಗ್ಸ್ನೊಂದಿಗೆ ಕೇರಳ ವಿರುದ್ಧದ ಫೈನಲ್ ಪಂದ್ಯದ ನಾಲ್ಕನೇ ದಿನದಾಟದ ಚಹಾ ವಿರಾಮದವರೆಗೆ ವಿದರ್ಭ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 3 ವಿಕೆಟ್ಗಳಿಗೆ 189 ರನ್ ಗಳಿಸುವ ಮೂಲಕ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಮೂರನೇ ರಣಜಿ ಪ್ರಶಸ್ತಿಯತ್ತ ಸಾಗುತ್ತಿರುವ ವಿದರ್ಭ, ಮೊದಲ ಇನ್ನಿಂಗ್ಸ್ನಲ್ಲಿ 37 ರನ್ಗಳ ಮುನ್ನಡೆ ಸಾಧಿಸಿ, ಒಟ್ಟು 226 ರನ್ಗಳ ಮುನ್ನಡೆ ಪಡೆದಿದೆ.
ಚಹಾ ಸಮಯದವರೆಗೂ, ಕರುಣ್ ನಾಯರ್ 187 ಎಸೆತಗಳಲ್ಲಿ 100 ರನ್ ಗಳಿಸಿ ಕ್ರೀಸ್ನಲ್ಲಿದ್ದರು. ಅವರು ಡ್ಯಾನಿಶ್ ಮಾಲೆವಾರ್ ಜೊತೆ ಮೂರನೇ ವಿಕೆಟ್ಗೆ 182 ರನ್ಗಳ ಜೊತೆಯಾಟವಾಡಿದರು. ಪಂದ್ಯದ ಮೇಲೆ ವಿದರ್ಭದ ಪ್ರಾಬಲ್ಯವನ್ನು ಹೆಚ್ಚಿಸಿದರು. ಮಾಲೆವರ್ 161 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ 73 ರನ್ ಗಳಿಸಿದರು. ಮೊದಲ ಇನ್ನಿಂಗ್ಸ್ನಲ್ಲೂ ನಾಯರ್ ಶತಕ ಗಳಿಸುವ ಸನಿಹದಲ್ಲಿದ್ದರು. ಆದರೆ 86 ರನ್ಗಳಿಗೆ ರನೌಟ್ ಆದರು.
ರಣಜಿ ಟ್ರೋಫಿ ಫೈನಲ್ನಲ್ಲಿ ನಾಯರ್ ಗಳಿಸಿದ ಎರಡನೇ ಶತಕ ಇದಾಗಿದ್ದು, 2013-14ರಲ್ಲಿ ಕರ್ನಾಟಕ ಪರ ಚೊಚ್ಚಲ ಟೂರ್ನಿಯಿಂದ ನಾಲ್ಕು ಬಾರಿ ಈ ಸಾಧನೆ ಮಾಡಿದ್ದಾರೆ. ಹಿಂದಿನ ಇನ್ನಿಂಗ್ಸ್ನಲ್ಲಿ, ನಾಯರ್ ತಮ್ಮ 152ನೇ ಪಂದ್ಯದಲ್ಲಿ 8000 ಪ್ರಥಮ ದರ್ಜೆ ರನ್ಗಳನ್ನು ಪೂರ್ಣಗೊಳಿಸಿದ್ದರು. ಇದಲ್ಲದೆ, ನಾಯರ್ ರಣಜಿ ಟ್ರೋಫಿ ಋತುವಿನಲ್ಲಿ ಮೊದಲ ಬಾರಿಗೆ 800 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಕಳೆದ 10 ಪಂದ್ಯಗಳಲ್ಲಿ ಇದು ಕರುಣ್ ನಾಯರ್ ಅವರ ಆರನೇ ಶತಕವಾಗಿದೆ. ಇದು ಈ ಋತುವಿನಲ್ಲಿ ಅವರ 9ನೇ ಶತಕವಾಗಿದೆ. ಕರುಣ್ 50 ಓವರ್ಗಳ ವಿಜಯ್ ಹಜಾರೆ ಟ್ರೋಫಿಯಲ್ಲಿ ಐದು ಶತಕಗಳು ಮತ್ತು ರಣಜಿ ಟ್ರೋಫಿಯಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ್ದಾರೆ.
ವಿದರ್ಭ ಮೊದಲ ಇನ್ನಿಂಗ್ಸ್ನಲ್ಲಿ 379 ರನ್ಗಳಿಗೆ ಆಲೌಟ್ ಆದರೆ, ಕೇರಳ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 342 ರನ್ಗಳಿಗೆ ಆಲೌಟ್ ಆಯಿತು. ಇದರಿಂದಾಗಿ ವಿದರ್ಭ ತಂಡವು ಕೇರಳಕ್ಕಿಂತ 37 ರನ್ಗಳ ಮುನ್ನಡೆ ಸಾಧಿಸಿತು. ನಾಲ್ಕನೇ ದಿನವಾದ ಇಂದು ವಿದರ್ಭ ತಂಡ 3 ವಿಕೆಟ್ ಕಳೆದುಕೊಂಡು 235 ರನ್ ಗಳಿಸುವ ಮೂಲಕ 272 ರನ್ ಮುನ್ನಡೆ ಸಾಧಿಸಿದೆ.