ಜುಲೈ 5 ಶುಕ್ರವಾರ, ಭಾರತದಲ್ಲಿ ಇತ್ತೀಚೆಗೆ ಕ್ರಿಕೆಟ್ ಅತಿದೊಡ್ಡ ಕ್ರೀಡೆಯಾಗಿ ಹೊರಹೊಮ್ಮಿದೆ. ಇಂದು ಪ್ರತಿ ಮನೆಯಲ್ಲಿಯೂ ಒಬ್ಬರು ಬಾಲ್, ಬ್ಯಾಟ್ ಹಿಡಿದು ಕ್ರಿಕೆಟ್ ಆಡಲು ನಿಂತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಪ್ರತಿಭೆಗಳನ್ನು ಗುರುತಿಸಿ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿಲು ಆಯ್ಕೆ ಮಾಡುವುದು ಸವಾಲಿನ ಕೆಲಸವಾಗಿದೆ. ಕೆಲವೊಮ್ಮೆ ಪ್ರತಿಭೆ ಇದ್ದರೂ ಆಡಲು ಅವಕಾಶ ಸಿಗದೆ ಕ್ರಿಕೆಟ್ನಿಂದ ಹಲವು ಆಟಗಾರರು ತಮ್ಮ ವೃತ್ತಿಜೀವನವನ್ನು ಅಂತ್ಯಗೊಳಿಸಿಕೊಂಡಿದ್ದಾರೆ.

ಇದೀಗ ಇಂತಹದೆ ದಾರಿಯಲ್ಲಿ ಸಾಗುತ್ತಿರುವ ಟೀಮ್ ಇಂಡಿಯಾ ಬ್ಯಾಟರ್ ತನ್ನ ವೃತ್ತಿಜೀವನಕ್ಕೆ ಎಳ್ಳು ನೀರು ಬಿಡುವ ಪರಿಸ್ಥಿತಿಯಲ್ಲಿದ್ದಾರೆ. ಈ ಕ್ರಿಕೆಟಿಗ ಟೀಮ್ ಇಂಡಿಯಾ ಪರ ತನ್ನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟ್ರಿಪಲ್ ಸೆಂಚುರಿ ಗಳಿಸಿದ್ದರು. ಇದರ ಹೊರತಾಗಿಯೂ ಈ ಆಟಗಾರನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಬಹುತೇಕ ಮುಗಿದಿದೆ.
ಈ ಆಟಗಾರನಿಗೆ ಅವಕಾಶ ಸಿಕ್ಕಿದ್ದರೆ ಇಂದು ಟೀಮ್ ಇಂಡಿಯಾದ ಅತಿದೊಡ್ಡ ಸ್ಟಾರ್ ಕ್ರಿಕೆಟಿಗರ ಸಾಲಿಗೆ ಸೇರ್ಪಡೆಯಾಗುತ್ತಿದ್ದರು. ಆದರೆ ದುರದೃಷ್ಟ ಈ ಕ್ರಿಕೆಟಿಗ ಮತ್ತೆ ಟೀಮ್ ಇಂಡಿಯಾ ಪರ ಕಣಕ್ಕೀಳಿಯಲಿಲ್ಲ.
ಸತತ 7 ವರ್ಷಗಳಿಂದ ಟೀಮ್ ಇಂಡಿಯಾ ಪರ ಆಡಲು ಅವಕಾಶಕ್ಕಾಗಿ ಕನ್ನಡಿಗ ಕರುಣ್ ನಾಯರ್ ಹಾತೊರೆಯುತ್ತಿದ್ದಾರೆ. ಕರುಣ್ ನಾಯರ್ ತಮ್ಮ ಟೆಸ್ಟ್ ವೃತ್ತಿಜೀವನದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ನಂತಹ ಬಲಿಷ್ಠ ತಂಡದ ವಿರುದ್ಧ ತ್ರಿಶತಕ ಗಳಿಸಿದ್ದರು.

ಈ ಮೂಲಕ ಕರುಣ್ ನಾಯರ್ ಕಡಿಮೆ ಟೆಸ್ಟ್ ಇನ್ನಿಂಗ್ಸ್ನಲ್ಲಿ ತ್ರಿಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ವೀರೇಂದ್ರ ಸೆಹ್ವಾಗ್ ಬಿಟ್ಟರೆ ಭಾರತದ ಯಾವೊಬ್ಬ ಬ್ಯಾಟರ್ ಈ ಹಿಂದೆ ಇಂತಹ ದಾಖಲೆ ಮಾಡಲು ಸಾಧ್ಯವಾಗಿರಲಿಲ್ಲ. ಈ ತ್ರಿಶತಕದ ನಂತರವೇ ಕರುಣ್ ನಾಯರ್ ವೃತ್ತಿ ಬದುಕಿನ ಕ್ಷಣಗಣನೆ ಆರಂಭವಾಗಿದೆ.
ಕರುಣ್ ನಾಯರ್ ಕೊನೆಯ ಬಾರಿಗೆ 2017ರಲ್ಲಿ ಟೀಮ್ ಇಂಡಿಯಾ ಪರ ಆಡಿದ್ದರು. ಟ್ರಿಪಲ್ ಸೆಂಚುರಿ ಗಳಿಸುವುದು ಪ್ರತಿಯೊಬ್ಬ ಟೆಸ್ಟ್ ಸ್ಪೆಷಲಿಸ್ಟ್ನ ಕನಸು. ಆದರೆ, ಇದೀಗ ಕರುಣ್ ನಾಯರ್ ಅವರ ಕೊಡುಗೆಯನ್ನು ಬಿಸಿಸಿಐ ಆಯ್ಕೆ ಸಮಿತಿ ಸಂಪೂರ್ಣವಾಗಿ ಮರೆತುಹೋದಂತೆ ತೋರುತ್ತಿದೆ.
2018ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ತಂಡದಲ್ಲಿ ಕರುಣ್ ನಾಯರ್ಗೆ ಸ್ಥಾನ ನೀಡಲಾಗಿತ್ತು. ಆದರೆ ಇಡೀ ಪ್ರವಾಸದಲ್ಲಿ ಕರುಣ್ ನಾಯರ್ ಒಂದೇ ಒಂದು ಪಂದ್ಯದಲ್ಲಿ ಆಡಲಿಲ್ಲ.
ಇದರ ಬೆನ್ನಲ್ಲೇ ಭಾರತ ತಂಡದ ಅಂದಿನ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ವಿರುದ್ಧ ಕರುಣ್ ನಾಯರ್ ದೊಡ್ಡ ಆರೋಪ ಮಾಡಿದ್ದರು.
ಇಂಗ್ಲೆಂಡ್ನಲ್ಲಿ ನಡೆದ ಐದು ಟೆಸ್ಟ್ ಪಂದ್ಯಗಳಿಗೆ ನನ್ನನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಒಂದೇ ಒಂದು ಪಂದ್ಯದಲ್ಲೂ ನನ್ನನ್ನು ಆಡುವ ಹನ್ನೊಂದರಲ್ಲಿ ಸೇರಿಸಲಾಗಿಲ್ಲ ಎಂದು ಕರುಣ್ ನಾಯರ್ ಹೇಳಿದ್ದರು.
ಈ ಅವಧಿಯಲ್ಲಿ ನಾನು ತಂಡದಿಂದ ಏಕೆ ಹೊರಗುಳಿದಿದ್ದೇನೆ ಎಂದು ಕೋಚ್ ಆಗಲಿ, ನಾಯಕರಾಗಲಿ ಅಥವಾ ಆಯ್ಕೆದಾರರಾಗಲಿ ಹೇಳಿಲ್ಲ. ಯಾರೂ ನನ್ನೊಂದಿಗೆ ಮಾತನಾಡಲಿಲ್ಲ ಎಂದು ಕರುಣ್ ಬೇಸರ ವ್ಯಕ್ತಪಡಿಸಿದ್ದರು.
ಮತ್ತೋರ್ವ ಟೀಮ್ ಇಂಡಿಯಾ ಆರಂಭಿಕ ಬ್ಯಾಟರ್ ಮುರಳಿ ವಿಜಯ್ ಕೂಡ ಆಯ್ಕೆಗಾರರ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದರು. ಆಯ್ಕೆಗಾರರ ನಡುವೆ ಸಂವಹನದ ಕೊರತೆ ಇದೆ. ಅವರು ತಂಡದಿಂದ ಅನುಪಸ್ಥಿತಿಯಲ್ಲಿ ಯಾವುದೇ ಆಟಗಾರನನ್ನು ದೂಷಿಸುವುದಿಲ್ಲ. ಇದರಿಂದಾಗಿ ಆಯ್ಕೆಯ ಮಾನದಂಡ ಏನು ಎಂಬುದು ನಮಗೂ ಗೊತ್ತಿಲ್ಲ ಎಂದು ಮುರಳಿ ವಿಜಯ್ ಹೇಳಿದ್ದರು.
ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಕರುಣ್ ನಾಯರ್ ಟ್ರಿಪಲ್ ಸೆಂಚುರಿ ಬಾರಿಸಿದಾಗ ದೀರ್ಘಾವಧಿಯವರೆಗೆ ಟೀಮ್ ಇಂಡಿಯಾದಲ್ಲಿ ಇರುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅದನ್ನು ನೋಡಲು ಸಾಧ್ಯವಾಗಲಿಲ್ಲ.
ತ್ರಿಶತಕ ಬಾರಿಸಿದ ಬಳಿಕ ಕರುಣ್ ಅವರನ್ನು ತಂಡದಿಂದ ಕೈಬಿಡಲಾಯಿತು. ಟೀಮ್ ಇಂಡಿಯಾದ ಅಂದಿನ ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಅವರನ್ನು ತಂಡದಿಂದ ಕೈಬಿಡಲು ಬಯಸದ ಕಾರಣ ಇದು ನಡೆದಿರಬಹುದು.
ಅಜಿಂಕ್ಯ ರಹಾನೆಗೆ ಅವಕಾಶ ನೀಡಲು ಕರುಣ್ ನಾಯರ್ ತಂಡದಿಂದ ಕೈ ಬಿಡಲಾಯಿತು. ಒಂದು ವೇಳೆ ಕರುಣ್ ನಾಯರ್ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಿದ್ದರೆ, ಇಷ್ಟೋತ್ತಿಗೆ ಕರುಣ್ ಅವರು ಭಾರತದ ದೊಡ್ಡ ಕ್ರಿಕೆಟ್ ತಾರೆಯಾಗಬಹುದಿತ್ತು.
ಕರುಣ್ ನಾಯರ್ ನವೆಂಬರ್ 2016ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಾದಾರ್ಪಣೆ ಮಾಡಿದ್ದರು. ನಂತರ ಅವರು ಕೊನೆಯ ಬಾರಿಗೆ ಮಾರ್ಚ್ 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದರು.
ಟೀಮ್ ಇಂಡಿಯಾ ಪರ ಕರುಣ್ ತಮ್ಮ ವೃತ್ತಿಜೀವನದಲ್ಲಿ ಕೇವಲ 6 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 62.33 ಸರಾಸರಿಯೊಂದಿಗೆ 374 ರನ್ ಗಳಿಸಿದ್ದಾರೆ.
ಟೆಸ್ಟ್ನಲ್ಲಿ ಅವರ ಗರಿಷ್ಠ ಸ್ಕೋರ್ 303 ರನ್. ಆದಾಗ್ಯೂ, ಅವರ ಅತ್ಯುತ್ತಮ ಪ್ರದರ್ಶನದ ನಂತರ ತಂಡದಲ್ಲಿ ಅವರಿಗೆ ಏಕೆ ಪ್ರಾಮುಖ್ಯತೆ ನೀಡಲಿಲ್ಲ ಎಂದು ನಾಯರ್ ಅವರಿಗೂ ಸ್ವತಃ ತಿಳಿದಿಲ್ಲ.