
ಚಂಡೀಗಢ, ಆಗಸ್ಟ್ 14: ಭಾರತದ ಬ್ಯಾಟ್ಸ್ಮನ್ ಕರುಣ್ ನಾಯರ್ ಅವರು ಕೊರೊನಾವೈರಸ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂಬ ಮಾತನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಕಿಂಗ್ಸ್ ಇಲೆವೆನ್ ಪಂಜಾಬ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸತೀಶ್ ಮೆನನ್ ತಳ್ಳಿ ಹಾಕಿದ್ದಾರೆ. ಕರುಣ್ಗೆ ಕೊರನಾವೇ ಇರಲಿಲ್ಲ ಎಂದು ಮೆನನ್ ಹೇಳಿದ್ದಾರೆ.
ಕರ್ನಾಟಕ ತಂಡದ ಪರ ಆಡುವ ಕರುಣ್ ನಾಯರ್ ಅವರಿಗೆ ಕೆಲ ದಿನಗಳ ಹಿಂದೆ ಕೋವಿಡ್-19 ಪಾಸಿಟಿವ್ ಬಂದಿತ್ತು. ಈಗವರು ಕೊರೊನಾದಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಈ ವಿಚಾರವನ್ನು ಅಲ್ಲಗೆಳೆದಿರುವ ಮೆನನ್, ಕರುಣ್ಗೆ ಸಣ್ಣಗೆ ಜ್ವರ ಕಾಣಿಸಿಕೊಂಡಿತ್ತು. ಅದು ಕೊರೊನಾ ಆಗಿರಲಿಲ್ಲ ಎಂದಿದ್ದಾರೆ.
'ಇದು ಅಸಂಬದ್ಧ. ಇಂಥಹ ವರದಿಗಳಲ್ಲಿ ಯಾವುದೇ ಸತ್ಯಾಂಶಗಳಿಲ್ಲ. ಕರುಣ್ಗೆ ಸಣ್ಣಗೆ ಜ್ವರ ಇತ್ತಷ್ಟೇ. ಕೊರೊನಾಕ್ಕೂ ಇದಕ್ಕೂ ಏನೂ ಸಂಬಂಧವಿರಲಿಲ್ಲ. ಈಗವರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ನಮ್ಮ ಎಲ್ಲಾ ಆಟಗಾರರು ಅವರವರ ಸಿಟಿಗಳಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ,' ಎಂದು ಸತೀಶ್ ಮೆನನ್ ಮಾಹಿತಿ ನೀಡಿದ್ದಾರೆ.
28ರ ಹರೆಯದ ಕರುಣ್ಗೆ ಕೊರೊನಾವೈರಸ್ನಂತ ಯಾವುದೇ ಸೋಂಕು ತಗುಲಿಲ್ಲ. ನಾವು ಎಲ್ಲಾ ಆಟಗಾರರನ್ನು ಗಮನಿಸುತ್ತಿದ್ದೇವೆ ಎಂದು ಮೆನನ್ ಹೇಳಿದ್ದಾರೆ. 13ನೇ ಆವೃತ್ತಿ ಐಪಿಎಲ್ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ನಡೆಯಲಿದೆ.