ಬಹು ವರ್ಷಗಳಿಂದ ಟೀಮ್ ಇಂಡಿಯಾಕ್ಕೆ ಎಂಟ್ರಿ ಪಡೆಯಬೇಕು ಎಂದು ಕನಸು ಕಾಣುತ್ತಿದ್ದ ಕರುಣ್ ನಾಯರ್, ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಹೀಗಾಗಿ ತವರಿನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಅವರನ್ನು ಕೈ ಬಿಡಲಾಗಿದೆ. ಈಗ ಇವರಿಗೆ ಕರ್ನಾಟಕದ ರಣಜಿ ತಂಡದಲ್ಲಿ ಸ್ಥಾನ ನೀಡಲಾಗಿದೆ. ಪ್ರಸಕ್ತ ಸಾಲಿನ ರಣಜಿ ಟ್ರೋಫಿಯ ಮೊದಲ ಪಂದ್ಯ ಅಕ್ಟೋಬರ್ 15 ರಿಂದ ಸೌರಾಷ್ಟ್ರ ವಿರುದ್ಧ ನಡೆಯಲಿದ್ದು, ಈ ಸರಣಿಗೆ ತಂಡವನ್ನು ಪ್ರಕಟಿಸಲಾಗಿದೆ.
ಭಾರತ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಮಗ ಅನ್ವಯ್ ದ್ರಾವಿಡ್ ಅವರು ವಿನೂ ಮಂಕಡ್ ಟ್ರೋಫಿಯಲ್ಲಿ ಕರ್ನಾಟಕದ ತಂಡದ ನಾಯಕತ್ವವನ್ನು ನೀಡಲಾಗಿದೆ. ಈ ಟೂರ್ನಿಯ ಮೊದಲ ಪಂದ್ಯ ಅಕ್ಟೋಬರ್ 9 ರಿಂದ 17 ರವರೆಗೆ ಡೆಹ್ರಾಡೂನ್ನಲ್ಲಿ ನಡೆಯಲಿದೆ. ಕಳೆದ ಋತುವಿನಲ್ಲಿ ಇವರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಹೆಚ್ಚು ರನ್ ಕಲೆ ಹಾಕಿದ ಹಿರಿಮೆ ಹೊಂದಿದ್ದಾರೆ.

ಕರ್ನಾಟಕ ತಂಡ ಪ್ರಸಕ್ತ ರಣಜಿ ಟೂರ್ನಿಯಲ್ಲಿ ಎಲೈಟ್ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ವೇಳೆ ಗೋವಾ, ಕೇರಳ, ಮಹಾರಾಷ್ಟ್ರ, ಚಂಡೀಗರ್, ಮಧ್ಯಪ್ರದೇಶ, ಪಂಜಾಬ್ ತಂಡದ ವಿರುದ್ಧ ಲೀಗ್ ಹಂತದಲ್ಲಿ ಕಾದಾಟ ನಡೆಸಲಿದೆ.
ಕಳೆದ ಆವೃತ್ತಿಯ ರಣಜಿ ಟ್ರೋಫಿಯಲ್ಲಿ ವಿದರ್ಭ ತಂಡದ ಪರ ಬ್ಯಾಟ್ ಮಾಡಿದ್ದ ಕರುಣ್ ನಾಯರ್, ಈಗ ಮತ್ತೆ ತವರು ತಂಡವನ್ನು ಸೇರಿದ್ದಾರೆ. ಇನ್ನು ಮಯಾಂಕ್ ಅಗರ್ವಾಲ್ ಅವರ ಮುಂದಾಳತ್ವದಲ್ಲಿ ಕರ್ನಾಟಕ ತಂಡ ಕಣಕ್ಕೆ ಇಳಿಯಲಿದೆ. ಹಲವು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಇನ್ನು ಕರುಣ್ ನಾಯರ್ ಕಳೆದ ವರ್ಷ ಅಬ್ಬರದ ಪ್ರದರ್ಶನ ನೀಡಿದ್ದರು. ಇವರು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಒಟ್ಟು 120 ಪಂದ್ಯಗಳನ್ನು ಆಡಿದ್ದು 8675 ರನ್ ಕಲೆ ಹಾಕಿದ್ದಾರೆ. ಈ ವೇಳೆ 24 ಶತಕ ಹಾಗೂ 37 ಅರ್ಧಶತಕಗಳು ಸೇರಿವೆ.
ಕರ್ನಾಟಕದ ರಣಜಿ ಟ್ರೋಫಿ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಕರುಣ್ ನಾಯರ್, ಆರ್.ಸ್ಮರಣ್, ಕೆ.ಎಲ್. ಶ್ರೀಜಿತ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ವಿಶಾಕ್ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ, ಎಂ.ವೆಂಕಟೇಶ್, ನಿಕ್ಕಿನ್ ಜೋಸ್, ಅಭಿನವ್ ಮನೋಹರ್, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ಕೆ.ವಿ. ಅನೀಶ್, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ.
ಕರ್ನಾಟಕದ ವಿನೂ ಮಂಕಡ್ ಟ್ರೋಫಿ ತಂಡ: ಅನ್ವಯ್ ದ್ರಾವಿಡ್ (ನಾಯಕ, ವಿಕೆಟ್ ಕೀಪರ್), ನಿತೀಶ್ ಆರ್ಯ, ಆದರ್ಶ್ ಡಿ. ಉರ್ಸ್, ಎಸ್.ಮಣಿಕಾಂತ್ (ಉಪನಾಯಕ), ಪ್ರಣೀತ್ ಶೆಟ್ಟಿ, ವಾಸವ ವೆಂಕಟೇಶ್, ಅಕ್ಷತ್ ಪ್ರಭಾಕರ್, ಸಿ.ವೈಭವ್, ಕುಲದೀಪ್ ಸಿಂಗ್ ಪುರೋಹಿತ್, ರತನ್ ಬಿ.ಆರ್., ವೈಭವ್ ಶರ್ಮಾ, ಕೆ.ಎ. ತೇಜಸ್, ಅಥರ್ವ ಮಾಳವೀಯ, ಸನ್ನಿ ಕಾಂಚಿ, ರೆಹಾನ್ ಮೊಹಮ್ಮದ್ (ವಿಕೆಟ್ ಕೀಪರ್)