ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿ ವಿದರ್ಭ ತಂಡವನ್ನು ಫೈನಲ್ಗೆ ಕೊಂಡೊಯ್ದಿದ್ದ ಕರುಣ್ ನಾಯರ್, ರಣಜಿ ಟೂರ್ನಿಯಲ್ಲೂ ತಮ್ಮ ಅಮೋಘ ಫಾರ್ಮ್ ಮುಂದುವರೆಸಿದ್ದಾರೆ. ತವರಿನ ಅಂಗಳದಲ್ಲಿ ತಮಿಳುನಾಡು ವಿರುದ್ಧ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವಿದರ್ಭ ದಿನದಾಟದಂತ್ಯಕ್ಕೆ 6 ವಿಕೆಟ್ಗೆ 264 ರನ್ ಸಿಡಿಸಿ ಉತ್ತಮ ಸ್ಥಿತಿಯಲ್ಲಿದೆ. ಕರುಣ್ ನಾಯರ್ ತಮಿಳುನಾಡುವ ವಿರುದ್ಧ ಮಹತ್ವದ ಪಂದ್ಯದಲ್ಲಿ ಶತಕ ಬಾರಿಸಿದರು.
ವಿದರ್ಭ ತಂಡದ ಭರವಸೆಯ ಟಾಪ್ ಆರ್ಡರ್ ಬ್ಯಾಟರ್ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. 44 ರನ್ ಆಗುವಷ್ಟರಲ್ಲಿ 3 ಟಾಪ್ ಆರ್ಡರ್ ಆಟಗಾರರು ಪೆವಿಲಿಯನ್ ಸೇರಿ ಆಗಿತ್ತು. ಈ ವೇಳೆ ತಂಡಕ್ಕೆ ಆಧಾರವಾದವರು ಕರುಣ್ ನಾಯರ್, ಡ್ಯಾನಿಶ್ ಮಾಲೆವಾರ್ ಜೋಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ ಮಿಡ್ಲ್ ಓವರ್ಗಳಲ್ಲಿ ವಿಕೆಟ್ ಬೀಳದಂತೆ ನೋಡಿಕೊಂಡಿತು. ಸುಮಾರು 30 ಓವರ್ ನೆಲಕಚ್ಚಿ ನಿಂತು ಆಡಿದ ಭರವಸೆಯ ಆಟಗಾರರು 98 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಡ್ಯಾನಿಶ್ ಮಾಲೆವಾರ್ 119 ಎಸೆತಗಳಲ್ಲಿ 13 ಬೌಂಡರಿ ಸೇರಿದಂತೆ 75 ರನ್ ಗಳಿಸಿದ್ದಾಗ ವಿಜಯ್ ಶಂಕರ್ ತೋಡಿದ ಖೆಡ್ಡಾಗೆ ಬಲಿಯಾದರು. ಮಧ್ಯಮ ಕ್ರಮಾಂಕದಲ್ಲಿ ಯಶ್ ರಾಥೋಡ್ 13 ರನ್ಗಳಿಗೆ ಆಟ ಮುಗಿಸಿದರು. ಈ ವೇಳೆ ಕ್ರೀಸ್ಗೆ ನಾಯಕ ಅಕ್ಷಯ್ ವಾಡ್ಕರ್ ಬಂದರು. ಇವರು ಕರುಣ್ ನಾಯರ್ ಅವರೊಂದಿಗೆ ಸೇರಿಕೊಂಡು ತಂಡಕ್ಕೆ ಆಧಾರವಾದರು. ಈ ಜೋಡಿ 64 ರನ್ ಸೇರಿಸಿತು. ಈ ವೇಳೆ ಅಕ್ಷಯ್ ಇಲ್ಲದ ಹೊಡೆತಕ್ಕೆ ಮುಂದಾಗಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದರು.
ಕರುಣ್ ನಾಯರ್ ಮಹತ್ವದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 180 ಎಸೆತಗಳನ್ನು ಎದುರಿಸಿ ಅಜೇಯ 100 ರನ್ ಸಿಡಿಸಿದರು. ಇವರ ಮನಮೋಹಕ ಇನಿಂಗ್ಸ್ನಲ್ಲಿ 14 ಬೌಂಡರಿ, 1 ಸಿಕ್ಸರ್ ಸೇರಿವೆ. ಎರಡನೇ ದಿನಕ್ಕೆ ಕರುಣ್ ನಾಯರ್ ಜೊತೆಗೆ ಹರ್ಷಾ ದುಬೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿದರೂ ಕರುಣ್ ನಾಯರ್ ಅವರನ್ನು ಟೀಮ್ ಇಂಡಿಯಾಕ್ಕೆ ಸೇರಿಸಿಕೊಳ್ಳುವಲ್ಲಿ ಆಯ್ಕೆ ಸಮಿತಿ ವಿಫಲವಾಗಿದೆ. ಸತತ ಏಳು ವರ್ಷಗಳಿಂದ ಟೀಮ್ ಇಂಡಿಯಾದಿಂದ ದೂರ ಉಳಿದಿರುವ ಕರುಣ್ ಮತ್ತೊಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇವರು ದೇಶೀಯ ಏಕದಿನ ಟೂರ್ನಿಯಲ್ಲಿ ಗರಿಷ್ಠ ರನ್ ಸಾಧನೆ ಮಾಡಿ ಮಿಂಚಿದ್ದರು.
ಇವರ ಫಾರ್ಮ್ ಕಂಡು ಈ ಬಾರಿ ಇವರನ್ನು ಟೀಮ್ ಇಂಡಿಯಾಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿದುಕೊಂಡಿದ್ದರು. ಆದರೆ ಎಲ್ಲರ ಆಸೆಗೆ ಪೆಟ್ಟು ಬಿದ್ದಿದ್ದು, ಕರುಣ್ ನಾಯರ್ ಅವರನ್ನು ಇಂಗ್ಲೆಂಡ್ ವಿರುದ್ಧ ಏಕದಿನ ಹಾಗೂ ಚಾಂಪಿಯನ್ಸ್ ಟ್ರೋಫಿ ತಂಡದಲ್ಲೂ ಸ್ಥಾನ ನೀಡಲಿಲ್ಲ. ಇದರಿಂದ ಆಯ್ಕೆ ಸಮಿತಿಯ ನಡೆಯ ವಿರುದ್ಧ ಹಲವು ಪ್ರಶ್ನೆಗಳನ್ನು ಮಾಜಿ ಆಟಗಾರರು ಮಾಡಿದ್ದರು.