ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿದೆ. ಈ ಲೀಗ್ನಲ್ಲಿ ಹಲವು ಸ್ಟಾರ್ ಆಟಗಾರರು ತಮ್ಮ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದಾರೆ. ಇದೇ ವೇಳೆ ರಾಷ್ಟ್ರೀಯ ಹಾಗೂ ದೇಶೀಯ ಆಟಗಾರರು ಸಹ ಕಣಕ್ಕೆ ಇಳಿದಿದ್ದಾರೆ. ಇನ್ನು ಹಲವು ಆಟಗಾರರು ಆ ಒಂದು ಅವಕಾಶಕ್ಕಾಗಿ ಕಾಯುತ್ತಲೇ ಇದ್ದಾರೆ. ಇಂತಹ ಆಟಗಾರರ ಸಾಲಿನಲ್ಲಿ ಕಾಣಿಸಿಕೊಳ್ಳುವ ಆಟಗಾರ ಕರುಣ್ ನಾಯರ್. ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಡಗೌಟ್ನಲ್ಲಿ ಕುಳಿತಿದ್ದಾರೆ.
ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೂರನೇ ಪಂದ್ಯವನ್ನು ಅಡಲು ಮೈದಾನಕ್ಕೆ ಇಳಿದಾಗ ಕನ್ನಡಿಗರಲ್ಲಿ ಹೊಸ ನಿರೀಕ್ಷೆಗಳು ಹುಟ್ಟಿಕೊಂಡಿದ್ದವು. ಈ ಬಾರಿ ಕನ್ನಡಿಗ ಕರುಣ್ ನಾಯರ್ಗೆ ಅವಕಾಶ ಸಿಗಬಹುದು ಎಂದು. ಆದರೆ ಅಭಿಮಾನಿಗಳ ಆಸೆ ಹುಸಿಯಾಗಿದೆ. ಕರುಣ್ ನಾಯರ್ ಕಾಯುವಿಕೆ ಮುಂದುವರೆದಿದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇವರನ್ನು ಖರೀದಿ ಮಾಡಿತ್ತು. ಆದರೆ ಇನ್ನು ಇವರಿಗೆ ಅವಕಾಶ ನೀಡುತ್ತಿಲ್ಲ ಎಂಬ ಬೇಸರ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಬಳಿಕ ಇವರಿಗೆ ಇಂಗ್ಲೆಂಡ್ ವಿರುದ್ಧ ಹಾಗೂ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಆಗಲೂ ಕರುಣ್ ನಯ್ಯರ್ಗೆ ನಿರಾಸೆ ಕಾದಿತ್ತು. ಆಗ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಮುಂದಿನ ದಿನಗಳಲ್ಲಿ ಅವರ ಪ್ರತಿಭೆಗೆ ಮಣೆ ಹಾಕಲಾಗುವುದು ಎಂದು ತಿಳಿಸಿದ್ದರು. ಅದರಂತೆ ಕರುಣ್ ನಾಯರ್ಗೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡುವ ಅವಕಾಶ ಸಿಬಹುದು ಎಂಬ ಆಶಾ ಭಾವನೆಯಲ್ಲಿ ಅಭಿಮಾನಿಗಳು ಇದ್ದಾರೆ.
ಇಂಗ್ಲೆಂಡ್ ಫ್ಲೈಟ್ ಹತ್ತುವ ಮುನ್ನ ಕರುಣ್ ನಾಯರ್ ತಮ್ಮ ಕ್ಷಮತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಲು ಐಪಿಎಲ್ನ್ನು ವೇದಿಕೆಯಾಗಿ ಬಳಸಿಕೊಳ್ಳುವ ಪ್ಲ್ಯಾನ್ ಮಾಡಿದ್ದರು. ಆದರೆ ಐಪಿಎಲ್ನಲ್ಲಿ ಇನ್ನು ಇವರಿಗೆ ಅವಕಾಶ ಸಿಗುತ್ತಿಲ್ಲ. ದೇಶೀಯ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದ ಆಟಗಾರನನ್ನು ಕಡೆಗಣನೆ ಮಾಡುತ್ತಿದ್ದಾರೆ.
ಕರುಣ್ ನಾಯರ್ ದೇಶೀಯ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದ ಆಟಗರ. ವಿಜಯ್ ಹಜಾರೆ ಟೂರ್ನಿಯಲ್ಲಿ ಆಡಿದ 9 ಪಂದ್ಯಗಳಲ್ಲಿ 389ರ ಸರಾಸರಿಯಲ್ಲಿ 779 ರನ್ ಕಲೆ ಹಾಕಿ ಮಿಂಚಿದ್ದರು. ಈ ವೇಳೆ ಇವರ ಬ್ಯಾಟ್ನಿಂದ 5 ಶತಕ ಹಾಗೂ 1 ಅರ್ಧಶತಕ ಬಂದಿವೆ. ಕರುಣ್ ತಮ್ಮ ಕ್ಲಾಸಿಕ್ ಫಾರ್ಮ್ನ್ನು ರಣಜಿ ಟೂರ್ನಿಯಲ್ಲೂ ಮುಂದುವರೆಸಿದ್ದಾರೆ. ಇವರು ಪ್ರಸಕ್ತ ರಣಜಿ ಟೂರ್ನಿಯಲ್ಲಿ ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರ ಮನಮೋಹಕ ಆಟ ವಿದರ್ಭ ರಣಜಿ ಚಾಂಪಿಯನ್ ಆಗಲು ನೆರವಾಗಿತ್ತು. ಕರುಣ್ ಆಡಿದ 9 ರಣಜಿ ಪಂದ್ಯಗಳಲ್ಲಿ 53ರ ಸರಾಸರಿಯಲ್ಲಿ 863 ರನ್ ಸಿಡಿಸಿದ್ದಾರೆ. ಇದರಲ್ಲಿ 4 ಶತಕ ಹಾಗೂ 2 ಅರ್ಧಶತಕಗಳು ಸಹ ಸೇರಿವೆ.