
ಬೆಂಗಳೂರು, ಸೆಪ್ಟೆಂಬರ್ 9: ಕರ್ನಾಟಕ ಚಲನ ಚಿತ್ರ ಕಪ್ 2018 ಟೂರ್ನಿಯ ಹೊಯ್ಸಳ ಈಗಲ್ಸ್ ಮತ್ತು ಕದಂಬ ಲಯನ್ಸ್ ತಂಡಗಳ ಮುಖಾಮುಖಿಯಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಕದಂಬ ಲಯನ್ಸ್ 23 ರನ್ ಜಯ ಗಳಿಸಿದೆ. ಸ್ಟಾರ್ ಆಟಗಾರ ವೀರೇಂದ್ರ ಸೆಹ್ವಾಗ್ 46 ರನ್ ಕೊಡುಗೆ ಲಯನ್ಸ್ ಗೆಲುವಿಗೆ ಕಾರಣವಾಯ್ತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಕದಂಬ ಲಯನ್ಸ್ ಪರ ಸೆಹ್ವಾಗ್ ಕೇವಲ 17 ಎಸೆತಗಳಲ್ಲಿ 46 ರನ್ ಸಿಡಿಸಿದ್ದು ತಂಡ 117 ರನ್ ಸೇರಿಸಲು ನೆರವಾಯಿತು. ರಿಯಲ್ ಸ್ಟಾರ್ ಉಪೇಂದ್ರ ಬಳಗ ಹೊಯ್ಸಳ ಈಗಲ್ಸ್ ತಂಡ 94 ರನ್ ಪೇರಿಸಿ ಶರಣಾಯಿತು.
ಕದಂಬ ಲಯನ್ಸ್ ತಂಡ 10 ಓವರ್ ಗಳಲ್ಲಿ 2 ವಿಕೆಟ್ ಕಳೆದು 117 ರನ್ ಪೇರಿಸಿತ್ತು. ಚೇಸಿಂಗ್ ಗೆ ಇಳಿದ ಹೊಯ್ಸಳ ಈಗಲ್ಸ್ ಗೆ ಸ್ಟಾರ್ ಆಟಗಾರ ದಕ್ಷಿಣ ಆಫ್ರಿಕಾದ ಹರ್ಷೆಲ್ ಗಿಬ್ಸ್ ರನ್ ನೆರವು ಮಾತ್ರ ಲಭಿಸಿತು. ಗಿಬ್ಸ್ 19 ಎಸೆತಗಳಿಗೆ 35 ರನ್ ಸೇರಿಸಿದರು.
ಈಗಲ್ಸ್ ತಂಡ 10 ಓವರ್ ಗಳಲ್ಲಿ 7 ವಿಕೆಟ್ ಕಳೆದು 94 ರನ್ ಪೇರಿಸುವುದರೊಂದಿಗೆ ಸೋಲೊಪ್ಪಿಕೊಂಡಿತು. ಅಜಿತ್ ಜಯರಾಜ್ ಅವರು 16 ರನ್ ಗೆ ಈಗಲ್ಸ್ 2 ವಿಕೆಟ್ ಕಬಳಿಸಿದರು. ಇಂದು (ಸೆಪ್ಟೆಂಬರ್ 9) ಅಂತಿಮ ಪಂದ್ಯದಲ್ಲಿ ಗಣೇಶ್ ನಾಯಕತ್ವದ ಒಡೆಯರ್ ಚಾರ್ಜರ್ಸ್ ಮತ್ತು ಯಶ್ ಮುಂದಾಳತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ಸೆಣಸಾಡಲಿವೆ.