
ಬೆಂಗಳೂರು, ಸೆಪ್ಟೆಂಬರ್ 9: ಕುತೂಹಲಕಾರಿ ಕರ್ನಾಟಕ ಚಲನ ಚಿತ್ರ ಕಪ್ 2018 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಕಿಂಗ್ ಸ್ಟಾರ್ ಯಶ್ ನಾಯಕತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ಎದುರು ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ ಒಡೆಯರ್ ಚಾರ್ಜರ್ಸ್ ತಂಡ 6 ವಿಕೆಟ್ ಜಯ ಸಾಧಿಸಿದೆ.
ಸ್ಟಾರ್ ಆಟಗಾರ ಶ್ರೀಲಂಕಾದ ತಿಲಕರತ್ನೆ ದಿಲ್ಶನ್ ಅವರ ಆಲ್ ರೌಂಡರ್ ಆಟದ ನೆರವಿನಿಂದ ಒಡೆಯರ್ ಚಾರ್ಜರ್ಸ್ ರೋಜಕ ಗೆಲುವು ತನ್ನದಾಗಿಸಿಕೊಂಡಿತು. ದಿಲ್ಶನ್ ಅರ್ಧ ಶತಕ (68/31) ರನ್ ನೊಂದಿಗೆ 3 ವಿಕೆಟ್ ಪಡೆದು ಪಂದ್ಯದಲ್ಲಿ ಮಿಂಚಿದರು.
ರಾಷ್ಟ್ರಕೂಟ ಪ್ಯಾಂಥರ್ಸ್ ತಂಡ ಒಡೆಯರ್ ಚಾರ್ಜರ್ಸ್ ತಂಡಕ್ಕೆ 123 ರನ್ ಗುರಿ ನೀಡಿತ್ತು. ಸ್ಟಾರ್ ಆಟಗಾರ ಒವೇಶ್ ಷಾ ಅವರ ಭರ್ಜರಿ ಬ್ಯಾಟಿಂಗ್, ಎದುರಾಳಿಗೆ ಸವಾಲಿನ ಮೊತ್ತ ನೀಡುವಲ್ಲಿ ನೆರವಾಯಿತು. ಗುರಿ ಬೆನ್ನಟ್ಟಿದ ಚಾರ್ಜರ್ಸ್ 10 ಓವರ್ ಗೆ 4 ವಿಕೆಟ್ ಕಳೆದು 127 ರನ್ ಪೇರಿಸಿತು.
ಚಾರ್ಜರ್ಸ್ ಗೆಲುವಿಗೆ ಕೊನೆಯ ಎಸೆತಕ್ಕೆ 2 ರನ್ ಅಗತ್ಯವಿತ್ತು. ಹೀಗಾಗಿ ಪಂದ್ಯ ಸೂಪರ್ ಓವರ್ ನತ್ತ ತಿರುಗುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ಒಡೆಯರ್ ಚಾರ್ಜರ್ಸ್ ನ ರಿತೇಶ್ ಭಟ್ಕಳ್ ಕೊನೆಯ ಎಸೆತಕ್ಕೆ ಸಿಕ್ಸ್ ಚಚ್ಚಿ ಮ್ಯಾಚ್ ಫಿನಿಷರ್ ಎನಿಸಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ರಾಷ್ಟ್ರಕೂಟ ಪ್ಯಾಂಥರ್ಸ್ ನಿಂದ ಷಾ ಕೇವಲ 11 ಎಸೆತಗಳಿಗೆ ಅಜೇಯ 42 ರನ್ ಸೇರಿಸಿದರು. ಷಾ ರನ್ ನೆರವು ಬಿಟ್ಟರೆ ಎಸ್ ಹೂವರ್ 33, ರಾಜೀವ್ 14, ಕೃಷ್ಣ 19 ರನ್ ಕೊಡುಗೆ ನೀಡಿದರು. ಹೀಗಾಗಿ ತಂಡ 10 ಓವರ್ ಗಳಲ್ಲಿ 6 ವಿಕೆಟ್ ಕಳೆದು 122 ರನ್ ಪೇರಿಸಿತು.
ಪ್ಯಾಂಥರ್ಸ್ ಇನ್ನಿಂಗ್ಸ್ ವೇಳೆ ಚಾರ್ಜರ್ಸ್ ನ ಸ್ಟಾರ್ ಆಟಗಾರ ತಿಲಕರತ್ನೆ ದಿಲ್ಶನ್ ಕೇವಲ 1 ರನ್ ಗೆ 3 ವಿಕೆಟ್ ಉರುಳಿಸಿದರು. ಪ್ರಸನ್ನ, ರಿತೇಶ್ ಭಟ್ಕಳ್ ಮತ್ತು ಪ್ರತಾಪ್ ಅವರು ತಲಾ ಒಂದೊಂದು ವಿಕೆಟ್ ಪಡೆದರು.