
ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಿಗೆ ಅದ್ಧೂರಿ ತೆರೆ ಬಿದ್ದಿದೆ. ಎರಡು ದಿನಗಳ ಕಾಲ ನಡೆದ ಚಿತ್ರರಂಗದ ಕ್ರಿಕೆಟ್ ಹಬ್ಬವನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ.
ಕನ್ನಡ ಚಲನಚಿತ್ರ ಕಪ್ ಮೂರನೇ ಆವೃತ್ತಿಯಲ್ಲಿ ಗಂಗಾ ವಾರಿಯರ್ಸ್ ತಂಡ ಚಾಂಪಿಯನ್ ಆಗಿದೆ. ಫೈನಲ್ ಪಂದ್ಯದಲ್ಲಿ ವಿಜಯನಗರ ಪ್ಯಾಟ್ರಿಯಾಟ್ಸ್ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಫೈನಲ್ ಪಂದ್ಯದಲ್ಲಿ ಭಾರತ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಅಬ್ಬರಿಸಿದರು. ಆಲ್ರೌಂಡರ್ ಆಟದ ಮೂಲ ಗಂಗಾ ವಾರಿಯರ್ಸ್ ತಂಡಕ್ಕೆ ಸುಲಭದ ಜಯ ತಂದುಕೊಟ್ಟರು.
ಮೊದಲು ಬ್ಯಾಟ್ ಮಾಡಿದ ವಿಜಯನಗರ ಪ್ಯಾಟ್ರಿಯಾಟ್ಸ್ ತಂಡ 10 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 81 ರನ್ ಕಲೆಹಾಕಿತು. ವಿಜಯನಗರ ಪ್ಯಾಟ್ರಿಯಾಟ್ಸ್ ಪರವಾಗಿ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗೆ ಹರ್ಷಲ್ ಗಿಬ್ಸ್ ಕಣಕ್ಕಿಳಿದಿದ್ದರು. 11 ಎಸೆತಗಳಲ್ಲಿ 24 ರನ್ ಗಳಿಸುವ ಮೂಲಕ ಅವರು ಗಮನ ಸೆಳೆದರು. ಸುರೇಶ್ ರೈನಾ 1 ಓವರ್ ಬೌಲಿಂಗ್ ಮಾಡಿ 3 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು.

ಚಿನ್ನಸ್ವಾಮಿ ಅಂಗಳದಲ್ಲಿ ಅಬ್ಬರಿಸಿದ ರೈನಾ
ಸವಾಲಿನ ಮೊತ್ತವನ್ನು ಬೆನ್ನತ್ತಿದ ಗಂಗಾ ವಾರಿಯರ್ಸ್ ತಂಡಕ್ಕೆ ಸುರೇಶ್ ರೈನಾ ಸುಲಭದ ಜಯ ತಂದುಕೊಟ್ಟರು. ಕೇವಲ 29 ಎಸೆತಗಳಲ್ಲಿ ಅಜೇಯ 54 ರನ್ ಗಳಿಸಿದ ರೈನಾ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸಿದರು.
7.1 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿಯನ್ನು ಬೆನ್ನತ್ತುವ ಮೂಲಕ ಗಂಗಾ ವಾರಿಯರ್ಸ್ ಎರಡನೇ ಬಾರಿಗೆ ಕೆಸಿಸಿ ಕಪ್ ಗೆದ್ದು ಸಂಭ್ರಮಿಸಿತು.
ಕೆಸಿಸಿ 2023ರ ಆವೃತ್ತಿಯಲ್ಲಿ ಒಟ್ಟು 6 ತಂಡಗಳು ಎರಡು ದಿನಗಳ ಕಾಲ ಕಪ್ಗಾಗಿ ರೋಚಕ ಹಣಾಹಣಿ ನಡೆಸಿದವು. ಸಿನಿಮಾ ತಾರೆಯರ ಜೊತೆ ಕ್ರಿಕೆಟ್ ತಾರೆಯರು ಸಮಾಗಮವಾಗಿದ್ದು ಪಂದ್ಯದ ರೋಚಕತೆಯನ್ನು ಹೆಚ್ಚಿಸಿತ್ತು.
ಕ್ರಿಸ್ ಗೇಲ್, ಸುರೇಶ್ ರೈನಾ, ಹರ್ಷಲ್ ಗಿಬ್ಸ್, ಎಸ್ ಬದ್ರಿನಾಥ್, ತಿಲಕರತ್ನೆ ದಿಲ್ಷಾನ್ರಂತಹ ದಿಗ್ಗಜ ಕ್ರಿಕೆಟಿಗರ ಜೊತೆ ಚಲನಚಿತ್ರ ತಾರೆಗಳಾದ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಡಾಲಿ ಧನಂಜಯ, ಧೃವ ಸರ್ಜಾ, ಗಣೇಶ್, ಡಾರ್ಲಿಂಗ್ ಕೃಷ್ಣ ಸೇರಿದಂತೆ ಹಲವು ಕಲಾವಿದರು ಭಾಗವಹಿಸಿದ್ದರು.