ಡಿಸೆಂಬರ್ 23ರಿಂದ 25ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕನ್ನಡ ಚಲನಚಿತ್ರ ಕಪ್ (ಕೆಸಿಸಿ) ಪಂದ್ಯಾವಳಿಗೆ ತೆರೆ ಬಿದ್ದಿದೆ.
ಫೈನಲ್ ಪಂದ್ಯದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ ಗಂಗಾ ವಾರಿಯರ್ಸ್ ತಂಡವು ಶಿವರಾಜ್ಕುಮಾರ್ ನಾಯಕತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡವನ್ನು ಸೋಲಿಸಿ ಈ ಬಾರಿಯೂ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಈ ಪಂದ್ಯಾವಳಿಯಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟರು, ಧಾರಾವಾಹಿ ನಟರು, ತಂತ್ರಜ್ಞರ ಜೊತೆ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗರು ಕೂಡ ಆಡಿದರು.
ರಾಬಿನ್ ಉತ್ತಪ್ಪ, ಸುರೇಶ್ ರೈನಾ, ಹರ್ಷಲ್ ಗಿಬ್ಸ್, ತಿಲಕರತ್ನೆ ದಿಲ್ಷಾನ್, ವಿಜಯ್, ಎಸ್ ಬದ್ರಿನಾಥ್ ಮತ್ತು ವಿಜಯ್ ಭಾರಧ್ವಾಜ್ ಕೂಡ ಸಿನಿಮಾ ತಾರೆಯರ ಜೊತೆ ಆಡಿದ್ದು, ನೆರೆದಿದ್ದ ಕ್ರಿಕೆಟ್ ಮತ್ತು ಸಿನಿಮಾ ಅಭಿಮಾನಿಗಳಿಗೆ ರೋಚಕತೆ ತಂದುಕೊಟ್ಟಿತ್ತು. ಫೈನಲ್ನಲ್ಲಿ ಶಿವರಾಜ್ಕುಮಾರ್, ಗಣೇಶ್ ಉತ್ತಮ ಬೌಲಿಂಗ್ ಮೂಲಕ ಗಮನ ಸೆಳೆದರು.
ರನ್ನರ್-ಅಪ್ ತಂಡವಾದ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡದ ನಾಯಕ ಶಿವಣ್ಣ ತಮ್ಮ ಎಂದಿನ ಉತ್ಸಾಹದಿಂದ ಹುರಿದುಂಬಿಸಿದರು. ಅವರ ತಂಡದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕೂಡ ಇದ್ದರು. ಅಲ್ಲದೆ, ಕದಂಬ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಶಿವರಾಜ್ಕುಮಾರ್ ಬೌಲಿಂಗ್ನಲ್ಲಿ ಭಾರತ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಔಟಾದ ವಿಡಿಯೋ ಸಕತ್ ವೈರಲ್ ಆಗಿದೆ.

ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಎಲ್ಲಿರುತ್ತಾರೋ, ಅಲ್ಲಿ ಯಾವಾಗಲೂ ಹೆಚ್ಚಿನ ಉತ್ಸಾಹ, ಜೋಶ್, ಎನರ್ಜಿ ಇದ್ದೇ ಇರುತ್ತದೆ. ಅವರ ವಯಸ್ಸು 61 ಆಗಿದ್ದರೂ ಮೈದಾನದಲ್ಲಿ ಹದಿಹರೆಯದವರಂತೆ ಓಡಾಡಿದರು. ಅಲ್ಲದೆ, ಬೌಲಿಂಗ್, ಫೀಲ್ಡಿಂಗ್ ಮಾಡಿದರು. ಮೈದಾನದಲ್ಲೇ ಚಂದನ್ ಶೆಟ್ಟಿ ಜೊತೆ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡಿದರು.
ಇನ್ನು ಕದಂಬ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಶಿವರಾಜ್ಕುಮಾರ್ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರ ವಿಕೆಟ್ ಕಿತ್ತು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಅವರು ಸಂಭ್ರಮಿಸಿದ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ.
ಶಿವಣ್ಣ ಅವರ ಮಾರಕ ಬೌಲಿಂಗ್ ನೋಡಿದ ಅಭಿಮಾನಿಗಳು, ಆರ್ಸಿಬಿ ಫ್ರಾಂಚೈಸಿಗೆ ಒಂದು ಸಲಹೆ ನೀಡಿದ್ದಾರೆ. ಕಡೇ ಪಕ್ಷ ಶಿವಣ್ಣನನ್ನಾದ್ರೂ ಆರ್ಸಿಬಿ ತಂಡಕ್ಕೆ ತೆಗೆದುಕೊಳ್ಳಿ ಎಂದು ಒತ್ತಾಯಿಸಿದ್ದಾರೆ.
2024ರ ಐಪಿಎಲ್ ಮಿನಿ ಹರಾಜಿನಲ್ಲಿ ಆರ್ಸಿಬಿ ಲಾಕಿ ಫರ್ಗ್ಯುಸನ್, ಯಶ್ ದಯಾಳ್, ಅಲ್ಜಾರಿ ಜೋಸೆಫ್ ಅವರಂತಹ ಬೌಲರ್ಗಳನ್ನು ಖರೀದಿಸಿದೆ. ಆದರೂ ಅಭಿಮಾನಿಗಳು ಆರ್ಸಿಬಿ ಬೌಲಿಂಗ್ ವಿಭಾಗದ ಬಗ್ಗೆ ಆತಂಕದಲ್ಲಿದ್ದಾರೆ.
ಇನ್ನೂ ಒಳ್ಳೆಯ ಬೌಲರ್ಗಳನ್ನು ತಂಡಕ್ಕೆ ಸೇರಿಸಿಕೊಳ್ಳಬೇಕಿತ್ತು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಕೆಸಿಸಿ ಪಂದ್ಯಾವಳಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿವಣ್ಣ ಅವಚರ ಬೌಲಿಂಗ್ ನೋಡಿದ ಅಭಿಮಾನಿಗಳು ಇವರನ್ನಾದ್ರೂ ತಂಡಕ್ಕೆ ಸೇರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಇದಕ್ಕೂ ಮುನ್ನ ರಾಬಿನ್ ಉತ್ತಪ್ಪ ಅವರನ್ನು ಮೈದಾನದಲ್ಲೇ ಅಭಿಮಾನಿಗಳು ಆರ್ಸಿಬಿ ತಂಡಕ್ಕೆ ಬನ್ನಿ ಎಂದು ಕೂಗಿದರು. ಇದಕ್ಕೆ ರಾಬಿನ್ ಉತ್ತಪ್ಪ ಪ್ರತಿಕ್ರಿಯಿಸಿ, ಅವರು ಕರ್ನಾಟಕ ಆಟಗಾರರನ್ನು ತೆಗೆದುಕೊಳ್ಳಲ್ಲ ಎಂದು ಹೇಳಿದ್ದರು. ಈ ವಿಡಿಯೋ ಕೂಡ ವ್ಯಾಪಕವಾಗಿ ವೈರಲ್ ಆಗಿದೆ.