ಸಿನಿಮಾ ಹೊರತಾಗಿ ಇಡೀ ಕನ್ನಡ ಚಿತ್ರರಂಗ ಮತ್ತೊಮ್ಮೆ ಒಗ್ಗಟ್ಟು ಪ್ರದರ್ಶಿಸಿದೆ, ಅದು ಕ್ರಿಕೆಟ್ ಮೂಲಕ. ಸದಾ ಸಿನಿಮಾ, ಧಾರಾವಾಹಿ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದ ಕಲಾವಿದರು ಮತ್ತು ತಂತ್ರಜ್ಞರು ಮೂರು ದಿನಗಳ ಕಾಲ ಕ್ರಿಕೆಟ್ ಆಡಿದರು.
ಬಣ್ಣದ ಲೋಕದ ಸ್ಟಾರ್ಗಳು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸುವುದು ಮಾತ್ರವಲ್ಲದೆ, ಬ್ಯಾಟ್ ಮತ್ತು ಬಾಲ್ನೊಂದಿಗೆ ಮೈದಾನಕ್ಕಿಳಿದು ಕ್ರಿಕೆಟ್ ಆಡಿ ಅಭಿಮಾನಿಗಳನ್ನು ರಂಜಿಸಿದರು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೂರು ದಿನಗಳಾ ಕಾಲ ನಡೆದ 2023ರ ಕರ್ನಾಟಕ ಚಲನಚಿತ್ರ ಕಪ್ (ಕೆಸಿಸಿ) ಸೀಸನ್ 4ರ ಪಂದ್ಯಾವಳಿಯಲ್ಲಿ ಕನ್ನಡ ಸಿನಿಮಾ ತಾರೆಯರು ಜೆರ್ಸಿ ತೊಟ್ಟು ಕಂಗೊಳಿಸಿದರು.
ನಟ ಕಿಚ್ಚ ಸುದೀಪ್ ಮಾರ್ಗದರ್ಶನದಲ್ಲಿ ಶನಿವಾರ, ಡಿಸೆಂಬರ್ 23ರಂದು ಶುರುವಾದ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಾವಳಿಯ 4ನೇ ಆವೃತ್ತಿಗೆ ಸೋಮವಾರ, ಡಿಸೆಂಬರ್ 25ರಂದು ತೆರೆ ಬಿದ್ದಿದೆ.
ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ ಗಂಗಾ ವಾರಿಯರ್ಸ್ ತಂಡವು ಶಿವರಾಜ್ಕುಮಾರ್ (ಶಿವಣ್ಣ) ನಾಯಕತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ವಿರುದ್ಧ ಗೆದ್ದು ಕರ್ನಾಟಕ ಚಲನಚಿತ್ರ ಕಪ್ (ಕೆಸಿಸಿ) ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಸೋಮವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗಂಗಾ ವಾರಿಯರ್ಸ್ ತಂಡವು ನಿಗದಿತ 10 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 111 ರನ್ ಕಲೆಹಾಕಿತು. ಅವಿನಾಶ್ ಕೇವಲ 12 ಎಸೆತಗಳಲ್ಲಿ ಅಜೇಯ 40 ರನ್ ಗಳಿಸುವ ಮೂಲಕ ಬೃಹತ್ ಮೊತ್ತಕ್ಕೆ ನೆರವಾದರು.
112 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡವು ನಿಗದಿತ 10 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 108 ರನ್ಗಳಿಗೆ ನಿಯಂತ್ರಣಗೊಂಡಿತು. ಈ ಮೂಲಕ ಗಂಗಾ ವಾರಿಯರ್ಸ್ 3 ರನ್ಗಳ ರೋಚಕ ಗೆಲುವು ಸಾಧಿಸಿತು ಮತ್ತು ಶಿವರಾಜ್ಕುಮಾರ್ ನಾಯಕತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.
ಪಂದ್ಯಾವಳಿಯುದ್ದಕ್ಕೂ ಆಲ್ರೌಂಡ್ ಪ್ರದರ್ಶನದ ಮೂಲಕ ಅತ್ಯುತ್ತಮ ಆಟವಾಡಿದ ಗಂಗಾ ವಾರಿಯರ್ಸ್ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟಿಗ ಮುರುಳಿ ವಿಜಯ್ ಆಡಿದರು.

ಇನ್ನು ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಾಂಪಿಯನ್ ತಂಡಕ್ಕೆ ಪ್ರಶಸ್ತಿ ವಿತರಿಸಿದರು. ಆ ನಂತರ ಗಂಗಾ ವಾರಿಯರ್ಸ್ ಚಾಂಪಿಯನ್ ಟ್ರೋಫಿಯನ್ನು ದಿವಂಗತ ಪುನೀತ್ ರಾಜ್ಕುಮಾರ್ಗೆ ಅರ್ಪಿಸಿ ಗಮನಸೆಳೆದರು.
ಇನ್ನು ಕಳೆದ ಬಾರಿಯಂತೆ ಈ ಬಾರಿಯೂ ಕೆಸಿಸಿ ಪಂದ್ಯಾವಳಿಯಲ್ಲಿ ಕೆಲವು ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರರೂ ಭಾಗಿಯಾಗಿದ್ದರು.
ಎಸ್ ಬದ್ರಿನಾಥ್ - ಒಡೆಯರ್ ಚಾರ್ಜರ್ಸ್ ತಂಡ
ಸುರೇಶ್ ರೈನಾ - ರಾಷ್ಟ್ರಕೂಟ ಪಾಂಥರ್ಸ್ ತಂಡ
ತಿಲಕರತ್ನೆ ದಿಲ್ಶಾನ್ - ಹೊಯ್ಸಳ ಈಗಲ್ಸ್ ತಂಡ
ಮುರಳಿ ವಿಜಯ್ - ಗಂಗಾ ವಾರಿಯರ್ಸ್ ತಂಡ
ರಾಬಿನ್ ಉತ್ತಪ್ಪ - ಕದಂಬ ಲಯನ್ಸ್ ತಂಡ
ಹರ್ಷ್ವಲ್ ಗಿಬ್ಸ್, ವಿಜಯ್ ಭಾರದ್ವಾಜ್ - ವಿಜಯನಗರ ಪೆಟ್ರಿಯಾಟ್ಸ್ ತಂಡ