
ಬೆಂಗಳೂರು, ಸೆಪ್ಟೆಂಬರ್ 26: ಬೆಂಗಳೂರಿನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಕರ್ನಾಟಕ-ಬರೋಡಾ ತಂಡಗಳ ಮುಖಾಮುಖಿಯಲ್ಲಿ ಬರೋಡಾ ಏಳು ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಕೇದಾರ್ ದೇವಧಾರ್ ಅಮೋಘ ಶತಕ ಮತ್ತು ದೀಪಕ್ ಹೂಡಾ ಅವರ ಅರ್ಧ ಶತಕ ನೆರವಿನಿಂದ ಬರೋಡ ಸುಲಭ ಜಯ ತನ್ನದಾಗಿಸಿಕೊಂಡಿತು.
ಎಲೈಟ್ ಗ್ರೂಪ್ ಎಯ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಕರ್ನಾಟಕಕ್ಕೆ ರವಿ ಕುಮಾರ್ ಶತಕದ (102) ಬೆಂಬಲ ದೊರೆಯಿತು. ಅದು ಬಿಟ್ಟರೆ ಮಯಾಂಕ್ ಅಗರ್ವಾಲ್ 34, ಕರುಣ್ ನಾಯರ್ 37, ಕೃಷ್ಣಪ್ಪ ಗೌತಮ್ 28 ರನ್ ಸೇರಿಸಿದ್ದೇ ಹೆಚ್ಚೆನಿಸಿತು.
ಬ್ಯಾಟ್ಸ್ಮನ್ ಗಳ ಕಳಪೆ ಪ್ರದರ್ಶನದಿಂದಾಗಿ ಕರ್ನಾಟಕ ತಂಡ ಎದುರಾಳಿಗೆ ಗರಿಷ್ಟ ರನ್ ಗುರಿ ನೀಡಲಾಗಲಿಲ್ಲ. 50 ಓವರ್ ನಲ್ಲಿ ವಿನಯ್ ಕುಮಾರ್ ಬಳಗ ಎಲ್ಲಾ ವಿಕೆಟ್ ಕಳೆದು 237 ರನ್ ಪೇರಿಸಿ ಎದುರಾಳಿಗೆ 238 ರನ್ ಗುರಿ ನೀಡಿತ್ತು. ಹೀಗಾಗಿ ಕರ್ನಾಟಕ ಸತತ ಸೋಲನುಭವಿಸುವಂತಾಯ್ತು.
ಬರೋಡಾ ಇನ್ನಿಂಗ್ಸ್ ವೇಳೆ ಮಳೆ ಶುರುವಾದ್ದರಿಂದ ವಿಜೆಡಿ ನಿಯಮಾವಳಿ ಪ್ರಕಾರ ಬರೋಡಕ್ಕೆ 47 ಓವರ್ ಗಳಲ್ಲಿ 227 ರನ್ ಗುರಿ ನೀಡಲಾಗಿತ್ತು. ಚೇಸಿಂಗ್ ಗೆ ಇಳಿದ ಬರೋಡಾಕ್ಕೆ ದೇವಧಾರ್ 123, ದೀಪಕ್ ಹೂಡಾ 62 ರನ್ ಸೇರಿಸಿದರು. ಬರೋಡಾ 43.3 ಓವರ್ ನಲ್ಲಿ 230 ರನ್ ಪೇರಿಸಿ ಗೆಲುವಾಚರಿಸಿತು.