ಬೆಂಗಳೂರು, ಆಗಸ್ಟ್ 18: ಕೇರಳದಲ್ಲಿ ಮಹಾಮಳೆಯಿಂದ ಉಂಟಾದ ಪ್ರವಾಹ ವಿಕೋಪದಿಂದ ಸಂಕಷ್ಟದಲ್ಲಿ ಸಿಲುಕಿರುವ ಜನರಿಗಾಗಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಮನಮಿಡಿದಿದ್ದಾರೆ.
ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಗೌತಮ್ ಗಂಭೀರ್, ಹರ್ಭಜನ್ ಸಿಂಗ್ ಸೇರಿದಂತೆ ಭಾರತದ ಅನೇಕ ಕ್ರಿಕೆಟಿಗರು ಪ್ರವಾಹ ಸಂತ್ರಸ್ತ ಕೇರಳಿಗರಿಗೆ ನೆರವಾಗುವಂತೆ ಮನವಿ ಮಾಡಿಕೊಂಡಿದ್ದಾರೆ.

ಭಾರತದಲ್ಲಿ ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಕೂಡ ಕೇರಳದ ಜನತೆಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.
ನಟ ಸಿದ್ಧಾರ್ಥ್ ಟ್ವಿಟ್ಟರ್ನಲ್ಲಿ ಆರಂಭಿಸಿರುವ #KeralaDonationChallenge ಅಭಿಯಾನಕ್ಕೆ ಎಬಿಡಿ ಕೈಜೋಡಿಸಿದ್ದಾರೆ.
ಕೇರಳದಲ್ಲಿ ಭೀಕರ ಪ್ರವಾಹದಿಂದ ತೊಂದರೆಗೆ ಸಿಲುಕಿರುವ ಜನರ ಪರವಾಗಿ ನನ್ನ ಪ್ರಾರ್ಥನೆ ಇದೆ ಎಂದು ಎಬಿಡಿ ಟ್ವೀಟ್ ಮಾಡಿದ್ದಾರೆ. 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಮತ್ತು 2 ಲಕ್ಷಕ್ಕೂ ಅಧಿಕ ಜನರು ಮನೆಕಳೆದುಕೊಂಡಿದ್ದಾರೆ ಎಂದು ಅವರು ಆಘಾತ ವ್ಯಕ್ತಪಡಿಸಿದ್ದಾರೆ.