
ಕೇರಳ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಸುರೇಶ್ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಂಬ್ರಿ ಎಂದು ತಮ್ಮ ಆಪ್ತ ವಲಯದಲ್ಲಿ ಖ್ಯಾತರಾಗಿದ್ದ ಸುರೇಶ್ ಕುಮಾರ್ ಅವರಿಗೆ 47 ವರ್ಷ ವಯಸ್ಸಾಗಿತ್ತು. ಅಲಪ್ಪುಳದಲ್ಲಿರುವ ತಮ್ಮ ನಿವಾಸದಲ್ಲಿ ನೇಣಿ ಬಿಗಿದುಕೊಂಡು ಕೃತ್ಯವೆಸಗಿದ್ದಾರೆ ಎಂದು ವರದಿಯಾಗಿದೆ.
ಕೇರಳದ ಅಲಪ್ಪುಳ ಜಿಲ್ಲೆಯವರಾದ ಸುರೇಶ್ ಕುಮಾರ್ ಎಡಗೈ ಸ್ಪಿನ್ನರ್ ಆಗಿ ಮಿಂಚಿದ್ದರು. 90ರ ದಶಕದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಅಂಡರ್ 19 ತಂಡವನ್ನು ಪ್ರತಿನಿಧಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲ ಕೇರಳವನ್ನು ಪ್ರತಿನಿಧಿಸಿದ ಮೊದಲ ಆಟಗಾರ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದರು ಸುರೇಶ್ ಕುಮಾರ್. ಆ ಅಂಡರ್ 19 ತಂಡದ ನಾಯಕರಾಗಿದ್ದವರು ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್. ಕೀವಿಸ್ ಪಡೆಯನ್ನು ಸ್ಟೀಫನ್ ಫ್ಲೆಮಿಂಗ್ ಮುನ್ನಡೆಸಿದ್ದರು.
1995-96ರ ರಣಜಿ ಪಂದ್ಯಾವಳಿಯಲ್ಲಿ ರಾಜಸ್ಥಾನದ ವಿರುದ್ಧ ಸುರೇಶ್ ಕುಮಾರ್ ಕೇರಳದ ಪರವಾಗಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದರು. 1994-95ರ ರಣಜಿ ಆವೃತ್ತಿಯಲ್ಲಿ ಕೇರಳ ಮೊದಲ ಬಾರಿಗೆ ರಣಜಿ ಟ್ರೋಫಿ ಗೆಲ್ಲಲು ಸುರೇಶ್ ಕುಮಾರ್ ಪಾತ್ರ ದೊಡ್ಡದಿತ್ತು. 164 ರನ್ಗಳಿಗೆ ಸುರೇಶ್ ಕುಮಾರ್ 12 ವಿಕೆಟ್ ಪಡೆದು ಮಿಂಚಿದ್ದರು.
ಸುರೇಶ್ ಕುಮಾರ್ ಅವರ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಅಲಪ್ಪುಳದಲ್ಲಿರುವ ನಿವಾಸಲ್ಲಿ ನೇಣಿ ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
1991-92ರ ರಣಜಿ ಋತುವಿನಿಂದ ಸುರೇಶ್ ಕುಮಾರ್ ದೇಶೀಯ ಕ್ರಿಕೆಟ್ಗೆ ಪದಾರ್ಪಣೆಯನ್ನು ಮಾಡಿದರು. 2005ರಲ್ಲಿ ಝಾರ್ಖಂಡ್ ವಿರುದ್ಧ ಪಾಲಕ್ಕಾಡ್ನಲ್ಲಿ ನಡೆದ ಪಂದ್ಯದ ಬಳಿಕ ಕ್ರಿಕೆಟ್ಗೆ ವಿದಾಯವನ್ನು ಘೋಷಿಸಿದ್ದಾರೆ. 72 ಪ್ರಥಮದರ್ಜೆ ಕ್ರಿಕೆಟ್ನಲ್ಲಿ ಸುರೇಶ್ ಕುಮಾರ್ 196 ವಿಕೆಟ್ ಪಡೆದುಕೊಂಡಿದ್ದರೆ, 51 ಲಿಸ್ಟ್ ಎ ಪಂದ್ಯಗಳಲ್ಲಿ 52 ವಿಕೆಟ್ ಪಡೆದುಕೊಂಡಿದ್ದಾರೆ. ನಿವೃತ್ತಿಯ ಬಳಿಕ ಸುರೇಶ್ ಕುಮಾರ್ ಭಾರತೀಯ ರೈಲ್ವೇನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.