
ತಿರುವನಂತಪುರಂ, ಜನವರಿ 29: ನಮ್ಮ ನಮ್ಮ ಮದುವೆಯ ದಿನವಿದು ಅಂತಿಟ್ಟುಕೊಳ್ಳೋಣ. ಆಫೀಸು, ಪ್ರಮುಖ ಮೀಟಿಂಗ್, (ಕೆಲವೊಮ್ಮೆ) ಎಕ್ಸಾಮ್ ಏನೇ ಇದ್ದರೂ ಅದರ ಗೊಡವೆಯೇ ಇಲ್ಲದೆ ಮದುವೆ ಮಂಟಪದಲ್ಲಿ ಮದುಮಗಳಿಗೆ ಅಂಟಿ ಕೂತುಬಿಡೋ ಜೋಶಿನೋರು ನಾವು. ಆದರೆ ಇಲ್ಲೊಂದು ಅಪರೂಪದ ಘಟನೆಯಿದೆ.
ಇದಾಗಿದ್ದು ದೇವರನಾಡು ಎಂದು ಕರೆಯಲ್ಪಡುವ ಕೇರಳದಲ್ಲಿ. ಮಳಪ್ಪುರಂ ಸೆವೆನ್ಸ್ ಲೀಗ್ ಟೂರ್ನಿಯಲ್ಲಿನ ಫೀಫಾ ಮಂಜೆರಿ ತಂಡದ ಆಟಗಾರ ರಿದ್ವಾನ್, ಮದುವೆಯ ದಿನವೂ ತಂಡದ ನೆರವಿಗೆ ಧಾವಿಸುವ ಮೂಲಕ ಸುದ್ದಿಯಾಗಿದ್ದಾರೆ. ಇದೇ ಕಾರಣಕ್ಕೆ ರಿದ್ವಾನ್ ಭಾರತದ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಮೆಚ್ಚುಗೆಗೆ ಪಾತ್ರವಾಗಿದೆ.
ಫೀಫಾ ಮಂಜೆರಿ ತಂಡದ ಡಿಫೆಂಡರ್ ರಿದ್ವಾನ್ ಅವರ ಮದುವೆಯ ದಿನ ರಾತ್ರಿ ಮಳಪ್ಪುರಂ 7s ಲೀಗ್ ಕೂಡ ನಡೆಯುತ್ತಿತ್ತು. ಫೀಫಾ ಮಂಜೆರಿ ತಂಡ ಮೈದಾನಕ್ಕಿಳಿದಿತ್ತು. ಆಟದ ವೇಳೆ ತಂಡಕ್ಕೆ ಡಿಫೆಂಡರ್ನ ಅಗತ್ಯ ಬಿತ್ತು, ಅದು ರಿದ್ವಾನ್ ಗಮನಕ್ಕೂ ಬಂತು.

ನಾವಾಗಿದ್ದರೂ ಈ ಅಮೂಲ್ಯ ಒಂದು ದಿನ ಮದುವೆಯೇ ಮುಖ್ಯ. ಇವತ್ತು ಆಟದ ಗುಂಗೇ ಬೇಡ ಅಂದುಕೊಳ್ಳುತ್ತಿದ್ದೆವೋ ಏನೋ. ಆದರೆ ರಿದ್ವಾನ್ ಮದುವೆಯ ಸಂದರ್ಭದ ಮಧ್ಯೆಯೂ ತಂಡದ ಬೆಂಬಲಕ್ಕೆ ನಿಂತರು. ಮದುಮಗಳಲ್ಲಿ 'ಕ್ಷಮಿಸು, ನಂಗೆ ಐದೇ ನಿಮಿಷ ಸಮಯ ಕೊಡು' ಎಂದು ವಿನಂತಿಸಿದ ರಿದ್ವಾನ್ ಸೀದಾ ಮೈದಾನಕ್ಕೆ ಓಡಿದರು! (ಮೇಲಿನ ಚಿತ್ರದಲ್ಲಿ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಮಾಡಿರುವ ಟ್ವೀಟ್ ಗಮನಿಸಬಹುದು)
ಖುಷಿಯ ಸಂಗತಿಯೆಂದರೆ ರಿದ್ವಾನ್ ನೆರವಿನೊಂದಿಗೆ ಫೀಫಾ ಮಂಜೆರಿ ಆ ಪಂದ್ಯದಲ್ಲಿ ಜಯ ಸಾಧಿಸಿತು. ಆದರೆ ರಿದ್ವಾನ್ ಮನೆಗೆ ಬಂದಾಗ ಅಲ್ಲಿನ ಪರಿಸ್ಥಿತಿ ಸುಲಭವಾಗಿ ನಿಭಾಯಿಸುವಂತಿರಲಿಲ್ಲ. ರಿದ್ವಾನ್ ನಡೆ ಮದುಮಗಳು ಮತ್ತು ಅವಳ ಕುಟುಂಬಸ್ಥರ ಕಣ್ಣು ಕೆಂಪಗಾಗಿಸಿತ್ತು.