ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಆರಂಭಕ್ಕೂ ಮುನ್ನ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಟೀಮ್ ಇಂಡಿಯಾ ವಿಚಾರವಾಗಿ ತನ್ನ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ನ್ಯೂಜಿಲೆಂಡ್ಗೆ ಹೋಲಿಸಿದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯಕ್ಕೆ ಭಾರತದ ಸಿದ್ಧತೆ ಕಡಿಮೆಯಾಗಿದೆ. ಯಾಕೆಂದರೆ ಭಾರತೀಯ ತಂಡಕ್ಕೆ ಇಂಗ್ಲೆಂಡ್ಗೆ ಆಗಮಿಸಿದ ಬಳಿಕ ಕನಿಷ್ಟ ಅಭ್ಯಾಸ ಪಂದ್ಯವನ್ನು ಕೂಡ ಆಡುವ ಅವಕಾಶ ದೊರೆತಿಲ್ಲ ಎಂದಿದ್ದಾರೆ.
ಭಾರತ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಎದುರಾಳಿಯಾಗಿರುವ ನ್ಯೂಜಿಲೆಂಡ್ ತಂಡ ಈ ಮಹತ್ವದ ಪಂದ್ಯಕ್ಕೂ ಮುನ್ನ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿದೆ. ಇದರಲ್ಲಿ ನ್ಯೂಜಿಲೆಂಡ್ 1-0 ಅಂತರದಿಂದ ಗೆದ್ದು ಬೀಗಿದ್ದು ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.
"ನ್ಯೂಜಿಲೆಂಡ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಅದ್ಭುತವಾದ ಸಿದ್ಧತೆಯನ್ನು ಮಾಡಿಕೊಂಡಿದೆ. ಇಂಗ್ಲೆಂಡ್ ವಿರುದ್ಧ ಅವರು ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. ಅದಕ್ಕೂ ಹೆಚ್ಚಿನದಾಗಿ ಎರಡಲ್ಲಿಯೂ ಮೇಲುಗೈ ಸಾಧಿಸಿದ್ದಾರೆ. ಸರಿಯಾದ ಅಭ್ಯಾಸ ಪಂದ್ಯಗಳಿಲ್ಲದೆ ನೀವು ಇಂಗ್ಲೆಂಡ್ನನಲ್ಲಿ ನಡೆಯುವ ಟೆಸ್ಟ್ ಪಂದ್ಯಕ್ಕೆ ಸಿದ್ಧರಾಗಲು ಸಾಧ್ಯವಿಲ್ಲ" ಎಂದು ಕೆವಿನ್ ಪೀಟರ್ಸನ್ ಬೆಟ್ವೇ ಇನ್ಸೈಡರ್ಗೆ ಬರೆದ ಬ್ಲಾಗ್ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಬೌಲಿಂಗ್ ದಾಳಿ ಅದ್ಭುತವಾಗಿತ್ತು. ಅದರಲ್ಲೂ ಲಾರ್ಡ್ಸ್ನಲ್ಲಿ ಟಿಮ್ ಸೌಥೀ ಹಾಗೂ ಮ್ಯಾಟ್ ಹೆನ್ರಿ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಒಂದು ಟೆಸ್ಟ್ ಪಂದ್ಯದಲ್ಲಿ ಒಮದು ಅಥವಾ ಎರಡು ಅವಕಾಶವನ್ನು ಮಾತ್ರ ನೀವು ಪಡೆಯುತ್ತೀರಿ. ಹಾಗಾಗಿ ಈ ಮಹತ್ವದ ಪಂದ್ಯಕ್ಕೆ ಭಾರತದ ಸಿದ್ಧತೆಯ ಬಗ್ಗೆ ನನಗೆ ಭಯವಾಗುತ್ತಿದೆ" ಎಂದು ಪೀಟರ್ಸನ್ ಹೇಳಿಕೆಯನ್ನು ನೀಡಿದ್ದಾರೆ.
ಇನ್ನು ಇದಕ್ಕೂ ಮುನ್ನ ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಪ್ರತಿಕ್ರಿಯೆ ನೀಡಿದ್ದರು. ಈ ಸಂದರ್ಭದಲ್ಲಿ ಅವರು "ನ್ಯೂಜಿಲೆಂಡ್ ಈ ಪರಿಸ್ಥಿತಿಯಲ್ಲಿ ಆಡಿರುವ ಕಾರಣ ಹೆಚ್ಚಿನ ಅವಕಾಶಗಳನ್ನು ಅವರು ಹೊಂದಿದ್ದಾರೆ ಮತ್ತು ಇಂಗ್ಲೆಂಡ್ ತಂಡವನ್ನು ಅದರ ನೆಲದಲ್ಲಿಯೇ ಹಿಮ್ಮೆಟ್ಟಿಸಿದ್ದಾರೆ. ಇದು ಅವರಿಗೆ ಅತ್ಯಂತ ದೊಡ್ಡ ಸರಣಿಯಾಗಿದ್ದು ತುಂಬಾ ಅದ್ಭತವಾಗಿ ಕಾಣಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ಕೈಲ್ ಜ್ಯಾಮಿಸನ್ ಹಾಗೂ ಟಿಮ್ ಸೌಥಿ ಅವರು ಇಲ್ಲದೆಯೇ ಗೆಲುವು ಸಾಧಿಸಿದ್ದಾರೆ. ಈ ಆಟಗಾರರು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಮಹತ್ವದ ಪಾತ್ರವಹಿಸಲಿದ್ದಾರೆ " ಎಂದು ಗಂಗೂಲಿ ಹೇಳಿಕೆ ನೀಡಿದ್ದಾರೆ.