ಪ್ರಸ್ತುತ ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ರಾಜ್ಕೋಟ್ನಲ್ಲಿ ನಡೆದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 26 ರನ್ಗಳ ಸೋಲು ಅನುಭವಿಸಿದೆ. ಸುಲಭವಾಗಿ ಗೆಲ್ಲುವ ಪಂದ್ಯವನ್ನು ಭಾರತ ಸೋತಿದಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಬೇಸರಗೊಂದಿದ್ದಾರೆ. ಈ ಸೋಲಿನ ನಂತರ ಟೀಮ್ ಇಂಡಿಯಾ ಹಲವು ಟೀಕೆಗಳಿಗೆ ಗುರಿಯಾಗಿದೆ.
ಇಂಗ್ಲೆಂಡ್ ನೀಡಿದ 171 ರನ್ಗಳ ಗೆಲುವಿನ ಗುರಿಯನ್ನು ತಲುಪುವಲ್ಲಿ ಭಾರತ ಎಡವಿತು. ಭಾರತ 9 ವಿಕೆಟ್ ಕಳೆದುಕೊಂಡು ಕೇವಲ 145 ರನ್ಗೆ ಕುಸಿಯಿತು. ಟೀಮ್ ಇಂಡಿಯಾಕ್ಕೆ ಗೆಲ್ಲುವ ಅತಿಯಾದ ಆತ್ಮವಿಶ್ವಾಸವಿತ್ತು. ಆದರೆ, ಧ್ರುವ್ ಜುರೆಲ್ ಬದಲಿಗೆ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡಲು ಬಂದಿದ್ದು ಟೀಮ್ ಇಂಡಿಯಾ ಸೋಲಿಗೆ ಕಾರಣ ಎಂದು ಕೆಲವು ಮಾಜಿ ಆಟಗಾರರ ವಾದ. ಇದೀಗ ಧ್ರುವ್ ಜುರೆಲ್ಗಾಗಿ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಪ್ರಶ್ನೆ ಎತ್ತಿದ್ದಾರೆ.

ಧ್ರುವ್ ಜುರೆಲ್ ಅವರನ್ನು 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಕಳುಹಿಸುವ ಟೀಮ್ ಇಂಡಿಯಾದ ನಿರ್ಧಾರದ ಬಗ್ಗೆ ಕೆವಿನ್ ಪೀಟರ್ಸನ್ ಪ್ರಶ್ನೆಗಳನ್ನು ಎತ್ತಿದ್ದಾರೆ. ಭಾರತ ಬ್ಯಾಟಿಂಗ್ ಕ್ರಮಾಂಕವನ್ನು ಸರಿಯಾಗಿ ಇಟ್ಟುಕೊಳ್ಳಲಿಲ್ಲ. ಧ್ರುವ್ ಜುರೆಲ್ ಅನುಭವಿ ಬ್ಯಾಟರ್. ಬ್ಯಾಟಿಂಗ್ ಕ್ರಮಾಂಕದಲ್ಲಿ ಅವರನ್ನು ಕೆಳಗಿಳಿಸಿರುವುದು ಸರಿಯಲ್ಲ. ನಿಮ್ಮ ಉತ್ತಮ ಬ್ಯಾಟರ್ಗಳು ಮುಂದೆ ಬ್ಯಾಟ್ ಮಾಡುತ್ತಾರೆ. ಎಡ ಮತ್ತು ಬಲ ಸಂಯೋಜನೆಯು ಸಂಖ್ಯೆ 4 ರವರೆಗೆ ಉತ್ತಮವಾಗಿರುತ್ತದೆ. ಆದರೆ ಇದಾದ ನಂತರ ನೀವು ನಿಮ್ಮ ಉತ್ತಮ ಬ್ಯಾಟರ್ಗಳನ್ನು ಕಳುಹಿಸಬೇಕು. ಜುರೆಲ್ ಸರಿಯಾದ ಬ್ಯಾಟರ್. ಅವರು ದೊಡ್ಡ ಇನ್ನಿಂಗ್ಸ್ ಆಡಬಹುದಿತ್ತು ಎಂದು ಕೆವಿನ್ ಪೀಟರ್ಸನ್ ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ಬದಲಿಗೆ ಧ್ರುವ್ ಜುರೆಲ್ ಕ್ರೀಸ್ಗೆ ಬಂದಿದ್ದರೆ, ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20ಐ ಅನ್ನು ಭಾರತ ಗೆಲ್ಲುತ್ತಿತ್ತು. ಹಾರ್ದಿಕ್ ಹೆಚ್ಚು ಚೆಂಡನ್ನು ಎದುರಿಸಿದರೂ, ರನ್ ಗಳಿಸಲು ಸಾಧ್ಯವಾಗಲಿಲ್ಲ. ಅವರು 35 ಎಸೆತಗಳಲ್ಲಿ ಒಟ್ಟು 40 ರನ್ ಗಳಿಸಿದರು.
ಕಳೆದ ಎರಡು ಟಿ20 ಪಂದ್ಯಗಳಲ್ಲಿ ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕ ಒಂದೇ ರೀತಿಯಲ್ಲಿತ್ತು. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕರಾದರೆ, ಮೊದಲ ವಿಕೆಟ್ ಪತನದ ನಂತರ ನಾಯಕ ಸೂರ್ಯಕುಮಾರ್ ಯಾದವ್, ನಾಲ್ಕನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಬ್ಯಾಟಿಂಗ್ ಮಾಡಿದ್ದರು. ಆದರೆ ಮೂರನೇ ಟಿ20 ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿತ್ತು. ಈ ನಾಲ್ವರು ತಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಿದರು. ಬಳಿಕ ಸತತವಾಗಿ ವಿಕೆಟ್ ಬೀಳುತ್ತಿದ್ದಂತೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿತ್ತು. ಇದಲ್ಲದೆ, ಎಡ-ಬಲ ಸಂಯೋಜನೆಗಾಗಿ ಮುಂದಿನ ಸ್ಥಾನಗಳಲ್ಲಿ ವಾಷಿಂಗ್ಟನ್ ಸುಂದರ್ ಮತ್ತು ಅಕ್ಸರ್ ಪಟೇಲ್ ಇಬ್ಬರನ್ನು ಮೈದಾನಕ್ಕೆ ಕರೆತರಲಾಯಿತು. ಆದರೆ, ಸ್ಟಾರ್ ಬ್ಯಾಟರ್ ಧ್ರುವ್ ಜುರೆಲ್ ಅವರನ್ನು 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಕಳುಹಿಸಲಾಯಿತು. ಇದು ಕೂಡ ಟೀಮ್ ಇಂಡಿಯಾ ಸೋಲಿಗೆ ಒಂದು ಕಾರಣ.