
ಮೊಹಾಲಿ, ಮಾರ್ಚ್ 20: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ಕುಟುಂಬಗಳಿಗೆ ಐಪಿಎಲ್ ಫ್ರಾಂಚೈಸಿಗಳಲ್ಲೊಂದಾದ ಕಿಂಗ್ಸ್ XI ಪಂಜಾಬ್ ಆರ್ಥಿಕ ನೆರವು ನೀಡಿದೆ. ಕಿಂಗ್ಸ್ XI ಪಂಜಾಬ್ ಸೈನಿಕರ ಕುಟುಂಬಗಳಿಗೆ ಒಟ್ಟು 25 ಲಕ್ಷ ರೂ. ದೇಣಿಗೆ ನೀಡಿದೆ.
ಕಳೆದ ಫೆಬ್ರವರಿ 14ರಂದು ಪುಲ್ವಾಮದಲ್ಲಿ ನಡೆದಿದ್ದ ಉಗ್ರ ದಾಳಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಭಾರತೀಯ ಯೋಧರು ಮೃತರಾಗಿದ್ದರು. ಅದರಲ್ಲಿ ಐದು ಕುಟುಂಬಗಳಿಗೆ ತಲಾ 5 ಲಕ್ಷ ರೂ.ನಂತೆ ಒಟ್ಟು 25 ಲಕ್ಷ ರೂ.ಗಳನ್ನು ಪಂಜಾಬ್ ಫ್ರಾಂಚೈಸಿ ದೇಣಿಗೆಯಾಗಿ ನೀಡಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು, ಜೈಮಾಲ್ ಸಿಂಗ್, ಸುಖ್ಜಿಂದರ್ ಸಿಂಗ್, ಮಣೀಂದರ್ ಸಿಂಗ್, ಕುಲ್ವೀಂದರ್ ಸಿಂಗ್ ಮತ್ತು ತಿಲಕ್ ರಾಜ್ ಹೀಗೆ ಒಟ್ಟು 5 ಮೃತ ಯೋಧರ ಕುಟುಂಬಗಳಿಗೆ ಚೆಕ್ಕನ್ನು ವಿತರಿಸಿತು. ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ಮತ್ತು ಡಿಐಜಿ ಸಿಆರ್ಪಿಎಫ್ ವಿಕೆ ಕೌಂದಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಾರ್ಚ್ 23ರಿಂದ ಆರಂಭಗೊಳ್ಳಲಿರುವ ಅದ್ದೂರಿ ಐಪಿಎಲ್ ಟೂರ್ನಿಗೆ ಪಂಜಾಬ್ ಕೂಡ ತಯಾರಿ ನಡೆಸುತ್ತಿದೆ. ತಂಡದಲ್ಲಿ ಒಂದಿಷ್ಟು ಬದಲಾವಣೆಗಳಾಗಿದ್ದು, ಈ ಬಾರಿ ಹೇಗೆ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಚೆನ್ನೈಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳು ಮುಖಾಮುಖಿಯಾಗಲಿವೆ.