ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇ ಆಫ್ ರೇಸ್ನಲ್ಲಿ ಜೀವಂತವಾಗಿರಲು ಶನಿವಾರ ನಡೆಯಲಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸುವ ಅನಿವಾರ್ಯತೆ ಇದೆ. 18ನೇ ಆವೃತ್ತಿಯ 44ನೇ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆಯಲಿದೆ. ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿದೆ. ಕೆಕೆಆರ್ ನಾಲ್ಕನೇ ಗೆಲುವಿನ ಹುಡುಕಾಟದಲ್ಲಿದೆ.
ಕೆಕೆಆರ್ ಹಾಗೂ ಪಂಜಾಬ್ ತಂಡಗಳು ಈಗಾಗಲೇ 34 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಈ ವೇಳೆ, ಕೆಕೆಆರ್ 21, ಪಂಜಾಬ್ 13 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಉಭಯ ತಂಡಗಳು ಮೈದಾನಕ್ಕೆ ಇಳಿದಾಗ 262 ಗರಿಷ್ಠ ಮೊತ್ತವಾಗಿದೆ. ಇನ್ನು 95 ಕನಿಷ್ಠ ಮೊತ್ತವಾಗಿದೆ. ಈ ಮೈದಾನದಲ್ಲಿ ಈಗಾಗಲೇ 97 ಐಪಿಎಲ್ ಪಂದ್ಯಗಳು ನಡೆದಿದ್ದು, ಈ ವೇಳೆ 41 ಬಾರಿ ಮೊದಲ ಬ್ಯಾಟ್ ಮಾಡಿದ ತಂಡ ಗೆದ್ದಿದ್ದರೆ, ಚೇಸ್ ಮಾಡಿದ ತಂಡ 56 ಬಾರಿ ಜಯ ಸಾಧಿಸಿದೆ. ಈ ಮೈದಾನದಲ್ಲಿ ಈಗಾಗಲೇ ಈ ಆವೃತ್ತಿಯ ಐದು ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟ್ ಮಾಡಿದ ತಂಡ ಮೂರು ಬಾರಿ ಜಯ ಸಾಧಿಸಿದೆ. ಹೀಗಾಗಿ ಈ ಪಂದ್ಯದಲ್ಲಿ ಟಾಸ್ ಗೆದ್ದ ತಂಡ ನಿಶ್ಚಿತವಾಗಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಹೆಚ್ಚಿದೆ.

ಪಂಜಾಬ್ ತಂಡದ ವಿರುದ್ಧ ಕೆಕೆಆರ್ ತಂಡ 112 ರನ್ಗಳನ್ನು ಚೇಸ್ ಮಾಡುವಲ್ಲಿ ವಿಫಲವಾಗಿತ್ತು. ಈ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಕೆಕೆಆರ್ ತಂಡಕ್ಕಿದೆ. ವೆಂಕಟೇಶ್ ಅಯ್ಯರ್ ಲಯಕ್ಕೆ ಮರಳುವ ಅನಿವಾರ್ಯತೆ ಇದೆ. ಇವರಿಗೆ ಭಾರೀ ಮೊತ್ತವನ್ನು ನೀಡಿ ಕೆಕೆಆರ್ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಇವರು ಕಳೆದ ಆರು ಇನಿಂಗ್ಸ್ಗಳಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಇವರು ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸುವ ಅನಿವಾರ್ಯತೆ ಇದೆ.
ಆರಂಭಿಕರಾದ ರಹಮುತುಲ್ಲಾ ಗುರ್ಬಾಜ್, ಸುನಿಲ್ ನರೇನ್ ಬಿಗ್ ಇನಿಂಗ್ಸ್ ಕಟ್ಟುವ ಅನಿವಾರ್ಯತೆ ಇದೆ. ನಾಯಕ ಅಜಿಂಕ್ಯ ರಹಾನೆ ತಮ್ಮ ಸ್ಥಿರ ಪ್ರದರ್ಶನ ಮುಂದುವರೆಸಬೇಕಿದೆ. ಭರವಸೆಯ ಆಟಗಾರ ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್ ರನ್ ಕಲೆ ಹಾಕಿ ತಂಡಕ್ಕೆ ನೆರವಾಗಬೇಕಿದೆ. ಅಂದಾಗ ಮಾತ್ರ ದೊಡ್ಡ ಮೊತ್ತದ ಕನಸು ನನಸಾಗುತ್ತದೆ.

ಬೌಲಿಂಗ್ ವಿಭಾಗದಲ್ಲಿ ವೈಭವ್ ಆರೋರ್ ಹಾಗೂ ಹರ್ಷಿತ್ ರಾಣಾ ಬಿಗುವಿನ ದಾಳಿ ನಡೆಸಿ ತಂಡಕ್ಕೆ ನೆರವಾಗಬೇಕಿದೆ. ಇನ್ನು ವರುಣ್ ಚಕ್ರವರ್ತಿ ತನ್ನ ಬೌಲಿಂಗ್ ನಿಂದ ಎದುರಾಳಿಗಳನ್ನು ಕಾಡಬೇಕಿದೆ.
18ನೇ ಆವೃತ್ತಿಯ ಐಪಿಎಲ್ನ ಆರಂಭದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು 10 ಅಂಕಗಳನ್ನು ಕಲೆ ಹಾಕಿದ್ದು, ಪ್ಲೇ ಆಫ್ ಲೆಕ್ಕಾಚಾರವನ್ನು ಆರಂಭಿಸಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಪ್ಲೇ ಆಫ್ಗೆ ಒಂದು ಕಾಲು ಇಡುವ ಆಸೆ ಪಂಜಾಬ್ ತಂಡದ್ದಾಗಿದೆ. ಪಂಜಾಬ್ ತಂಡದ ಯುವ ಬ್ಯಾಟರ್ ಹಾಗೂ ಅನುಭವಿ ಶ್ರೇಯಸ್ ಅಯ್ಯರ್ ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡಬೇಕಿದೆ. ಮಧ್ಯಮ ಕ್ರಮಾಂಕದಲ್ಲೂ ಆಟಗಾರರು ಸ್ಥಿರ ಪ್ರದರ್ಶನ ನೀಡಬೇಕಿದೆ. ಇನ್ನು ಪಂಜಾಬ್ ತಂಡದ ಬೌಲರ್ಗಳು ಸ್ಥಿರ ಪ್ರದರ್ಶನ ನೀಡಿದ್ದೇ ಆದಲ್ಲಿ ಮತ್ತೆರೆಡು ಅಂಕಗಳನ್ನು ಕಲೆ ಹಾಕಬಹುದು.