ಇಂಡಿಯನ್ ಪ್ರೀಮಿಯರ್ ಲೀಗ್ 2023ರಿಂದ ಹೊರಗುಳಿಯಲು ಬಾಂಗ್ಲಾದೇಶ ತಂಡದ ಆಲ್ರೌಂಡರ್ ಶಕೀಬ್ ಅಲ್ ಹಸನ್ ನಿರ್ಧರಿಸಿದ್ದಾರೆ. ಇಡೀ ಆವೃತ್ತಿಯಲ್ಲಿ ಆಡಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅನುಮತಿ ನೀಡದ ಕಾರಣ ಶಕೀಬ್ ಅಲ್ ಹಸನ್ ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಆದರೆ ವಿಕೆಟ್ ಕೀಪರ್ ಬ್ಯಾಟರ್ ಲಿಟ್ಟನ್ ದಾಸ್ ಏಪ್ರಿಲ್ 8 ರ ಬಳಿಕ ತಂಡವನ್ನು ಸೇರಿಕೊಳ್ಳಲಿದ್ದು, ಮೇ 1ರವರೆಗೆ ಆಡಲಿದ್ದಾರೆ.
2023ರ ಐಪಿಎಲ್ ಮಿನಿ ಹರಾಜಿನಲ್ಲಿ ಶಕೀಬ್ ಅಲ್ ಹಸನ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 1.5 ಕೋಟಿ ರುಪಾಯಿ ನೀಡಿ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತ್ತು. ಆದರೆ, ಐಪಿಎಲ್ ಸಮಯದಲ್ಲೇ ಬಾಂಗ್ಲಾದೇಶ ಐರ್ಲೆಂಡ್ ವಿರುದ್ಧ ಸರಣಿ ಆಡುತ್ತಿರುವ ಕಾರಣ, ಅವರಿಗೆ ಐಪಿಎಲ್ನಲ್ಲಿ ಆಡಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅನುಮತಿ ನೀಡಿರಲಿಲ್ಲ. ಏಪ್ರಿಲ್ 8 ರ ಬಳಿಕ ಅವರು ಆಯ್ಕೆಗೆ ಲಭ್ಯವಿದ್ದರೂ, ಮೇ ತಿಂಗಳಿನಲ್ಲಿ ಮತ್ತೆ ಬಾಂಗ್ಲಾದೇಶ ಐರ್ಲೆಂಡ್ ವಿರುದ್ಧ ಏಕದಿನ ಸರಣಿ ಆಡಲಿದೆ.

ಮೇ 9 ರಿಂದ 14 ರವರೆಗೆ ಬಾಂಗ್ಲಾದೇಶ ಐರ್ಲೆಂಡ್ಗೆ ಪ್ರಯಾಣಿಸಲಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲು ತೆರಳಬೇಕಾಗುತ್ತದೆ. ಸಂಪೂರ್ಣವಾಗಿ ಐಪಿಎಲ್ನಲ್ಲಿ ಆಡಲು ಶಕೀಬ್ ಅಲ್ ಹಸನ್ ಉತ್ಸುಕರಾಗಿದ್ದರೂ, ಅದಕ್ಕೆ ಬಿಸಿಬಿ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಲಿಲ್ಲ, ಸಾಕಷ್ಟು ಪ್ರಯತ್ನ ಮಾಡಿದ ಬಳಿಕವೂ ಬಿಸಿಬಿ ಒಪ್ಪದ ಕಾರಣ ಅನಿವಾರ್ಯವಾಗಿ ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಫ್ರಾಂಚೈಸಿ ಜೊತೆ ಚರ್ಚಿಸಿದ ಬಳಿಕ ಈ ನಿರ್ಧಾರ
ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಶಕೀಬ್ ಅಲ್ ಹಸನ್ ಫ್ರಾಂಚೈಸಿ ಜೊತೆ ಚರ್ಚೆ ಮಾಡಿದ ಬಳಿಕ, 1.5 ಕೋಟಿ ಪರ್ಸ್ ಅನ್ನು ಮುಕ್ತವಾಗಿಸಲು, ಹೊರಗುಳಿಯುವಂತೆ ಫ್ರಾಂಚೈಸಿ ಸಲಹೆ ನೀಡಿದೆ. ಶಕೀಬ್ ಬದಲಾಗಿ ಬೇರೆ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ಉದ್ದೇಶದಿಂದ ಕೆಕೆಆರ್ ಶಕೀಬ್ಗೆ ಹೊರಗುಳಿಯಲು ಸೂಚನೆ ನೀಡಿದೆ.

ಏಪ್ರಿಲ್ 4 ರಂದು ಆರಂಭವಾಗಲಿರುವ ಐರ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಶಕೀಬ್ ಅಲ್ ಹಸನ್ ಮತ್ತು ಲಿಟ್ಟನ್ ದಾಸ್ ಇಬ್ಬರೂ ಆಯ್ಕೆಯಾಗಿದ್ದಾರೆ. ಶಕೀಬ್ ಹೊರಗುಳಿದರೂ, ಸ್ಫೋಟಕ ಬ್ಯಾಟರ್ ಲಿಟ್ಟನ್ ದಾಸ್ ಏಪ್ರಿಲ್ 8ರ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಏಪ್ರಿಲ್ 29ರಂದು ಕೋಲ್ಕತ್ತಾದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಆಡಿದ ಬಳಿಕ, ಐರ್ಲೆಂಡ್ ವಿರುದ್ಧ ಏಕದಿನ ಸರಣಿಗಾಗಿ ವಾಪಸ್ ತೆರಳುವ ಸಾಧ್ಯತೆ ಇದೆ. ವೇಗದ ಬೌಲರ್ ಲಾಕಿ ಫರ್ಗುಸನ್ ಕೂಡ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದು, ಕೆಲವು ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ನಿತೀಶ್ ರಾಣಾ (ನಾಯಕ), ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಟಿಮ್ ಸೌಥಿ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅನುಕುಲ್ ರಾಯ್, ರಿಂಕು ಸಿಂಗ್, ನಾರಾಯಣ್ ಜಗದೇಸಾಯ್, ವೈಬ್ಹಾವ್ರಾಯ್ ಸುಯಶ್ ಶರ್ಮಾ, ಡೇವಿಡ್ ವೈಸ್, ಕುಲ್ವಂತ್ ಖೆಜ್ರೋಲಿಯಾ, ಲಿಟ್ಟನ್ ದಾಸ್, ಮನ್ದೀಪ್ ಸಿಂಗ್, ಲಾಕಿ ಫರ್ಗುಸನ್ (ಮಂಡಿರಜ್ಜು ಗಾಯ), ಶ್ರೇಯಸ್ ಅಯ್ಯರ್ (ಬೆನ್ನುನೋವು).