ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಿಂಕು ಸಿಂಗ್ ಅವರ ಅಮೋಘ ಹೋರಾಟದಿಂದಾಗಿ ಗೆಲುವಿನ ಸನಿಹಕ್ಕೆ ಬಂದಿದ್ದರೂ ಗೆಲುವಿನ ಗೆರೆ ದಾಟಲು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸಾಧ್ಯವಾಗಲಿಲ್ಲ. ಎಲ್ಎಸ್ಜಿ ತಂಡ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿದ ಸಂದರ್ಭದಲ್ಲಿ ರಿಂಕು ಸೀಂಗ್ ಏಕಾಂಗಿ ಹೋರಾಟದ ಹೊರತಾಗಿಯೂ ಕೆಕೆಆರ್ ಸೋಲು ಕಂಡಿತು. ರಿಂಕು ಸಿಂಗ್ ಅವರ ಈ ಅಮೋಘ ಪ್ರದರ್ಶನದ ಬಗ್ಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ನಿತೀಶ್ ರಾಣಾ ಪ್ರತಿಕ್ರಿಯೆ ನೀಡಿದ್ದು ರಿಂಕು ಆಟವನ್ನು ಹೊಗಳಲು ನನ್ನಲ್ಲಿ ಪದಗಳಿಲ್ಲ ಎಂದಿದ್ದಾರೆ.
ಪ್ಲೇಆಫ್ ಪ್ರವೇಶ ಅಧಿಕೃತವಾಗಬೇಕಿದ್ದರೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಗೆಲುವು ಸಾಧಿಸಲೇ ಬೇಕಿತ್ತು. ಆದರೆ ಕೆಕೆಆರ್ ತಂಡದ ರಿಂಕು ಸಿಂಗ್ ಅಂತಿಮ ಹಂತದಲ್ಲಿ ಎಲ್ಎಸ್ಜಿ ತಂಡಕ್ಕೆ ಅಡ್ಡಿಯಾಗುವ ಆತಂಕ ಮೂಡಿಸಿದರು. ಒಂದು ತುದಿಯಲ್ಲಿ ಜೊತೆಗಾರರನ್ನು ಕಳೆದುಕೊಳ್ಳುತ್ತಿದ್ದರೂ ರಿಂಕು ಸಿಂಗ್ ಅಂತಿಮ ಎಸೆತದವರೆಗೂ ತಮ್ಮ ದಿಟ್ಟ ಹೋರಟವನ್ನು ಮುಂದುವರಿಸಿದ್ದರು. ಅಂತಿಮವಾಗಿ ರಿಂಕು 33 ಎಸೆತಗಳನ್ನು ಎದುರಿಸಿ 67 ರನ್ಗಳಿಸಿ ಅಜೇಯವಾಗುಳಿದರು. ಈ ಇನ್ನಿಂಗ್ಸ್ನಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ಗಳು ಒಳಗೊಂಡಿದೆ.

ಈ ಪಂದ್ಯದಲ್ಲಿ ಕೇವಲ ಒಂದು ರನ್ನ ಅಂತರದಿಂದ ಸೋಲು ಅನುಭವಿಸಿದ ಬಳಿಕ ನಾಯಕ ನಿತೀಶ್ ರಾಣ ಪ್ರತಿಕ್ರಿಯೆ ನೀಡಿದ್ದು ರಿಂಕು ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಈ ಬಾರಿಯ ಐಪಿಎಲ್ ಆವೃತ್ತಿಗಾಗಿ ರಿಂಕು ಸಾಕಷ್ಟು ಪರಿಶ್ರಮಪಟ್ಟಿದ್ದಾರೆ. ನಾನು ಈ ಬಾರಿ ಆಡಿದ 14 ಪಂದ್ಯಗಳಲ್ಲಿಯೂ ಅವರ ಬಗ್ಗೆ ಮಾತ್ರವೇ ಮಾತನಾಡಿದ್ದೇನೆ ಎಂದಿದ್ದಾರೆ ನಿತೀಶ್ ರಾಣಾ.
"ನಾನು 14 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದೇನೆ. ಈ ಅವಧಿಯಲ್ಲಿ ನನಗಿಸುತ್ತದೆ ನಾನು ರಿಂಕು ಸಿಂಗ್ ಬಗ್ಗೆ ಮಾತ್ರವೇ ಮಾತನಾಡಿದ್ದೇನೆ. ಆತ ನನಗೆ ಬಹಳ ಆತ್ಮೀಯ ಹಾಗೂ ಆತನ ಸಾಮರ್ಥ್ಯ ಏನು ಎಂಬುದು ನನಗೆ ತಿಳಿದಿದೆ. ಇಂತಾ ಸಂಕಷ್ಟದ ಸಂದರ್ಭದಲ್ಲಿ ಈ ರೀತಿಯ ಬ್ಯಾಟಿಂಗ್ ನಡೆಸಲು ಆತನಿಂದ ಸಾಧ್ಯವಿದೆ ಎಂದಾದರೆ ಆತ ಎಷ್ಟು ಅದ್ಭುತ ಆಟಗಾರ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬಹುದು. ಆತನ ಆಟವನ್ನು ಹೊಗಳಲು ನಮ್ಮಲ್ಲಿ ಈಗ ಯಾವುದೇ ಪದಗಳು ಉಳಿದಿಲ್ಲ" ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ನಿತೀಶ್ ರಾಣಾ.
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರನ್ ಬೆನ್ನಟ್ಟುವ ಸಂದರ್ಭದಲ್ಲಿ ರಿಂಕು ಸಿಂಗ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಿಗೆ ಬಹಳ ದೊಡ್ಡ ಅಸ್ತ್ರವಾಗಿದ್ದರು ಎಂಬುದನ್ನು ಅವರ ಅಂಕಿಅಂಶಗಳೇ ಹೇಳುತ್ತವೆ. ರನ್ ಬೆನ್ನಟ್ಟಿದಾಗ ಕೇವಲ 7 ಪಂದ್ಯಗಳಲ್ಲಿ ರಿಂಕು 305 ರನ್ಗಳನ್ನು ಗಳಿಸಿದ್ದು 174.28ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ರನ್ ಬೆನ್ನಟ್ಟುವ ಸಂದರ್ಭದಲ್ಲಿ 4 ಅರ್ಧ ಶತಕ ಸಿಡಿಸಿದ್ದು ಇದರಲ್ಲಿ 22 ಸಿಕ್ಸರ್ಗಳು ಹಾಗೂ 20 ಬೌಂಡರಿಗಳು ಒಳಗೊಂಡಿದೆ.
ಇನ್ನು ಪ್ಲೇಆಫ್ಗೆ ಪ್ರವೇಶಿಸಲು ಸಾಧ್ಯವಾಗದಿದ್ದರೂ ತಮ್ಮ ತಂಡದಲ್ಲಿ ಈ ಬಾರಿ ಸಾಕಷ್ಟು ಸಕಾರಾತ್ಮಕ ಅಂಶಗಳು ಇದ್ದವು ಎಂದಿರಿವ ನಿತೀಶ್ ರಾಣಾ ಮುಂದಿನ ಆಔಋತ್ತಿಯ್ಲಲಿ ಬಲಿಷ್ಠವಾಗಿ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಫಲಿತಾಂಶ ನಮ್ಮ ಪರವಾಗಿ ಬಾರದಿದ್ದರೂ ಈ ಬಾರಿ ನಮ್ಮಲ್ಲಿ ಸಾಕಷ್ಟು ಸಕಾರಾತ್ಮಕ ಅಂಶಗಳು ಇದ್ದವು. ಸಾಕಷ್ಟು ವಿಚಾರಗಳಲ್ಲಿ ನಾವು ಉತ್ತಮವಾಗಿ ಆಡಿದ್ದೇವೆ. ಮುಂದಿನ ಆವೃತ್ತಿಯಲ್ಲಿ ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮುವ ವಿಶ್ವಾಸವಿದೆ"
"ಎಲ್ಲಾ ವಿಭಾಗಗಳಲ್ಲಿಯೂ ಅತ್ಯುತ್ತಮವಾದ ಪ್ರದರ್ಶನವನ್ನು ನೀಡಿ ಸತತವಾಗಿ ಗೆಲುವು ಕಾಣುತ್ತಾ ಸಾಗಬೇಕಿದೆ. ಕಠಿಣ ಸಂದರ್ಭದಲ್ಲಿ ತಿರುಗಿಬಿದ್ದು ಗೆಲುವು ಸಾಧಿಸುವ ಸಾಮರ್ಥ್ಯ ನಮ್ಮಲ್ಲಿದೆ. ಆದರೆ ಅದನ್ನು ಸಾಧಿಸಲು ನಮಗೆ ಸಾಧ್ಯವಾಗಲಿಲ್ಲ" ಎಂದಿದ್ದಾರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ನಿತೀಶ್ ರಾಣಾ. ಕೆಕೆಆರ್ ತಂಡದ ಖಾಯಂ ನಾಯಕ ಶ್ರೇಯಸ್ ಐಯ್ಯರ್ ಗಾಯಗೊಂಡು ಈ ಬಾರಿಯ ಆವೃತ್ತಿಯಿಂದ ಹೊರಬಿದ್ದ ಕಾರಣ ನಿತೀಶ್ ರಾಣಾ ಕೆಕೆಆರ್ ತಂಡವನ್ನು ಟೂರ್ನಿಯಲ್ಲಿ ಮುನ್ನಡೆಸಿದ್ದಾರೆ