ಮೇ 11 ಭಾನುವಾರ, 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 60ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಎದುರು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಭರ್ಜರಿ ಗೆಲುವು ಸಾಧಿಸಿ ಪ್ಲೇ-ಆಪ್ಗೆ ಎಂಟ್ರಿ ಕೊಟ್ಟ ಮೊದಲ ತಂಡವಾಗಿದೆ.
ಆದರೆ ಈ ಬಾರಿಯ ಐಪಿಎಲ್ನಲ್ಲಿ ಬಿಸಿಸಿಐ ವಿಧಿಸುವ ದಂಡಕ್ಕೆ ಆಟಗಾರರು ಗುರಿಯಾಗುತ್ತಿರುವುದು ಜಾಸ್ತಿ ಆಗಿದೆ. ಕಳೆದ ದಿನ ಸಹಾ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟರ್ ರಮಣದೀಪ್ ಸಿಂಗ್ ಅವರಿಗೆ ಬಿಸಿಸಿಐ ದಂಡ ವಿಧಿಸಲಾಗಿದೆ.

ಭಾನುವಾರ ಕ್ರಿಕೆಟ್ ಮೂಲಗಳು ತಿಳಿಸಿರುವ ಪ್ರಕಾರ, ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.20ರ ಅಡಿಯಲ್ಲಿ ರಮಣದೀಪ್ ಅವರು ಲೆವೆಲ್ 1 ಅಪರಾಧ ಎಸಗಿದ್ದಾರೆ. ಬಳಿಕ ಅಪರಾಧವನ್ನು ಒಪ್ಪಿಕೊಂಡು ಪಂದ್ಯ ಶುಲ್ಕದ ಶೇಕಡಾ 20 ರಷ್ಟು ದಂಡವನ್ನು ಸ್ವೀಕರಿಸಿದ್ದಾರೆ. ಈ ಪಂದ್ಯದಲ್ಲಿ ರಮಣದೀಪ್ 8 ಎಸೆತಗಳಲ್ಲಿ ಅಜೇಯ 17 ರನ್ ಗಳಿಸುವ ಮೂಲಕ ಕೆಕೆಆರ್ ರನ್ ಹೆಚ್ಚಿಸಿದರು.
ಐಪಿಎಲ್ ನೀತಿ ಸಂಹಿತೆಯ ಪ್ರಕಾರ, ಆರ್ಟಿಕಲ್ 2.20 ಸಾಮಾನ್ಯವಾಗಿ ಕ್ರಿಕೆಟ್ ಆಟದ ಹೊರಗಿನ ಯಾವುದೇ ಕ್ರಿಯೆಯನ್ನು ಒಳಗೊಂಡಿರುತ್ತದೆ. ಉದಾಹರಣೆಗೆ ಉದ್ದೇಶಪೂರ್ವಕವಾಗಿ ಅಥವಾ ಅಜಾಗರೂಕತೆಯಿಂದ ವಿಕೆಟ್ಗಳನ್ನು ಒದೆಯುವುದು, ಜಾಹೀರಾತು ಫಲಕಗಳು, ಗಡಿ ಬೇಲಿಗಳು, ಡ್ರೆಸ್ಸಿಂಗ್ ರೂಮ್ ಬಾಗಿಲುಗಳು, ಕನ್ನಡಿಗಳು, ಕಿಟಕಿಗಳು ಮತ್ತು ಇತರ ವಸ್ತುಗಳನ್ನು ಹಾನಿ ಮಾಡುವುದು ಆರ್ಟಿಕಲ್ 2.20ರ ಅನ್ನು ಉಲ್ಲಂಘಿಸಿದಂತಾಗುತ್ತದೆ. ಆದರೆ ಯಾವ ಉದ್ದೇಶಕ್ಕಾಗಿ ರಮಣದೀಪ್ ಸಿಂಗ್ ಅವರಿಗೆ ದಂಡ ವಿಧಿಸಲಾಗಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಹೀಗಾಗಿ ಪಂದ್ಯ ನಿಧಾನವಾಗಿ 16 ಓವರ್ಗಳಲ್ಲಿ ಆರಂಭವಾಯಿತು. ಮೊದಲು ಟಾಸ್ ಸೋತು ಕೆಕೆಆರ್ ಬ್ಯಾಟಿಂಗ್ ಮಾಡಿತ್ತು.
ಆರಂಭದಲ್ಲೇ ಮುಂಬೈ ಬೌಲರ್ಸ್ ಪ್ರಮಖ ಮೂರು ವಿಕೆಟ್ಗಳನ್ನು ಪಡೆದು ಕೆಕೆಆರ್ ತಂಡಕ್ಕೆ ಶಾಕ್ ನೀಡಿದರು. ಕುಸಿದ ಕೆಕೆಆರ್ ಪರ ವೆಂಕಟೇಶ್ ಅಯ್ಯರ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಈ ಮೂಲಕ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು.
ಕೋಲ್ಕತ್ತಾ ನೀಡಿದ 158 ರನ್ಗಳ ಗುರಿ ಬೆನ್ನಟ್ಟಿದ್ದ ಮುಂಬೈಗೆ ಗೆಲ್ಲಲು ಸಾಧ್ಯವಾಗಲಿಲ್ಲ. ನಿಗದಿತ 16 ಓವರ್ಗಳಲ್ಲಿ ಮುಂಬೈ 8 ವಿಕೆಟ್ಗಳನ್ನು ಕಳೆದುಕೊಂಡು ಕೇವಲ 139 ರನ್ ಗಳಿಸಿತು. ಹೀಗಾಗಿ ಕೆಕೆಆರ್ 16 ರನ್ಗಳ ಭರ್ಜರಿ ಜಯಗಳಿಸಿತು.
ಮುಂಬೈ ಇಂಡಿಯನ್ಸ್ ತಂಡ: ಇಶಾನ್ ಕಿಶನ್(ವಿ.ಕೀ), ನಮನ್ ಧೀರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನೆಹಾಲ್ ವಧೇರಾ, ಹಾರ್ದಿಕ್ ಪಾಂಡ್ಯ(ನಾಯಕ), ಟಿಮ್ ಡೇವಿಡ್, ಅನ್ಶುಲ್ ಕಾಂಬೋಜ್, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ : ಫಿಲಿಪ್ ಸಾಲ್ಟ್(ವಿ.ಕೀ), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್(ನಾಯಕ), ರಿಂಕು ಸಿಂಗ್, ನಿತೀಶ್ ರಾಣಾ, ಆಂಡ್ರೆ ರಸೆಲ್, ರಮಣ್ದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.