ಇತ್ತೀಚಿಗೆ ಕೋಲ್ಕತ್ತಾದಲ್ಲಿ ನಡೆದ 2024ರ ಐಪಿಎಲ್ನ 36ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಹರ್ಷಿತ್ ರಾಣಾ ಅವರ ಬೌಲಿಂಗ್ನಲ್ಲಿ ಆರ್ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಔಟಾದ ಘಟನೆ ಭಾನುವಾರದಿಂದ ಐಪಿಎಲ್ನಲ್ಲಿ ಹೆಚ್ಚು ಚರ್ಚಿಸಲ್ಪಟ್ಟ ವಿಷಯವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಮೂರನೇ ಓವರ್ ಬೌಲಿಂಗ್ ಮಾಡಲು ಬಂದ ಹರ್ಷಿತ್ ರಾಣಾ ಎಸೆತದಲ್ಲಿ ವಿರಾಟ್ ಕೊಹ್ಲಿ ನಿಧಾನಗತಿಯ ಫುಲ್ಟಾಸ್ ಬಾಲ್ ಅನ್ನು ಕೆಣಕಿ ಮರಳಿ ಅವರಿಗೆ ಕ್ಯಾಚ್ ನೀಡಿ ಔಟಾದರು.

ಆದರೆ, ಆ ಬಾಲ್ ಕಾನೂನುಬದ್ಧವಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ದೊಡ್ಡ ಅಸ್ಪಷ್ಟತೆ ಇದೆ. ಫುಲ್ ಟಾಸ್ ನೋಬಾಲ್ ಎಂದು ವಿರಾಟ್ ಕೊಹ್ಲಿ ಅಂದುಕೊಂಡಿದ್ದರು, ನಂತರ ಆರ್ಸಿಬಿ ಮಾಜಿ ನಾಯಕ ಫೀಲ್ಡ್ ಅಂಪೈರ್ ಜೊತೆಗೆ ವಾಗ್ವಾದ ನಡೆಸಿದರು ಮತ್ತು ಮೂರನೇ ಅಂಪೈರ್ ತೀರ್ಪಿನ ವಿರುದ್ಧ ಕೂಗುವ ಮೂಲಕ ತಮ್ಮ ಹತಾಶೆಯನ್ನು ಹೊರಹಾಕಿದರು.
ಪಂದ್ಯದ ಬಳಿಕ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ, ವಿರಾಟ್ ಕೊಹ್ಲಿಗೆ ಅವರ ಪಂದ್ಯ ಶುಲ್ಕದ ಶೇ.50ರಷ್ಟು ದಂಡ ವಿಧಿಸಲಾಯಿತು.
ವಿರಾಟ್ ಕೊಹ್ಲಿ ರಿವ್ಯೂ ತೆಗೆದುಕೊಂಡರೂ, ಮರು ವೀಕ್ಷಣೆಗಳು ಚೆಂಡು ಸೊಂಟದ ಕೆಳಗೆ ಅದ್ದುತ್ತಿರುವುದನ್ನು ತೋರಿಸಿದವು ಮತ್ತು ವಿರಾಟ್ ಕೊಹ್ಲಿ ಕ್ರೀಸ್ನ ಹೊರಗೆ ನಿಂತಿದ್ದರು. ಒಂದು ವೇಳೆ ಪಾಪಿಂಗ್ ಕ್ರೀಸ್ನಲ್ಲಿ ನಿಂತಿದ್ದರೆ ಚೆಂಡು ಅವರ ಸೊಂಟದ ಕೆಳಗೆ ಹೋಗುತ್ತಿತ್ತು ಎಂಬುದು ಸ್ಪಷ್ಟವಾಗಿ ತೋರುತ್ತಿತ್ತು.

ಈ ಘಟನೆಯ ನಂತರ, ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರು ಐಪಿಎಲ್ 2024ರಲ್ಲಿ ಅಂಪೈರಿಂಗ್ ತೀರ್ಪುಗಳನ್ನು ಟೀಕಿಸಲು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದರು.
"ಆಡಲಾಗದ ಸ್ಪಷ್ಟ ಬೀಮರ್ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿತು ಮತ್ತು ಎಂಎಸ್ ಧೋನಿಯ ಬ್ಯಾಟ್ ಅಡಿಯಲ್ಲಿ ಹಾದುಹೋದ ಚೆಂಡು ವೈಡ್ ಎಂದು ಘೋಷಿಸಲಾಯಿತು. ಕ್ಯಾಮೆರಾಗಳು, ರಿಪ್ಲೇಗಳು, ತಂತ್ರಜ್ಞಾನ ಇದ್ದರೂ ಇನ್ನೂ ಇಂತಹ ತಪ್ಪುಗಳನ್ನು ಮಾಡಲಾಗುತ್ತಿದೆ. ಕಳಪೆ ಅಂಪೈರಿಂಗ್," ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೊಹಮ್ಮದ್ ಕೈಫ್ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಈ ಪೋಸ್ಟ್ ಅನ್ನು ವಿರಾಟ್ ಕೊಹ್ಲಿ ಕೂಡ ಲೈಕ್ ಮಾಡಿದ್ದಾರೆ.
ಅಂಪೈರ್ನೊಂದಿಗೆ ಹತಾಶೆ ವ್ಯಕ್ತಪಡಿಸಿದ್ದಕ್ಕಾಗಿ ವಿರಾಟ್ ಕೊಹ್ಲಿಗೆ ದಂಡ ವಿಧಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಐಪಿಎಲ್ ಪ್ರಕಟಣೆಯು, "ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಏಪ್ರಿಲ್ 21ರಂದು ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದ 36ನೇ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ಪಂದ್ಯದ ಶುಲ್ಕದ ಶೇ.50ರಷ್ಟು ದಂಡವನ್ನು ವಿಧಿಸಲಾಗಿದೆ," ಎಂದು ತಿಳಿಸಿದೆ.
"ವಿರಾಟ್ ಕೊಹ್ಲಿ ಐಪಿಎಲ್ನ ನೀತಿ ಸಂಹಿತೆಯ ಆರ್ಟಿಕಲ್ 2.8ರ ಅಡಿಯಲ್ಲಿ ಲೆವೆಲ್ 1 ಅಪರಾಧವನ್ನು ಎಸಗಿದ್ದಾರೆ. ಅವರು ಅಪರಾಧವನ್ನು ಒಪ್ಪಿಕೊಂಡರು ಮತ್ತು ಮ್ಯಾಚ್ ರೆಫರಿಯ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿದೆ," ಎಂದು ಹೇಳಿದೆ.
ಆರ್ಸಿಬಿ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ಆರ್ಸಿಬಿ ಬೌಲರ್ಗಳನ್ನು ದಂಡಿಸಿ ಬರೋಬ್ಬರಿ 222 ರನ್ಗಳನ್ನು ಕಲೆಹಾಕಿದರು.
ಫಿಲಿಪ್ ಸಾಲ್ಟ್ ಮತ್ತು ಸುನಿಲ್ ನರೈನ್ ಆರಂಭಿಕ ವಿಕೆಟ್ಗೆ 56 ರನ್ ಸೇರಿಸುವ ಮೂಲಕ ಕೆಕೆಆರ್ ಇನ್ನಿಂಗ್ಸ್ಗೆ ಸ್ಫೋಟಕ ಆರಂಭ ನೀಡಿದರು. ಶ್ರೇಯಸ್ ಅಯ್ಯರ್ ಅರ್ಧಶತಕ ಗಳಿಸಿದರೆ, ಕೊನೆಯಲ್ಲಿ ರಮಣದೀಪ್ ಸಿಂಗ್ 9 ಎಸೆತಗಳಲ್ಲಿ ಅಜೇಯ 24 ರನ್ ಗಳಿಸಿದರು. ಇನ್ನು ಆರ್ಸಿಬಿ ಪರ ಕ್ಯಾಮೆರಾನ್ ಗ್ರೀನ್ ಮತ್ತು ಯಶ್ ದಯಾಳ್ ತಲಾ ಎರಡು ವಿಕೆಟ್ ಪಡೆದರು.
ಚೇಸಿಂಗ್ ವೇಳೆ ಆರ್ಸಿಬಿ ತಂಡ 4 ಓವರ್ಗಳ ಒಳಗೆ ಇಬ್ಬರೂ ಆರಂಭಿಕರ ವಿಕೆಟ್ಗಳನ್ನು ಕಳೆದುಕೊಂಡಿತು. ನಂತರ ವಿಲ್ ಜ್ಯಾಕ್ಸ್ (55) ಮತ್ತು ರಜತ್ ಪಾಟಿದಾರ್ (52) ಮೂರನೇ ವಿಕೆಟ್ಗೆ 102 ರನ್ಗಳ ಜೊತೆಯಾಟ ನಿರ್ಮಿಸಿದರು.
ಅಂತಿಮ ಓವರ್ನಲ್ಲಿ ಕರ್ಣ್ ಶರ್ಮಾ 3 ಸಿಕ್ಸರ್ಗಳೊಂದಿಗೆ ಆರ್ಸಿಬಿ ತಂಡವನ್ನು ಗೆಲುವಿನ ಸಮೀಪಕ್ಕೆ ಕೊಂಡೊಯ್ದಿದ್ದರು. ಆದರೆ ಅಂತಿಮ ಎಸೆತದಲ್ಲಿ ಆರ್ಸಿಬಿ ಕೇವಲ ಒಂದು ರನ್ನಿಂದ ಗೆಲುವಿನಿಂದ ವಂಚಿತವಾಯಿತು.