ಗುರುವಾರ, ಡಿಸೆಂಬರ್ 21ರಂದು ಪಾರ್ಲ್ನ ಬೋಲ್ಯಾಂಡ್ ಪಾರ್ಕ್ನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ 78 ರನ್ಗಳಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿತು. ಈ ಮೂಲಕ ಏಕದಿನ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಸಂಜು ಸ್ಯಾಮ್ಸನ್ ಅವರ ಅಮೋಘ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 296 ರನ್ಗಳನ್ನು ಕಲೆಹಾಕಿದರು. ಪ್ರತ್ಯುತ್ತರವಾಗಿ, ದಕ್ಷಿಣ ಆಫ್ರಿಕಾ ತಂಡ 45.5 ಓವರ್ಗಳಲ್ಲಿ 218 ರನ್ಗಳಿಗೆ ಸರ್ವಪತನ ಕಂಡಿತು.

ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಗೆಲುವಿಗೆ ಇನ್ನೂ 120 ರನ್ ಅಗತ್ಯವಿದ್ದಾಗ, ಕೇಶವ್ ಮಹಾರಾಜ್ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದರು. ಕ್ರೀಸ್ಗೆ ಹೋದ ತಕ್ಷಣ, ಸ್ಟೇಡಿಯಂನಲ್ಲಿ ಹಿಂದೂ ಭಕ್ತಿಗೀತೆ "ರಾಮ್ ಸಿಯಾ ರಾಮ್' ಹಾಡನ್ನು ಪ್ಲೇ ಮಾಡಲಾಯಿತು.
ಇದನ್ನು ಆಲಿಸಿದ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್, ನೀವು ಬ್ಯಾಟಿಂಗ್ಗೆ ಬಂದಾಗಲೆಲ್ಲಾ ಡಿಜೆ ಯಾವಾಗಲೂ ಆ ಹಾಡನ್ನು ನುಡಿಸುತ್ತದೆ ಎಂದು ದಕ್ಷಿಣ ಆಫ್ರಿಕಾದ ಬ್ಯಾಟರ್ ಕೇಶವ್ ಮಹಾರಾಜ್ಗೆ ತಿಳಿಸಿದರು.
ಕೆಎಲ್ ರಾಹುಲ್ ಮತ್ತೆ ನೀವು ಬೌಲ್ ಮಾಡಲು ಬಂದಾಗಲೂ ಈ ಹಾಡನ್ನು ಪ್ಲೇ ಮಾಡಲಾಗುತ್ತದೆಯೇ ಎಂದು ಕೇಳಿದರು ಮತ್ತು ಇದಕ್ಕೆ ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ಹೌದೆಂದು ತಲೆಯಾಡಿಸಿದರು.
"ಕೇಶವ್ ಭಾಯ್ ನೀವು ಬಂದಾಗಲೆಲ್ಲಾ, ಸ್ಟೇಡಿಯಂನ ಡಿಜೆ 'ರಾಮ್ ಸಿಯಾ ರಾಮ್' ಹಾಡನ್ನು ನುಡಿಸುತ್ತಾರೆ," ಎಂದು ಕೆಎಲ್ ರಾಹುಲ್ ಸ್ಟಂಪ್ ಮೈಕ್ನಲ್ಲಿ ಮಾತನಾಡುವುದು ಕೇಳಿಸಿತು.

ಕೇಶವ್ ಮಹಾರಾಜ್ 27 ಎಸೆತಗಳಲ್ಲಿ 14 ರನ್ಗಳಿಗೆ ಅರ್ಶ್ದೀಪ್ ಸಿಂಗ್ ಬೌಲಿಂಗ್ನಲ್ಲಿ ಔಟಾದರು. ಕೊನೆಗೆ ದಕ್ಷಿಣ ಆಫ್ರಿಕಾ 45.5 ಓವರ್ಗಳಲ್ಲಿ 218 ರನ್ಗಳಿಗೆ ಆಲೌಟ್ ಆಯಿತು ಮತ್ತು ಭಾರತ 2-1 ಅಂತರದಲ್ಲಿ ಸರಣಿ ಗೆದ್ದಿತು.
ಭಾರತದ ಬ್ಯಾಟಿಂಗ್ ಇನ್ನಿಂಗ್ಸ್ನಲ್ಲಿ ತಿಲಕ್ ವರ್ಮಾ ಅವರನ್ನು ಔಟ್ ಮಾಡುವ ಮೂಲಕ ಕೇಶವ್ ಮಹಾರಾಜ್ 37 ರನ್ ನೀಡಿ 1 ವಿಕೆಟ್ ಕಬಳಿಸಿದರು.
ಭಾರತದ ಪರ ಅರ್ಶ್ದೀಪ್ ಸಿಂಗ್ ಅವರು ಒಂಬತ್ತು ಓವರ್ಗಳಲ್ಲಿ30 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಆತಿಥೇಯ ಬ್ಯಾಟಿಂಗ್ ವಿಭಾಗದ ಬೆನ್ನೆಲುಬು ಮುರಿದರು. ಅವೇಶ್ ಖಾನ್ 45 ರನ್ ನೀಡಿ 2 ವಿಕೆಟ್ ಮತ್ತು ವಾಷಿಂಗ್ಟನ್ ಸುಂದರ್ 38 ರನ್ ನೀಡಿ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಸಂಜು ಸ್ಯಾಮ್ಸನ್ ಅವರು ತಮ್ಮ ಮೊದಲ ಏಕದಿನ ಅಂತಾರಾಷ್ಟ್ರೀಯ ಶತಕವನ್ನು ದಾಖಲಿಸಿದರು. ಅವರ ಇನ್ನಿಂಗ್ಸ್ನಲ್ಲಿ 114 ಎಸೆತಗಳನ್ನು ಎದುರಿಸಿ 6 ಬೌಂಡರಿ ಮತ್ತು 3 ಸಿಕ್ಸರ್ ಸಮೇತ 108 ರನ್ಗಳ ಅದ್ಭುತ ಶತಕ ಬಾರಿಸಿದರು.
ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ 114 ಎಸೆತಗಳಲ್ಲಿ 108 ರನ್ಗಳ ಜೊತೆಯಾಟ ನೀಡಿದರೆ, ರಿಂಕು ಸಿಂಗ್ 27 ಎಸೆತಗಳಲ್ಲಿ 38 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು. ಈ ಮೂವರು ಭಾರತದ ಮೊತ್ತ 296 ರನ್ ಗಳಿಸಲು ಸಹಾಯ ಮಾಡಿದರು.