ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಫೈ ನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನುಭವಿಸಿದ ಸೋಲು ಭಾರತೀಯ ಅಭಿಮಾನಿಗಳನ್ನು ಸುದೀರ್ಘವಾಗಿ ಕಾಡಲಿದೆ. ಭಾರತೀಯ ಕ್ರಿಕೆಟ್ ತಂಡದ ಆಟಗಾರರಿಗೂ ಈ ಆಘಾತದಿಂದ ಹೊರಬರಲು ಕೆಲ ಸಮಯಗಳೇ ಬೇಕಾಗಿದೆ. ಈ ಆಘಾತಕಾರಿ ಸೋಲಿನ ನಾಲ್ಕು ದಿಬಗಳ ಬಳಿಕ ಟೀಮ್ ಇಂಡಿಯಾದ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಪ್ರತಿಕ್ರಿಯೆ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಡಾಂಗಣ ಅಹ್ಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಭಾರತ 6 ವಿಕೆಟ್ಗಳ ಅಂತರದಿಂದ ಸೋಲು ಅನುಭವಿಸಿತ್ತು. ಇದೀಗ ಕೆಎಲ್ ರಾಹುಲ್ 'ಎಕ್ಸ್'ನಲ್ಲಿ ಪೋಸ್ಟ್ ಹಾಕಿದ್ದಾರೆ. ಪಂದ್ಯದ ಕೆಲ ಫೋಟೋಗಳೊಂದಿಗೆ ಕೆಎಲ್ ರಾಹುಲ್, "ಇನ್ನೂ ನೋವಿದೆ" ಎಂದು ಬರೆದುಕೊಂಡಿದ್ದಾರೆ.

ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಕೆಎಲ್ ರಾಹುಲ್ ಅತಿ ಹೆಚ್ಚು ರನ್ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ ನಿಧಾನಗತಿಯ ಬ್ಯಾಟಿಂಗ್ ನಡೆಸಿದ ಕಾರಣಕ್ಕಾಗಿ ರಾಹುಲ್ ಸಾಕಷ್ಟು ಟೀಕೆಗೂ ಗುರಿಯಾಗಿದ್ದಾರೆ. ಈ ಪಂದ್ಯದಲ್ಲಿ 107 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ 66 ರನ್ಗಳನ್ನು ಬಾರಿಸಿದ್ದರು. 49 ಡಾಟ್ ಬಾಲ್ಗಳನ್ನು ಆಡಿದ್ದ ಅವರು 52 ಸಿಂಗಲ್ ಹಾಗೂ 5 ಡಬಲ್ಸ್ ಆಡಿದ್ದರು.
ಈ ಬಾರಿಯ ವಿಶ್ವಕಪ್ ಟೂರ್ನಿಯುದ್ದಕ್ಕೂ ಟೀಮ್ ಇಂಡಿಯಾ ಅಮೋಘ ಆಟವನ್ನು ಪ್ರದರ್ಶಿಸಿತ್ತು. ಸತತ ಹತ್ತು ಗೆಲುವುಗಳನ್ನು ಸಾಧಿಸಿ ಫೈನಲ್ಗೆ ಪ್ರವೇಶ ಪಡೆದುಕೊಂಡಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಮಧ್ಯೆ ಆಸ್ಟ್ರೇಲಿಯಾ ವಿರುದ್ಧ ಆಘಾತಕಾರಿಯಾಗಿ ಸೋಲು ಅನುಭವಿಸಿ ವಿಶ್ವಕಪ್ ಕನಸನ್ನು ಭಗ್ನಗೊಳಿಸಿತ್ತು.
ಇನ್ನು ಈ ಸೋಲಿನ ಬಗ್ಗೆ ಟೀಮ್ ಇಂಡಿಯಾದ ಮತ್ತೋರ್ವ ಆಟಗಾರ ಕುಲ್ದೀಪ್ ಯಾದವ್ ವಿಶ್ವಕಪ್ ಸೋಲಿನ ಸಂಕಟ ಹಾಗೆಯೇ ಉಳಿದುಕೊಳ್ಳಲಿದೆ ಎಂದಿದ್ದು ಮುಂದಿನ ಅವಕಾಶದಲ್ಲಿ ಮತ್ತಷ್ಟು ಕಠಿಣ ಹೋರಾಟ ನೀಡುವುದಾಗಿ ಹೇಳಿಕೊಂಡಿದ್ದಾರೆ.
"ಚೆನ್ನೈಯಿಂದ ಅಹ್ಮದಾಬಾದ್ವರೆಗಿನ ನಮ್ಮ ಪ್ರಯಾಣ ನಿರಾಸೆಯೊಂದಿಗೆ ಅಂತ್ಯವಾಗಿದೆ. ಆದರೆ ಆರು ವಾರಗಳಲ್ಲಿ ನಾವು ನೀಡಿದ ಪ್ರದರ್ಶನದ ಬಗ್ಗೆ ನಮಗೆ ಹೆಮ್ಮೆಯಿದೆ. ನೋವಿನ ಹೊರತಾಗಿಯೂ ನಾವು ಮುಂದಿನ ದಿನಗಳಲ್ಲಿ ನಮ್ಮ ಪರಿಶ್ರಮವನ್ನು ಮತ್ತಷ್ಟು ಹೆಚ್ಚಿಸಲಿದ್ದೇವೆ" ಎಂದು ಕುಲ್ದೀಪ್ ಯಾದವ್ 'ಎಕ್ಸ್' ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
"ಸೋಲಿನ ನೋವು ಕಾಡುತ್ತಿರುವಂತೆಯೇ ನಾವು ಮುನ್ನಡೆಯಬೇಕು; ಜೀವನವು ಮುಂದುವರಿಯುತ್ತದೆ ಮತ್ತು ಚೇತರಿಕೆಗೆ ಸಮಯ ತೆಗೆದುಕೊಳ್ಳುತ್ತದೆ. ಕಪ್ ಸುಂದರವಾಗಿತ್ತು ಆದರೆ ದೇವರಿಗೆ ಇತರ ಯೋಜನೆಗಳಿವೆ ಎಂದು ತೋರುತ್ತದೆ. ಇದು ಸ್ವಿಚ್ ಆಫ್ ಮತ್ತು ರೀಚಾರ್ಜ್ ಮಾಡುವ ಸಮಯ. ಈ ಹಿನ್ನಡೆಯನ್ನು ನಿಭಾಯಿಸುವುದು ಬಹಳ ಕಠಿಣ. ಆದರೆ ನಾವು ನಂಬಿಕೆಯನ್ನು ಹೊಂದಿದ್ದೇವೆ ಮತ್ತು ಮುಂದಿನ ಪ್ರಯಾಣದ ಮೇಲೆ ನಂಬಿಕೆಯಿಟ್ಟುಕೊಂಡಿದ್ದೇವೆ" ಎಂದಿದ್ದಾರೆ ಕುಲ್ದೀಪ್ ಯಾದವ್.