ಸೆಂಚುರಿಯನ್ನಲ್ಲಿ ನಡೆದಿರುವ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕೆಎಲ್ ರಾಹುಲ್ 137 ಎಸೆತಗಳಲ್ಲಿ 101 ರನ್ ಗಳಿಸಿ ಅಬ್ಬರಿಸಿದ್ದರು.
ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಯಶಸ್ವಿ ಜೈಸ್ವಾಲ್, ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಈ ವೇಳೆ ಟೀಮ್ ಇಂಡಿಯಾಕ್ಕೆ ಮಿಡ್ಲ್ ಆರ್ಡರ್ ಬ್ಯಾಟರ್ ಕೆ.ಎಲ್ ರಾಹುಲ್ ತಂಡಕ್ಕೆ ಆಧಾರವಾದರು. ಅಲ್ಲದೆ ಕರ್ನಾಟಕದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಶತಕ ಬಾರಿಸಿ ತಮ್ಮ ಕ್ಷಮತೆಯನ್ನು ತಿಳಿಸಿದರು.

ಶತಕದ ನಂತರ ಸ್ಟಾರ್ ಸ್ಪೋರ್ಟ್ಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಹುಲ್ ಟೀಕೆಗೆ ಸಂಬಂಧಿಸಿದಂತೆ ಉತ್ತರ ನೀಡಿದ್ದಾರೆ. 'ಮೊದಲು ನನ್ನನ್ನು ಟೀಕಿಸುತ್ತಿದ್ದವರು ಈಗ ನನ್ನನ್ನು ಹೊಗಳುತ್ತಿದ್ದಾರೆ. ವಿಮರ್ಶಕರಿಗೆ ನಿಮ್ಮ ಆಟದಿಂದಲೇ ನಿಜವಾದ ಉತ್ತರ ನೀಡಬೇಕು. ನಾನು ಸೋಷಿಯಲ್ ಮೀಡಿಯಾದಿಂದ ದೂರ ಉಳಿಯಲು ಪ್ರಾರಂಭಿಸಿದೆ. ನೀವು ಎಷ್ಟು ಸಾಮಾಜಿಕ ತಾಣದಿಂದ ದೂರವಿರುತ್ತಿರೋ, ನೀವು ಹೆಚ್ಚು ಸಂತೋಷವಾಗಿರುತ್ತೀರಿ ಎಂದು ತಿಳಿಸಿದ್ದಾರೆ.
ಜನರ ಮನಸ್ಥಿತಿ ಬದಲಾಯಿಸಲು ಸಾಧ್ಯವಿಲ್ಲ ಎಂದು ರಾಹುಲ್ ಹೇಳಿದರು. ಜನರಿಗೆ ವಾಕ್ ಸ್ವಾತಂತ್ರ್ಯವಿದೆ. ಆದರೆ ಜನರ ಕೆಲವು ವಿಷಯಗಳು ತುಂಬಾ ನೋವುಂಟುಮಾಡುತ್ತವೆ ಎಂದಿದ್ದಾರೆ.

ಟೀಕೆಗಳ ಬಗ್ಗೆ ವಿವರವಾಗಿ ಉತ್ತರ ನೀಡಿದ ಅವರು, ನಾನು ಅದನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಬಹುದಿತ್ತು ಎಂದು ನನಗೆ ತೋರುತ್ತದೆ. ಆಗ ನಾನು ಮಾನಸಿಕವಾಗಿ ಆ ರೀತಿಯ ಟೀಕೆಗಳನ್ನು ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಆ ಸಮಯದಲ್ಲಿ ನಾನು ಏನು ಮಾಡುತ್ತಿದ್ದೇನೆ? ನಾನು ಯಾಕೆ ಈ ಗಾಯಗಳಿಂದ ಬಳಲುತ್ತಿದ್ದೇನೆ? ಮತ್ತು ಅನೇಕರು ನನ್ನನ್ನು ಏಕೆ ಟೀಕಿಸುತ್ತಿದ್ದಾರೆ ಎಂದು ನಾನು ಯೋಚಿಸುತ್ತಿದ್ದೆ. ಈಗ ಇದು ವೃತ್ತಿಜೀವನದ ಒಂದು ಭಾಗವಾಗಿತ್ತು ಎಂದು ನಾನು ಭಾವಿಸುತ್ತೇನೆ. ನೀವು ಒಳ್ಳೆಯ ಮತ್ತು ಕೆಟ್ಟ ವಿಷಯಗಳನ್ನು ಸಮತೋಲಿತ ರೀತಿಯಲ್ಲಿ ತೆಗೆದುಕೊಳ್ಳಲು ಆರಂಭಿಸಬೇಕು ಎಂದು ತಿಳಿಸಿದ್ದಾರೆ.
ಗಾಯದ ಕಾರಣ ಕ್ರಿಕೆಟ್ನಿಂದ ದೂರವಿದ್ದಾಗ ನಾನು ನನ್ನನ್ನು ಬಲ ಗೊಳ್ಳಿಸುವತ್ತ ಕೆಲಸ ಮಾಡಿದ್ದೇನೆ. ನೀವು ಅಂತರಾಷ್ಟ್ರೀಯ ಮಟ್ಟದಲ್ಲಿ ಆಡುವಾಗ, ನೀವು ವೈಯಕ್ತಿಕವಾಗಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಾನು ಆಟದಿಂದ ದೂರವಿರುವ ಸಮಯದಲ್ಲಿ, ನನ್ನ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಲು ನಾನು ಕೆಲಸ ಮಾಡಿದ್ದೇನೆ ಏಕೆಂದರೆ ನನಗೆ ಸಹಾಯ ಮಾಡಲು ಅಲ್ಲಿ ಜನರು ಇದ್ದರು ಎಂದಿದ್ದಾರೆ.

ಸೆಂಚುರಿಯನ್ ಪಿಚ್ನಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟಕರವಾಗಿತ್ತು. ಆದರೆ ಎರಡನೇ ಮತ್ತು ಮೂರನೇ ದಿನ ಇಂತಹ ಪಿಚ್ಗಳಲ್ಲಿ ಬ್ಯಾಟಿಂಗ್ ಮಾಡುವುದು ಸುಲಭ ಎಂದು ರಾಹುಲ್ ಹೇಳಿದರು. ಎರಡನೇ ದಿನ, ನಾನು 7-8 ಓವರ್ಗಳ ಬ್ಯಾಟಿಂಗ್ ಮಾಡಿದಾಗ, ಇಲ್ಲಿ ಬ್ಯಾಟಿಂಗ್ ಸುಲಭ ಎಂದು ನಾನು ಅರಿತುಕೊಂಡೆ ಎಂದು ಹೇಳಿದ್ದಾರೆ.
ಸುನಿಲ್ ಗವಾಸ್ಕರ್ ಅವರಿಗೂ ರಾಹುಲ್ ಕೃತಜ್ಞತೆ ಸಲ್ಲಿಸಿದರು. ರಾಹುಲ್ ಅವರ ಇನ್ನಿಂಗ್ಸ್ ಭಾರತದ 10 ಅತ್ಯುತ್ತಮ ಇನ್ನಿಂಗ್ಸ್ಗಳಲ್ಲಿ ಒಂದಾಗಿದೆ ಎಂದು ಗವಾಸ್ಕರ್ ಹೇಳಿದ್ದರು.