ಐಪಿಎಲ್ ಹರಾಜಿಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ತಂಡಗಳು ಖರೀದಿಸಬಹುದಾದ ಆಟಗಾರರ ಬ್ಲ್ಯೂ ಪ್ರಿಂಟ್ ಮಾಡಿಕೊಳ್ಳುತ್ತಿವೆ. ಮಾಲೀಕರು ಸಹ ಈ ಆಟಗಾರರನ್ನು ಕೈ ಬಿಟ್ಟು, ಇವರಿಗೆ ಮಣೆ ಹಾಕೋಣ ಎಂಬ ಲೆಕ್ಕಾಚಾರ ನಡೆಸಿದ್ದಾರೆ. ಈ ಬೆನ್ನಲ್ಲೆ ಕೆಎಲ್ ರಾಹುಲ್ ಅವರ ದೊಡ್ಡ ಹೇಳಿಕೆ ನೀಡಿದ್ದಾರೆ.
ಇತ್ತೀಚಿಗೆ ಸಂದರ್ಶನವೊಂದರಲ್ಲಿ ರಾಹುಲ್ ಐಪಿಎಲ್ ಮಾಲೀಕರ ಮನಸ್ಥಿತಿಯ ಬಗ್ಗೆ ತುಟಿ ಬಿಚ್ಚಿದ್ದಾರೆ. ಈ ಮೂಲಕ ಎಲ್ಎಸ್ಜಿ ಮಾಲೀಕ ಸಂಜೀವ್ ಗೋಯೆಂಕಾ ಹಾಗೂ ಅವರ ನಡುವಿನ ಶೀತಲ ಸಮರಕ್ಕೆ ಉತ್ತರ ನೀಡಿದಂತಿದೆ. ಇದೇ ವೇಳೆ ರಾಹುಲ್ ಹಲವು ಅಂಶಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಆಟಗಾರರೊಂದಿಗೆ ಮಾಲೀಕರು ಹೇಗೆ ನಡೆದುಕೊಳ್ಳುತ್ತಾರೆ ಎಂಬ ಸತ್ಯಗಳನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ. ಕಳೆದ ಆವೃತ್ತಿಯಲ್ಲಿ ಎಲ್ಎಸ್ಜಿ ಐಪಿಎಲ್ ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿತ್ತು. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸನ್ ರೈಸರ್ಸ್ ವಿರುದ್ಧ ಸೋತಾಗ, ತಂಡದ ನಾಯಕ ರಾಹುಲ್ ಹಾಗೂ ಸಂಜೀವ್ ಗೋಯೆಂಕಾ ಮಾತಿನ ಚಕಮಕಿ ನಡೆದಿತ್ತು. ಇಂತಹ ವಿಷಯಗಳು ಐಪಿಎಲ್ನಲ್ಲಿ ನಡೆಯುವುದು ಏಕೆ ಎಂಬ ಬಗ್ಗೆ ರಾಹುಲ್ ಬಹಿರಂಗ ಪಡಿಸಿದ್ದಾರೆ.
ನಿಖಿಲ್ ಕಾಮತ್ ಪಾಡ್ಕಾಸ್ಟ್ನಲ್ಲಿ ಮಾತನಾಡಿರುವ ರಾಹುಲ್, ಮಾಲೀಕರು ವ್ಯಾಪಾರದ ಹಿನ್ನೆಲೆಯನ್ನು ಹೊಂದಿದವರಾಗಿದ್ದಾರೆ. ಅವರು ಆಟಗಾರರನ್ನು ಕೆಲವು ರಿಸರ್ಚ್ ಮಾಡಿ ಪಡೆದುಕೊಳ್ಳುತ್ತಾರೆ. ಪೇಪರ್ ಮೇಲೆ ಕಾಣುವ ಡೇಟಾಗಳು ಆಟಗಾರನ ಪ್ರದರ್ಶನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇನ್ನು ಕ್ರೀಡಾಪಟುಗಳ ಸಹ ಎಲ್ಲರಂತೆ ಕೆಟ್ಟ ದಿನಗಳನ್ನು ಹೊಂದಿರುತ್ತಾರೆ. ಒಂದು ಆವೃತ್ತಿಯಲ್ಲಿ ಇವರು ಸ್ಥಿರ ಪ್ರದರ್ಶನ ನೀಡದೇ ಕಾರಣಕ್ಕೆ ಅವರನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಮಾಲೀಕರ ಜೊತೆಗಿನ ವಾಗ್ವಾದದ ಬಳಿಕ, ಫ್ರಾಂಚೈಸಿ ಅವರನ್ನು ತಂಡದಿಂದ ಕೈ ಬಿಡಬಹುದು ಎಂಬ ಸಂಶಯ ಮೂಡಿದೆ. ಐಪಿಎಲ್ 2025 ರ ಮೊದಲು ಮೆಗಾ ಹರಾಜು ನಡೆಯಲಿದೆ. ರಾಹುಲ್ ಲಕ್ನೋದಿಂದ ಬಿಡುಗಡೆಯಾದರೆ, ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮರಳಬಹುದು ಎಂದು ತಿಳಿದು ಬಂದಿದೆ. ಆದರೆ, ಈ ವಿಷಯದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.

ಕರ್ನಾಟಕದ ಸ್ಟಾರ್ ಕೆಎಲ್ ರಾಹುಲ್ ಐಪಿಎಲ್ನಲ್ಲಿ ಇದುವರೆಗೆ 132 ಪಂದ್ಯಗಳನ್ನು ಆಡಿದ್ದು, 45.47 ಸರಾಸರಿ ಮತ್ತು 134.61 ಸ್ಟ್ರೈಕ್ ರೇಟ್ನಲ್ಲಿ 4683 ರನ್ ಗಳಿಸಿದ್ದಾರೆ. ಇದೇ ವೇಳೆ ರಾಹುಲ್ ನಾಲ್ಕು ಬಾರಿ ಮೂರಂಕಿ ದಾಟಿದರೆ, 37ಕ್ಕೂ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಸಾಧನೆ ಮಾಡಿದ್ದಾರೆ.