
ಮುಂಬೈ, ಸೆ. 12: ಭಾರತ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿರುವ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಟೆಸ್ಟ್ ಸರಣಿಗೆ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ಘೋಷಿಸಿದೆ.
ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಶುಭ್ ಮನ್ ಗಿಲ್ ಅವರಿಗೆ ತಂಡಕ್ಕೆ ಹೊಸ ಸೇರ್ಪಡೆಯಾಗಿದೆ.
ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಎರಡು ಟೆಸ್ಟ್ ಪಂದ್ಯಗಳಲ್ಲಿ ರಾಹುಲ್ ಕೇವಲ 101 ರನ್ ಗಳಿಸಲು ಮಾತ್ರ ಸಾಧ್ಯವಾಗಿತ್ತು. ಇನ್ನೊಂದೆಡೆ ಕರ್ನಾಟಕದ ಸಹ ಆಟಗಾರ ಮಯಾಂಕ್ ಅಗರವಾಲ್ ಅರ್ಧಶತಕ ಗಳಿಸಿ ಸ್ಥಾನ ಗಟ್ಟಿ ಮಾಡಿಕೊಂಡರು.
2018ರಿಂದ ಕಳೆದ ವೆಸ್ಟ್ ಇಂಡೀಸ್ ಪ್ರವಾಸದ ತನಕ ಕೆಎಲ್ ರಾಹುಲ್, ಮುರಳಿ ವಿಜಯ್, ಶಿಖರ್ ಧವನ್, ಪೃಥ್ವಿ ಪಟೇಲ್, ಪೃಥ್ವಿ ಶಾ, ಮಯಾಂಕ್ ಅಗರವಾಲ್, ಹನುಮ ವಿಹಾರಿ ಹೀಗೆ ಅನೇಕ ಓಪನರ್ ಗಳನ್ನು ಟೆಸ್ಟ್ ತಂಡ ಕಂಡಿದೆ.
ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮ ಹಾಗೂ ಮಯಾಂಕ್ ಅಗರವಾಲ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯಲಿದ್ದಾರೆ. ಟೆಸ್ಟ್ ತಂಡದ ಆರಂಭಿಕರಾದ ಶಿಖರ್ ಧವನ್ ಹಾಗೂ ಮುರಳಿ ವಿಜಯ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರೆ, ಪೃಥ್ವಿ ಶಾ ಮೇಲೆ ನಿಷೇಧದ ತೂಗುಗುತ್ತಿಯಿದೆ.ಉಳಿದಂತೆ ಹಾರ್ದಿಕ್ ಪಾಂಡ್ಯರನ್ನು ಆಯ್ಕೆಗೆ ಪರಿಗಣಿಸಿಲ್ಲ.
36 ಟೆಸ್ಟ್ ಪಂದ್ಯಗಳನ್ನಾಡಿರುವ ರಾಹುಲ್ ಕಳೆದ 7 ಪಂದ್ಯಗಳಿಂದ ಒಂದು ಅರ್ಧಶತಕ ಗಳಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ರಾಹುಲ್ ರನ್ನು ತಂಡದಿಂದ ಕೈ ಬಿಡುವುದು ಅನಿವಾರ್ಯವಾಗಿತ್ತು.
ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿರುವ ಭಾರತ, ವಿಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಗೆಲ್ಲುವ ಮೂಲಕ 120 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾಕ್ಕೆ ಭಾರತದ ವಿರುದ್ಧದ ಪಂದ್ಯವೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಮೊದಲ ಪಂದ್ಯವಾಗಲಿದೆ. ಅಕ್ಟೋಬರ್ 02ರಂದು ವಿಶಾಖಪಟ್ಟಣಂನಲ್ಲಿ ಮೊದಲ ಪಂದ್ಯ ನಡೆಯಲಿದೆ.
ಅಭ್ಯಾಸ ಪಂದ್ಯ ಅಧ್ಯಕ್ಷೀಯ ಎಲೆವೆನ್: ರೋಹಿತ್ ಶರ್ಮ (ನಾಯಕ), ಮಯಾಂಕ್ ಅಗರವಾಲ್, ಪ್ರಿಯಾಂಕ್ ಪಾಂಚಲ್, ಎಆರ್ ಈಶ್ವರನ್, ಕರುಣ್ ನಾಯರ್, ಸಿದ್ದೇಶ್ ಲಾಡ್, ಕೆಎಸ್ ಭರತ್ (ವಿಕೆಟ್ ಕೀಪರ್), ಜಲಜ್ ಸಕ್ಸೇನಾ, ಧರ್ಮೇಂದ್ರ ಸಿಂಗ್ ಜಡೇಜ, ಆವೇಶ್ ಖಾನ್, ಇಶಾನ್ ಪೊರೆಲ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್.
ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಟೆಸ್ಟ್ ಪಂದ್ಯಗಳ ಸರಣಿಗೆ ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ಮಯಾಂಕ್ ಅಗರವಾಲ್, ರೋಹಿತ್ ಶರ್ಮ, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ(ಉಪ ನಾಯಕ), ಹನುಮ ವಿಹಾರಿ, ರಿಷಬ್ ಪಂತ್(ವಿಕೆಟ್ ಕೀಪರ್), ಆರ್ ಆಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ ಪ್ರೀತ್ ಬೂಮ್ರಾ, ಇಶಾಂತ್ ಶರ್ಮ, ಶುಭಮನ್ ಗಿಲ್.