ಏಷ್ಯಾ ಕಪ್ ಟೂರ್ನಿಯ ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲಿ ಟೀಮ್ ಇಂಡಿಯಾದ ಇಬ್ಬರು ಆಟಗಾರರ ಲಭ್ಯತೆಯ ಬಗ್ಗೆ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿದೆ. ಅನುಭವಿ ವೇಗಿ ಜಸ್ಪ್ರೀತ್ ಬೂಮ್ರಾ ಐರ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗುವ ಮೂಲಕ ಅನುಮಾನಗಳಿಗೆ ಉತ್ತರ ನೀಡಿದ್ದರೆ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಐಯ್ಯರ್ ವಿಚಾರವಾಗಿ ಗೊಂದಲ ಉಳಿದುಕೊಂಡಿತ್ತು. ಆ ಪೈಕಿ ಕೆಎಲ್ ರಾಹುಲ್ ಏಷ್ಯಾ ಕಪ್ಗೆ ಸಂಪೂರ್ಣವಾಗಿ ಫಿಟ್ ಆಗಿರಲಿದ್ದು ಕಣಕ್ಕಿಳಿಯಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದು ಕೆಎಲ್ ರಾಹುಲ್ 'ಫಿಟ್' ಆಗಿದ್ದಾರೆ ಎಂದು ವರದಿಯಲ್ಲಿ ಹೇಳಿದೆ. ಅಲ್ಲದೆ ಏಷ್ಯಾ ಕಪ್ ಟೂರ್ನಿಗೆ ರಾಹುಲ್ ಭಾರತ ತಂಡದ ಭಾಗವಾಗಿರಲಿದ್ದಾರೆ ಎಂದು ಕೂಡ ವರದಿಯಲ್ಲಿ ತಿಳಿಸಲಾಗಿದೆ. ಆದರೆ ಶ್ರೇಯಸ್ ಐಯ್ಯರ್ ಚೇತರಿಕೆಯ ವಿಚಾರವಾಗಿ ಮಾತ್ರ ಯಾವುದೇ ಮಾಹಿತಿಗಳು ಹೊರಬಿದ್ದಿಲ್ಲ.

ಇನ್ನು ಹ್ಯಾಮ್ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕೆಎಲ್ ರಾಹುಲ್ ಚೇತರಿಸಿಕೊಳ್ಳುತ್ತಿದ್ದರೂ ಏಷ್ಯಾ ಕಪ್ಗೆ ಅವರು ಲಭ್ಯವಾಗುವ ಸಾಧ್ಯತೆ ಕಡಿಮೆ ಎಂದು ಗುರುವಾರಷ್ಟೇ ವರದಿಯೊಂದು ತಿಳಿಸಿತ್ತು. ಇತ್ತ ಮತ್ತೊಂದೆಡೆ ಶ್ರೇಯಸ್ ಐಯ್ಯರ್ ಈ ವಿಶ್ವಕಪ್ ಟೂರ್ನಿಯ ವೇಳೆಗೂ ಸಂಪೂರ್ಣವಾಗಿ ಸಿದ್ಧವಾಗುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿತ್ತು.
ಇನ್ನು ಬಿಸಿಸಿಐ ಈ ಇಬ್ಬರು ಆಟಗಾರರ ಚೇತರಿಕೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರೂ ಈ ಜೋಡಿಯ ಕಮ್ಬ್ಯಾಕ್ ದಿನಾಂಕವನ್ನು ಸ್ಪಷ್ಟಪಡಿಸಿಲ್ಲ. ಪಂದ್ಯವನ್ನಾಡಲು ಈ ಆಟಗಾರರು ನಿಧಾನವಾಗಿ ತಮ್ಮ ಕೆಲಸದ ಹೊರೆಯನ್ನು ಹೆಚ್ಚಿಸುತ್ತಿದ್ದಾರೆ ಎಂದು ಮಾಹಿತಿಯನ್ನು ಮಾತ್ರವೇ ನೀಡಿದೆ ಬಿಸಿಸಿಐ.
ಐಪಿಎಲ್ನಲ್ಲಿ ಲಕ್ನೋ ಸೂಪರ್ ತಂಡದ ನಾಯಕನಾಗಿರುವ ಕೆಎಲ್ ರಾಹುಲ್ ಕಳೆದ ಆವೃತ್ತಿಯ ಲೀಗ್ ಹಂತದ ಕೊನೆಯ ಘಟದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಅದಾದ ಬಳಿಕ ಟೂರ್ನಿಯಿಂದ ರಾಹುಲ್ ಹೊರಬಿದ್ದಿದ್ದು ಶಸ್ತ್ರಚಿಕಿತ್ಸೆಗ ಒಳಗಾಗಿದ್ದರು. ಇದೀಗ ಸಂಪೂರ್ಣ ಚೇತರಿಸಿಕೊಂಡಿರುವ ರಾಹುಲ್ ಎನ್ಸಿಎನಲ್ಲಿ ಅಭ್ಯಾಸದಲ್ಲಿ ನಿರತವಾಗಿದ್ದಾರೆ.
ಇನ್ನು ಕೆಎಲ್ ರಾಹುಲ್ ಇತ್ತೀಚೆಗೆ ಈ ಹಿಂದಿನ ಲಯವನ್ನು ಕಳೆದುಕೊಂಡಿದ್ದು ಆಟದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿ ಸತತವಾಗಿ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ವಿಶ್ವಕಪ್ನಂಥಾ ಮಹತ್ವದ ಟೂರ್ನಿಗೂ ಮುನ್ನ ರಾಹುಲ್ ಕೆಲ ಪಂದ್ಯಗಳಲ್ಲಿ ಆಡಿ ತಮ್ಮ ಲಯವನ್ನು ಕಂಡುಕೊಳ್ಳುವುದು ಕೂಡ ಅಗತ್ಯವಾಗಿದ್ದು ಏಷ್ಯಾಕಪ್ನಲ್ಲಿ ಆಡುವುದು ಮಹತ್ವ ಪಡೆದುಕೊಂಡಿದೆ.