ಭಾರತದಲ್ಲಿ ಸದ್ಯ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕಲರವ ಹೆಚ್ಚಾಗಿದ್ದು, ಮುಂದಿನ ತಿಂಗಳು ಅಂದರೆ ಮೇ 26 ರಂದು ಮುಕ್ತಾಯವಾಗಲಿದೆ. ಇದಾದ ನಂತರ ಎಲ್ಲರ ಚಿತ್ತ 2024ರ ಟಿ20 ವಿಶ್ವಕಪ್ ಅತ್ತ ಎನ್ನುವಂತೆ ಆಗಿದೆ. ಅಷ್ಟರ ಮಟ್ಟಿಗೆ ಬಹುನಿರೀಕ್ಷಿತ ಈ ಟೂರ್ನಿ ಕ್ರಿಕೆಟ್ ಪ್ರೇಮಿಗಳನ್ನು ಆರ್ಕಷಿಸಿದೆ.
ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ನೆಲದಲ್ಲಿ ಜೂನ್ 1 ರಿಂದ 29 ರವರೆಗೆ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ತಂಡವನ್ನು ಪ್ರಕಟಿಸಲು ಮೇ 1 ಕೊನೆಯ ದಿನ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೂಚನೆ ನೀಡಿತ್ತು. ಅದರಂತೆ ಎಲ್ಲರ ಕುತೂಹಲ ಹೆಚ್ಚಿಸಿದ ಭಾರತ ತಂಡದ ಆಟಗಾರರ ಆಯ್ಕೆ ಪ್ರಕ್ರಿಯೆ ಮುಕ್ತಾಯವಾಗಿದೆ.

ಆದರೆ ಟೀಮ್ ಇಂಡಿಯಾದಲ್ಲಿ ಕೆಲ ಆಟಗಾರರ ಆಯ್ಕೆ ಆಚ್ಚರಿ ತಂದರೆ, ಇನ್ನುಳಿದ ಸ್ಟಾರ್ ಆಟಗಾರ ಹೆಸರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೈ ಬಿಟ್ಟಿರುವುದು ಅಘಾತಕಾರಿಯಾಗಿದೆ. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಮತ್ತು ವಿಕೆಟ್ ಕೀಪರ್ ಕೆಎಲ್ ರಾಹುಲ್ ಅವರನ್ನು 2024ರ ಟಿ20 ವಿಶ್ವಕಪ್ ತಂಡದಿಂದ ಬಿಸಿಸಿಐ ಕೈ ಬಿಟ್ಟಿದೆ. ಯಾವ ಕಾರಣಕ್ಕೆ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿಲ್ಲ ಎಂಬ ಕಾರಣವನ್ನು ಬಿಸಿಸಿಐ ಇನ್ನು ತಿಳಿಸಿಲ್ಲ.
ಕೆ ಎಲ್ ರಾಹುಲ್ ಟಿ 20 ವಿಶ್ವಕಪ್ ತಂಡದಿಂದ ಸ್ಥಾನ ಮಿಸ್ ಆಗಿದ್ದಕ್ಕೆ ಕಾರಣಗಳನ್ನು ಹುಡುಕುತ್ತಾ ಹೊರಾಟಗ ನೂರಾರು ಕಾರಣಗಳು ಕಣ್ಣು ಮುಂದೆ ಹಾದು ಹೋಗುತ್ತವೆ. ಸದ್ಯ ಕನ್ನಡಿಗ ರಾಹುಲ್ ಅವರ ಫಾರ್ಮ್ ಗಮನಿಸಿದ ಬಿಸಿಸಿಐ ಆಯ್ಕೆ ಸಮಿತಿ ಅವರನ್ನು ತಂಡದಿಂದ ಕೈ ಬಿಟ್ಟಿರುವುದು ಸುಳ್ಳು ಅಲ್ಲವೇ ಅಲ್ಲ.

ಲಖ್ನೋ ಸೂಪರ್ ಜೈಂಟ್ಸ್ ತಂಡದ ಪರ ಆರಂಭಿಕ ಕೆಲವು ಪಂದ್ಯಗಳಲ್ಲಿ ರಾಹುಲ್ ಇಂಪ್ಯಾಕ್ಟ್ ಪ್ಲೇಯರ್ ರೂಪದಲ್ಲಿ ಆಡಿದರು. ಈ ಮೂಲಕ ಇವರ ಫಿಟ್ನೆಸ್ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ರಾಹುಲ್ ಆಯ್ಕೆ ಮಾಡದೇ ಇರಲು ಅವರ ಗಾಯದ ಸಮಸ್ಯೆ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ಇತ್ತೀಚಿಗೆ ಭಾರತದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಾಹುಲ್ ಎರಡನೇ ಪಂದ್ಯದಿಂದ ತಂಡದಿಂದ ಹೊರಗುಳಿದಿದ್ದರು. ಅವರು ಗಾಯದಿಂದ ಚೇತರಿಸಿಕೊಂಡು ಐಪಿಎಲ್ಗೆ ಮರಳಿದ್ದಾರೆ. ಆದರೆ ಬಿಸಿಸಿಐ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡದಿರಲು ಫಿಟ್ ಆಗದೇ ಇರುವುದು ಪ್ರಮುಖ ಕಾರಣನಾ ಎಂಬ ಪ್ರಶ್ನೆ ಕಾಡುತ್ತಿದೆ.
ಇನ್ನು ಕೆಎಲ್ ರಾಹುಲ್ ಸಾಮಾನ್ಯವಾಗಿ ಟಿ20 ಕ್ರಿಕೆಟ್ನಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ. ಈ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಫಿಟ್ ಆಗಿದ್ದಾರೆ. ಅಷ್ಟಕ್ಕೂ ಐಪಿಎಲ್ನಲ್ಲಿ ರಿಷಭ್ ಪಂತ್ ಬ್ಯಾಟಿಂಗ್ ಧಾಟಿಯನ್ನು ನೋಡಿದರೆ, ಅವರನ್ನು ತಂಡದಿಂದ ಕೈ ಬಿಡುವಂತೆ ಕಾಣುತ್ತಿಲ್ಲ. ಆದರೆ ಕನ್ನಡಿಗ ರಾಹುಲ್ ಬ್ಯಾಟ್ ಪ್ರಸಕ್ತ ಆವೃತ್ತಿಯಲ್ಲಿ ಆರ್ಭಟಿಸುತ್ತಿಲ್ಲ. ಅಲ್ಲೊಂದು ಇಲ್ಲೊಂದು ಪಂದ್ಯದಲ್ಲಿ ನೆಲಕಚ್ಚಿ ನಿಲ್ಲುತ್ತಾರೆ ಬಿಟ್ಟರೆ ನಿರಾಸೆಯ ಕಡಲಿನಲ್ಲಿ ರಾಹುಲ್ ಪ್ರಯಾಣ ಮಾಡಿದ್ದಾರೆ.

ಕೆಎಲ್ ರಾಹುಲ್ ಅವರನ್ನು ಫಿನೀಶರ್ ಪಾತ್ರಕ್ಕೂ ಸೆಲೆಕ್ಟ್ ಮಾಡುವ ಹಾಗೆ ಇಲ್ಲ. ಏಕೆಂದ್ರೆ ಟೀಮ್ ಇಂಡಿಯಾದ ಯುವ ಆಟಗಾರರು ಐಪಿಎಲ್ನಲ್ಲಿ ಅಬ್ಬರದ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅಲ್ಲದೆ ಈ ಆಟಗಾರರು ಫಿನಿಶರ್ ಪಾತ್ರ ಸೂಕ್ತ ಪ್ಲೇಯರ್ಸ್. ಇನ್ನು ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲೂ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್ಸ್. ಹೀಗಾಗಿ ಬಿಸಿಸಿಐ ಆಯ್ಕೆ ಸಮಿತಿ ಇವರನ್ನು ಕಡೆಗಣಿಸಿರಬಹುದು.
ವಿಕೆಟ್ ಕೀಪರ್ ಆಗಿ ಕೆ.ಎಲ್ ರಾಹುಲ್ ಅವರು ಟಿ20 ತಂಡದಲ್ಲಿ ಖಾಯಂ ಸ್ಥಾನ ಪಡೆಯುತ್ತಿದ್ದರು. ಆದರೆ ವಿಕೆಟ್ ಕೀಪರ್ ರಿಷಭ್ ಪಂತ್ ಫುಲ್ ಫಿಟ್ ಆದಮೇಲೆ ಇವರ ಸ್ಥಾನಕ್ಕೆ ಕುತ್ತು ಬಂದಿದೆ. ಇನ್ನು ಐಪಿಎಲ್ನಲ್ಲಿ ಸಂಜು ಸ್ಯಾಮ್ಸನ್ ಸ್ಥಿರವಾಗಿ ಬ್ಯಾಟ್ ಮಾಡುತ್ತಿದ್ದು, ಅವರನ್ನು ಆಯ್ಕೆ ಮಾಡುವಂತೆ ಪ್ರಚೋದಿಸಿತು. ಟಿ20 ವಿಶ್ವಕಪ್ನಲ್ಲಿ ಎರಡು ವಿಕೆಟ್ ಕೀಪರ್ ಸ್ಲಾಟ್ ಫುಲ್ ಆಗಿದ್ದರಿಂದ ರಾಹುಲ್ ಚಾನ್ಸ್ ಮಿಸ್ ಆಯಿತು.