
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದ್ದು ಈ ಮೂಲಕ ಭಾರತ ಸರಣಿಯಲ್ಲಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಗೆಲುವು ಟೀಮ್ ಇಂಡಿಯಾದ ಹಂಗಾಮಿ ನಾಯಕ ಕೆಎಲ್ ರಾಹುಲ್ ಪಾಲಿಗೆ ಮತ್ತಷ್ಟು ವಿಶೇಷ. ಇದಕ್ಕೆ ಕಾರಣ ಟೆಸ್ಟ್ ಮಾದರಿಯಲ್ಲಿ ನಾಯಕನಾಗಿ ಕೆಎಲ್ ರಾಹುಲ್ ಸಾಧಿಸಿದ ಮೊದಲ ಗೆಲುವು ಇದು. ಇದಕ್ಕೂ ಹಿಂದಿನ ಅವಕಾಶದಲ್ಲಿ ರಾಹುಲ್ ನಾಯಕನಾಗಿ ನಿರಾಸೆ ಅನುಭವಿಸಿದ್ದರು.
ರೋಹಿತ್ ಶರ್ಮಾ ಅಲಭ್ಯವಾದ ಕಾರಣ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುವ ಅವಕಾಶ ಪಡೆದುಕೊಂಡಿದ್ದರು. ಈ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಬರೊಬ್ಬರಿ 188 ರನ್ಗಳ ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಕೆಎಲ್ ರಾಹುಲ್ ನಾಯಕನಾಗಿ ಟೆಸ್ಟ್ ಮಾದರಿಯಲ್ಲಿ ಎರಡನೇ ಪ್ರಯತ್ನದಲ್ಲಿ ತಮ್ಮ ಮೊದಲ ಗೆಲುವು ಸಾಧಿಸಿದ್ದಾರೆ. ಇದಕ್ಕೂ ಮುನ್ನ ಜೊಹನ್ಸ್ಬರ್ಗ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಮದ್ಯದಲ್ಲಿ ಕೆಎಲ್ ರಾಹುಲ್ ಭಾರತ ತಂಡವನ್ನು ಮುನ್ನಡೆಸಿದ್ದರು. ಆ ಪಂದ್ಯದಲ್ಲಿ ಭಾರತ 7 ವಿಕೆಟ್ಗಳ ಅಂತರದ ಸೋಲು ಅನುಭವಿಸಿತ್ತು. ಇನ್ನು ಕೆಎಲ್ ರಾಹುಲ್ 7 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು ಇದರಲ್ಲಿ ನಾಲ್ಕು ಗೆಲುವು ಸಾಧಿಸಿದೆ. ಮೂರು ಜಿಂಬಾಬ್ವೆ ಹಾಗೂ ಒಂದು ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ದ ಗೆಲುವು ಸಾಧಿಸಿದೆ.
"ಈಗ ನನಗೆ ಬಹಳ ಖುಷಿಯಾಗುತ್ತಿದೆ. ನಾಯಕನಾಗಿ ನಾನು ಒಂದು ಗೆಲುವು ಸಾಧಿಸಿದ್ದೇನೆ. ನಾನು ನನ್ನ ನಾಯಕತ್ವವನ್ನು ಗೆಲುವಿನೊಂದಿಗೆ ಆರಂಭಿಸಲು ಬಯಸಿದ್ದೆ. ಆದರೆ ಅದು ಸಾಧ್ಯವಾಗಿರಲಿಲ್ಲ. ಆದರೆ ನಾವು ಅತ್ಯುತ್ತಮ ಆಟವನ್ನು ಆಡಿದೆವು ಎಂಬ ಖುಷಿಯಿದೆ. ಈ ಗೆಲುವು ನಮಗೆ ಬಹಳ ಮುಖ್ಯವಾಗಿತ್ತು" ಎಂದಿದ್ದಾರೆ ಕೆಎಲ್ ರಾಹುಲ್.
"ಯಾರಿಗಾದರೂ ಮೊದಲ ಗೆಲುವು ಬಹಳ ಖುಷಿ ನೀಡುತ್ತದೆ. ಈ ಗೆಲುವನ್ನು ನಾವು ಮುಂದುವರಿಸುವ ವಿಶ್ವಾಸದಲ್ಲಿದ್ದೇವೆ. ಈಗ ನಮ್ಮ ಚಿತ್ತ ಮುಂದಿನ ಪಂದ್ಯದತ್ತ ನೆಟ್ಟಿದ್ದು ಆ ಪಂದ್ಯದಲ್ಲಿಯೂ ಗೆಲುವು ಸಾಧಿಸುವ ವಿಶ್ವಾಸವಿದೆ" ಎಂದಿದ್ದಾರೆ ಕೆಎಲ್ ರಾಹುಲ್.
ಇನ್ನು ಇದೇ ಸಂದರ್ಭದಲ್ಲಿ ಶುಬ್ಮನ್ ಗಿಲ್ ಮೊದಲ ಟೆಸ್ಟ್ ಶತಕ ಬಾರಿಸಿದ ಬಗ್ಗೆ ಕೆಎಲ್ ರಾಹುಲ್ ಪ್ರತಿಕ್ರಿಯಿಸಿದ್ದಾರೆ. "ಶುಬ್ಮನ್ ಗಿಲ್ ಮೊದಲ ಟೆಸ್ಟ್ ಶತಕ ಬಾರಿಸಿರುವುದು ಖುಷಿ ನೀಡುತ್ತದೆ. ಆತ ಬಹಳ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದು ಈ ಹಿಂದೆ ಕೂಡ ಕೆಲ ಬಾರಿ ಶತಕದ ಸನಿಹಕ್ಕೆ ಬಂದಿದ್ದರು. ಆದರೆ ಅದನ್ನು ಸಾಧಿಸಲು ಸಾಧ್ಯವಾಗಿರಲಿಲ್ಲ. ಈ ಪಂದ್ಯದಲ್ಲಿ ಅದನ್ನು ಸಾಧಿಸಿರುವುದು ಸಂತಸ ನೀಡಿದೆ" ಎಂದಿದ್ದಾರೆ ಕೆಎಲ್ ರಾಹುಲ್.