
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ಗೆ ಶರಣಾಗಿದೆ. ಎಲ್ಲ ವಿಭಾಗಗಳಲ್ಲೂ ಭಾರತಕ್ಕಿಂತ ಅದ್ಭುತವಾದ ಪ್ರದರ್ಶನ ನೀಡಿದ ಇಂಗ್ಲೆಂಡ್ ಅರ್ಹ ಗೆಲುವನ್ನು ಸಾಧಿಸಿದೆ. ಆದರೆ ಇಂಗ್ಲೆಂಡ್ ಭರ್ಜರಿಯಾಗಿ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಸಿಕ್ಸರ್ ತಡೆಯಲು ನೀಡಿದ ಶ್ರೇಷ್ಠ ಪ್ರಯತ್ನ ಪ್ರೇಕ್ಷಕರ ಗಮನಸೆಳೆದಿದೆ.
ಶುಕ್ರವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ರೋಮಾಂಚನಕಾರಿ ರೀತಿಯಲ್ಲಿ ಗೆರೆಯಾಚೆ ನುಗ್ಗಿದ್ದ ಚೆಂಡನ್ನು ತಡೆದಿದ್ದರು. ಬೌಂಡರಿ ಗೆರೆಯ ಸನಿಹ ಗಾಳಿಯಲ್ಲಿ ಹಾರಿ ಬೌಂಡರಿ ಚೆಂಡನ್ನು ಕ್ಯಾಚ್ ಪಡೆದ ರಾಹುಲ್ ನೆಲಕ್ಕೆ ತಾಗುವ ಮುನ್ನವೇ ಬೌಂಡರಿ ಗೆರೆಗಿಂತ ಹೊರಗೆ ಚೆಂಡನ್ನು ಎಸೆಯುವಲ್ಲಿ ಯಶಸ್ವಿಯಾಗಿದ್ದರು.
I love KL Rahul pic.twitter.com/BhELnYZ7Z8
— Dreams in melancholy. (@Descndingbatman) March 12, 2021
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ಬ್ಯಾಟಿಂಗ್ ಉತ್ತಮವಾಗಿರಲಿಲ್ಲ. ಶ್ರೇಯಸ್ ಐಯ್ಯರ್ ಸಿಡಿಸಿದ ಅರ್ಧ ಶತಕದ ನೆರವಿನಿಂದ ಭಾರತ 124/7 ಗಳಿಸಲು ಸಾಧ್ಯವಾಗಿತ್ತು. ಶ್ರೇಯಸ್ ಐಯ್ಯರ್ 48 ಎಸೆತಗಳನ್ನು ಎದುರಿಸಿ 67 ರನ್ಗಳ ನಿರ್ಣಾಯಕ ಕೊಡುಗೆಯನ್ನು ಟೀಮ್ ಇಂಡಿಯಾ ಪರವಾಗಿ ನೀಡಿದರು.
ನಾಯಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಹೊರನಡೆದಿದ್ದರು. ಕೆಎಲ್ ರಾಹುಲ್ ಕೇವಲ 1 ರನ್ಗಳಿಸಿದರೆ ಶಿಖರ್ ಧವನ್ 4 ರನ್ಗಳಿಸಿ ಫೆವಿಲಿಯನ್ ಸೇರಿಕೊಂಡಿದ್ದರು. ಉತ್ತಮ ಫಾರ್ಮ್ನಲ್ಲಿರುವ ರಿಷಭ್ ಪಂತ್ 21 ರನ್ಗಳಿಸಿದರೆ ಹಾರ್ದಿಕ್ ಪಾಂಡ್ಯ 19 ರನ್ಗಳ ಕೊಡುಗೆಯನ್ನು ನೀಡಿದರು.
ಇಂಗ್ಲೆಂಡ್ ತಂಡದ ಪರವಾಗಿ ಬೌಲಿಂಗ್ನಲ್ಲಿ ಜೋಫ್ರಾ ಆರ್ಚರ್ ಮಿಂಚಿದರು. ನಾಲ್ಕು ಓವರ್ನಲ್ಲಿ ಆರ್ಚರ್ 23 ರನ್ಗಳಿಗೆ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆರಂಭದಲ್ಲಿ ರಾಹುಲ್ ವಿಕೆಟ್ ಪಡೆದ ಆರ್ಚರ್ ಬಳಿಕ ಶಾರ್ದೂಲ್ ಠಾಕೂರ್ ಹಾಗೂ ಹಾರ್ದಿಕ್ ಪಾಂಡ್ಯ ವಿಕೆಟ್ ಕಿತ್ತರು.