ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯಲ್ಲಿ ನಾಳೆ ಅಂದರೆ ಭಾನುವಾರ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಹೈವೋಲ್ಟೇಲ್ ಪಂದ್ಯ ನಡೆಯಲಿದೆ. ಉಭಯ ದೇಶಗಳ ನಡುವಿನ ಈ ಪಂದ್ಯವು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 2:30 ರಿಂದ ಆರಂಭವಾಗಲಿದೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧ ಅದ್ಭುತ ಜಯಗಳಿಸಿರುವ ಟೀಮ್ ಇಂಡಿಯಾ ಈಗ ನ್ಯೂಜಿಲೆಂಡ್ ತಂಡವನ್ನು ಮಣಿಸಲು ಸಜ್ಜಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯಕ್ಕೂ ಮುನ್ನ, ಟೀಮ್ ಇಂಡಿಯಾ ವಿಕೆಟ್ ಕೀಪರ್ ಕೆಎಲ್ ರಾಹುಲ್ ದೊಡ್ಡ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಭಾರತ ತಂಡವನ್ನು ಮೂರು ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ಸೋಲಿಸಿದ್ದರಿಂದ ಕಿವೀಸ್ ಪಡೆಯನ್ನು ಎಂದಿಗೂ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು, 2021ರ ಟಿ20 ವಿಶ್ವಕಪ್ನಲ್ಲೂ ಭಾರತ ತಂಡವನ್ನು ನ್ಯೂಜಿಲೆಂಡ್ ಸೋಲಿಸಿತ್ತು. ನ್ಯೂಜಿಲೆಂಡ್ ಯಾವಾಗಲೂ ಬಲಿಷ್ಠ ಮತ್ತು ಸ್ಪರ್ಧಾತ್ಮಕ ತಂಡವಾಗಿದೆ. ಚಾಂಪಿಯನ್ಸ್ ಟ್ರೋಫಿಯನ್ನು ಅತ್ಯಂತ ಕಠಿಣ ಟೂರ್ನಿ ಎಂದು ಕೆಎಲ್ ರಾಹುಲ್ ಬಣ್ಣಿಸಿದ್ದಾರೆ.
ಇದು ನನ್ನ ಮೊದಲ ಚಾಂಪಿಯನ್ಸ್ ಟ್ರೋಫಿ. ಎಲ್ಲವೂ ಬಹಳ ಬೇಗನೆ ನಡೆಯುತ್ತದೆ ಅಂದುಕೊಂಡಿದ್ದೇನೆ. ನಿಧಾನಗತಿಯ ಆರಂಭ ಪಡೆದರೂ ಸಹ ಮತ್ತೆ ತಂಡಕ್ಕೆ ಮರಳಲು ಅವಕಾಶವಿರುವ ವಿಶ್ವಕಪ್ನಂತೆ ಇದು ಅಲ್ಲ. ಇದರಲ್ಲಿ ಆರಂಭದಿಂದಲೇ ಚೆನ್ನಾಗಿ ಆಡಬೇಕು. ಯಾವುದೇ ಪಂದ್ಯವನ್ನು ಸುಲಭ ಎಂದು ಕರೆಯಲು ಸಾಧ್ಯವಿಲ್ಲ ಅಥವಾ ಯಾವುದೇ ತಂಡವನ್ನು ಕೀಳು ಎಂದು ಕರೆಯಲು ಸಾಧ್ಯವಿಲ್ಲ ಎಂದು ಕೆಎಲ್ ರಾಹುಲ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ವೇಗದ ಬೌಲರ್ ಅರ್ಷದೀಪ್ ಸಿಂಗ್, ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್, ಸ್ಪಿನ್ನರ್ಗಳಾದ ವರುಣ್ ಚಕ್ರವರ್ತಿ ಮತ್ತು ವಾಷಿಂಗ್ಟನ್ ಸುಂದರ್ ಇನ್ನೂ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಅವರನ್ನು ಕೊನೆಯ ಲೀಗ್ ಪಂದ್ಯದಲ್ಲಿ ಕಣಕ್ಕಿಳಿಸಬಹುದೇ? ಎಂಬ ಪ್ರಶ್ನೆಗೆ ಕೆಎಲ್ ರಾಹುಲ್ ಉತ್ತರಿಸಿದ್ದಾರೆ.
ನಾನು ನಾಯಕತ್ವದ ಗುಂಪಿನ ಭಾಗವಲ್ಲ, ಆದರೆ ಅದಕ್ಕೆ ಆಸೆ ಇರುತ್ತದೆ ಎಂದು ನನಗೆ ಖಚಿತವಾಗಿದೆ. ಆಟಗಾರರನ್ನು ಪರೀಕ್ಷಿಸಲು ಅವಕಾಶ ಸಿಕ್ಕಾಗ ನಾನು ಈ ಪರಿಸ್ಥಿತಿಯನ್ನು ಎದುರಿಸಿದ್ದೇನೆ. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಅದು ಸಂಭವಿಸುತ್ತದೆಯೋ ಇಲ್ಲವೋ ನನಗೆ ತಿಳಿದಿಲ್ಲ. ಎಲ್ಲಾ ಆಟಗಾರರಿಗೂ ಅವಕಾಶ ಸಿಗಬೇಕೆಂದು ನಾವು ಬಯಸುತ್ತೇವೆ. ಇದು ನನ್ನ ಆಲೋಚನೆ, ಆದರೆ ನನಗೆ ಗೊತ್ತಿಲ್ಲ. ಬಹುಶಃ ಅದು ಬೇರೆ ಯಾವುದೋ ಆಗಿರಬಹುದು ಎಂದು ರಾಹುಲ್ ತಿಳಿಸಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇದುವರೆಗೆ ಒಟ್ಟು 118 ಏಕದಿನ ಪಂದ್ಯಗಳು ನಡೆದಿವೆ. ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 60 ಏಕದಿನ ಪಂದ್ಯಗಳನ್ನು ಗೆದ್ದಿದೆ. ನ್ಯೂಜಿಲೆಂಡ್ ತಂಡವು ಭಾರತವನ್ನು 50 ಏಕದಿನ ಪಂದ್ಯಗಳಲ್ಲಿ ಸೋಲಿಸಿದೆ. 7 ಪಂದ್ಯಗಳು ಅನಿಶ್ಚಿತವಾಗಿವೆ. ಇದಲ್ಲದೆ, 1 ಪಂದ್ಯ ಟೈನಲ್ಲಿ ಕೊನೆಗೊಂಡಿತ್ತು.