ಕೊಲಂಬೊ, ಆಗಸ್ಟ್ 02 : ಜ್ವರದಿಂದ ಬಳಲುತ್ತಿದ್ದ ಕೆ.ಎಲ್. ರಾಹುಲ್ ಸದ್ಯ ಚೇತರಿಸಿಕೊಂಡಿದ್ದು, ಗುರುವಾರ ಆರಂಭವಾಗುವ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
"ರಾಹುಲ್ ತಂಡದ ಸ್ಫೋಟಕ ಆಟಗಾರರಾಗಿದ್ದಾರೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಆಡುವುದಾದರೇ ಶಿಖರ್ ಧವನ್ ಅಥವಾ ಅಭಿನವ್ ಮುಕುಂದ್ ಇಬ್ಬರಲ್ಲಿ ಒಬ್ಬರು ರಾಹುಲ್ಗೆ ಅವಕಾಶ ನೀಡಬೇಕಾಗುತ್ತದೆ. ಈ ಕುರಿತು ತಂಡದ ಆಟಗಾರರೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ" ಎಂದು ಕೊಹ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಹುಲ್ ಬದಲಿಗೆ ಮೊದಲ ಟೆಸ್ಟ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ 168 ಎಸೆತಗಳಲ್ಲಿ 190 ರನ್ ಗಳಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿದ್ದರು. ಈ ಹಿನ್ನಲೆಯಲ್ಲಿ ಅಭಿನವ್ ಮುಕುಂದ್ ಅವರನ್ನು ಕೈಬಿಡುವ ಸಾಧ್ಯತೆ ಹೆಚ್ಚಿದೆ.
ಭಾರತ ಮೊದಲ ಟೆಸ್ಟ್ನಲ್ಲಿ ಶ್ರೀಲಂಕಾ ವಿರುದ್ಧ 304 ರನ್ ಗೆಲುವು ಸಾಧಿಸಿ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ರಲ್ಲಿ ಮುನ್ನಡೆ ಸಾಧಿಸಿದೆ.