ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಕನ್ನಡಿಗನ ಕನಸಿಗೆ ಆರಂಭದಲ್ಲಿ ಪೆಟ್ಟು ಬಿದ್ದಿದೆ. ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ರನ್ ಕಲೆ ಹಾಕುವಲ್ಲಿ ಕರ್ನಾಟಕದ ಸ್ಟಾರ್ ಬ್ಯಾಟರ್ ವಿಫಲರಾಗಿದ್ದು, ಇವರು ಮುಂಬರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆಯುವುದು ಅನುಮಾದಂತೆ ಕಾಣುತ್ತಿದೆ.
ದುಲೀಪ್ ಟ್ರೋಫಿಯ ಮೊದಲ ದಿನ ಸ್ಟಾರ್ ಆಟಗಾರರಾದ ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ರುತುರಾಜ್ ಗಾಯಕ್ವಾಡ್ ಮತ್ತು ರಜತ್ ಪಾಟಿದಾರ್ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಇವರ ಫ್ಲಾಪ್ ಶೋ ನೀಡಿದ ನಂತರ ಎಲ್ಲರ ಚಿತ್ತ ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಅವರ ಮೇಲೆ ನೆಟ್ಟಿತ್ತು. ಆರಂಭದಲ್ಲಿ ರಾಹುಲ್ ನಿರೀಕ್ಷೆಗೆ ತಕ್ಕಂತೆ ಆಡುತ್ತಿದ್ದಾರೆ ಎಂಬ ಕಲ್ಪನೆ ಮೂಡಿತು. ಆದರೆ ಅದು ವಿಫಲವಾಗಿದೆ.

ಭಾರತ-ಎ ಪರ ಭಾರತ-ಬಿ ವಿರುದ್ಧ ದುಲೀಪ್ ಟ್ರೋಫಿಯಲ್ಲಿ ಆಡುತ್ತಿರುವ ಕೆಎಲ್ ರಾಹುಲ್, ರನ್ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ದಿನದಾಟದಲ್ಲಿ ಕೆ.ಎಲ್ ರಾಹುಲ್ ಅಜೇಯ 23 ರನ್ ಬಾರಿಸಿ ಭರವಸೆಯ ಮೂಡಿಸಿದ್ದರು. ಆದರೆ, ಮೂರನೇ ದಿನದಾಟದಲ್ಲಿ ಇವರ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಇವರು 111 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 37 ರನ್ ಸಿಡಿಸಿ ಔಟ್ ಆದರು. ಈ ಮೂಲಕ ದೊಡ್ಡ ಮೊತ್ತ ಕಲೆ ಹಾಕುವ ಕನಸು ಕೈ ಚೆಲ್ಲಿದರು.
ಕೆಎಲ್ ರಾಹುಲ್ ಅವರು ವಾಶಿಂಗ್ಟನ್ ಸುಂದರ್ ಅವರ ಎಸೆತವನ್ನು ಎದುರಿಸುವಲ್ಲಿ ವಿಫಲರಾಗಿ ಔಟ್ ಆದರು. ವಾಶಿಂಗ್ಟನ್ ಸುಂದರ್ ಅವರ ಎಸೆತವನ್ನು ರಾಹುಲ್ ಸ್ವೀಪ್ ಮಾಡಲು ಮುಂದಾದರು. ಆದರೆ ರಾಹುಲ್ ಹಾಫ್ ಸೈಡ್ನಿಂದ ತುಂಬ ಆಚೆ ಸರಿದು ಬಿಟ್ಟಿದ್ದರು. ಹೀಗಾಗಿ ಬಿದ್ದ ಚೆಂಡು ನೇರವಾಗಿ ಲೆಗ್ ಸ್ಟಂಪ್ಗೆ ಬಡಿಯಿತು. ಕೆಎಲ್ ಇನ್ನಿಂಗ್ಸ್ ಕೇವಲ 37 ರನ್ಗಳಿಗೆ ಕುಸಿಯಿತು.

ಭಾರತಕ್ಕೆ ಇದೇ ತಿಂಗಳಲ್ಲಿ ಬಾಂಗ್ಲಾದೇಶ ಪ್ರವಾಸ ಬೆಳೆಸಲಿದೆ. ಈ ವೇಳೆ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಸಹ ಆಡಲಿದೆ. 2 ಪಂದ್ಯಗಳ ಟೆಸ್ಟ್ ಸರಣಿಗೆ ಇನ್ನು ಟೀಮ್ ಇಂಡಿಯಾವನ್ನು ಘೋಷಿಸಬೇಕಿದೆ. ಭಾರತ ತಂಡದಲ್ಲಿ ಯಾರಿಗೆ ಅವಕಾಶ ಸಿಗುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಆದರೆ ಸ್ಟಾರ್ ಆಟಗಾರರ ವೈಫಲ್ಯ ನಿಜಕ್ಕೂ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಚಿಂತೆ ಹೆಚ್ಚಿಸಿದೆ.
ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಆಡುವುದು ಬಹುತೇಕ ಖಚಿತವಾಗಿದೆ. ಶುಭಮನ್ ಗಿಲ್ ಮೂರನೇ ಕ್ರಮಾಂಕದಲ್ಲಿ ಮತ್ತು ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ದಟ್ಟವಾಗಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆಯುವ ಆಸೆಯನ್ನು ಕೆಎಲ್ ರಾಹುಲ್ ಹೊಂದಿದ್ದರು. ಆದರೆ ಯುವ ಆಟಗಾರರ ಸ್ಥಿರ ಪ್ರದರ್ಶನ ಅವರ ಕನಸಿಗೆ ಪೆಟ್ಟು ನೀಡಿದೆ.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ವೇಳೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಮೊದಲ ಪಂದ್ಯದಲ್ಲಿ ಅವರು ಗಾಯಕ್ಕೆ ತುತ್ತಾದರು. ಹೀಗಾಗಿ ಉಳಿದ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲು ಆಗಲಿಲ್ಲ. ಅವರ ಅನುಪಸ್ಥಿತಿಯಲ್ಲಿ ರಜತ್ ಪಾಟಿದಾರ್ ಮತ್ತು ಸರ್ಫರಾಜ್ ಖಾನ್ ಅವರಿಗೆ ಪದಾರ್ಪಣೆ ಮಾಡಿ ಭರವಸೆ ಮೂಡಿಸಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಯಾರಿಗೆ ಅವಕಾಶ ಸಿಗುತ್ತದೆ ಕಾದು ನೋಡಬೇಕಿದೆ.