ಕ್ರೀಡೆ ಮತ್ತು ಸಾಮಾಜಿಕ ಕಳಕಳಿಯ ಮಹತ್ವದ ಹೆಜ್ಜೆಯಾಗಿ, ಹೈಪರ್ ಸ್ಪೋರ್ಟ್ಸ್ & ವೆಲ್ಫೇರ್ ಟ್ರಸ್ಟ್ ವತಿಯಿಂದ ಪ್ರತಿಷ್ಠಿತ ಕರ್ನಾಟಕ ಮೀಡಿಯಾ ಚಾಂಪಿಯನ್ ಲೀಗ್ (KMCL) - 2026 ಅನ್ನು ಆಯೋಜಿಸಲಾಗಿದೆ. ಈ ಅಂತರ್-ಮಾಧ್ಯಮ ಕ್ರಿಕೆಟ್ ಟೂರ್ನಿಯು ಕೇವಲ ಕ್ರೀಡಾ ಮನೋಭಾವವನ್ನು ಹೆಚ್ಚಿಸುವುದಲ್ಲದೆ, ಗಂಭೀರ ಆರೋಗ್ಯ ಸಮಸ್ಯೆಯಾದ ಗರ್ಭಾಶಯ ಕ್ಯಾನ್ಸರ್ (Cervical Cancer) ಜಾಗೃತಿ ಮತ್ತು ತಡೆಗಟ್ಟುವಿಕೆಯ ಕುರಿತು ಸಂದೇಶವನ್ನು ಸಾರುವುದಾಗಿದೆ.
ಈ ಟೂರ್ನಿಯ ಬಗ್ಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೈಪರ್ ಸ್ಪೋರ್ಟ್ಸ್ ಅಂಡ್ ವೆಲ್ಫೇರ್ ಟ್ರಸ್ಟ್ನ ಮುಖ್ಯಸ್ಥರಾದ ಕಿರಣ್ ಶೆಟ್ಟಿ ಅವರು, "ಮಾಧ್ಯಮ ಮಿತ್ರರಿಗಾಗಿ ಈ ವಿಶೇಷ ಟೂರ್ನಿಯನ್ನು ರೂಪಿಸಲಾಗಿದೆ. ಈ ಟೂರ್ನಿಯ ಮೂಲಕ ನಾವು ಗರ್ಭಾಶಯ ಕ್ಯಾನ್ಸರ್ ಕುರಿತು ಜನರಲ್ಲಿ ಅರಿವು ಮೂಡಿಸಲು ಆದ್ಯತೆ ನೀಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಿದರು.

ಅಂತರ್ ಮಾಧ್ಯಮ ಟೂರ್ನಿಯನ್ನು 2026ರ ಜನವರಿ ಅಥವಾ ಫೆಬ್ರವರಿ ಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ತಂಡಕ್ಕೆ 10 ಲಕ್ಷ ರೂ.ನಗದು ಬಹುಮಾನ ನೀಡಲಾಗುವುದು. ಇನ್ನು ರನ್ನರ್ ಅಪ್ ತಂಡಕ್ಕೆ 5 ಲಕ್ಷ, ಇನ್ನು ಸೆಮಿಫೈನಲ್ ಪ್ರವೇಶಿಸಿದ ತಂಡಗಳಿಗೆ 2.5 ಲಕ್ಷ ರೂ. ನೀಡಲಾಗುವುದು. ಈ ಟೂರ್ನಿಯಲ್ಲಿ ಆಡುವ ಮಾಧ್ಯಮ ತಂಡಗಳಿಗೆ ಪ್ರವೇಶ ಉಚಿತ ಎಂದು ಆಯೋಜಕರಾದ ಕಿರಣ್ ಶೆಟ್ಟಿ ತಿಳಿಸಿದರು. ಕಾರ್ಯಕ್ರಮದಲ್ಲಿ ಶಿವಕುಮಾರ್ ಉಪ್ಪಳ ಉಪಸ್ಥಿತರಿದ್ದರು.