ದೀಪ್ತಿ ಶರ್ಮಾರಿಂದ ರನೌಟ್ ಆದ ಬಗ್ಗೆ ಚಾರ್ಲಿ ಡೀನ್ ಪ್ರತಿಕ್ರಿಯೆ ಏನು ಗೊತ್ತಾ?

ಸೆಪ್ಟೆಂಬರ್ 24 ರಂದು ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ನಡೆದ ಭಾರತ-ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಭಾರತದ ವನಿತೆಯರು 16 ರನ್ಗಳ ರೋಚಕ ಜಯ ಸಾಧಿಸಿದರು. ಈ ಮೂಲಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ನೆಲದಲ್ಲಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ, 1999ರ ನಂತರ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಸರಣಿ ಜಯ ಗಳಿಸಿದರು.
ಇದು ಜೂಲನ್ ಗೋಸ್ವಾಮಿ ಅವರ ಅಂತರಾಷ್ಟ್ರೀಯ ವೃತ್ತಿಜೀವನದ ಕೊನೆಯ ಪಂದ್ಯವಾಗಿತ್ತು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ (255) ಅತ್ಯಧಿಕ ವಿಕೆಟ್ ಟೇಕರ್ ಆಗಿ ನಿವೃತ್ತರಾದರು.
ಆದರೆ ಮೂರನೇ ಪಂದ್ಯದಲ್ಲಿ ಭಾರತದ ವನಿತೆಯರು ಕೊನೆಯ ವಿಕೆಟ್ ಪಡೆದ ಬಗ್ಗೆ ವಿವಾದ ಉಂಟಾಗಿತ್ತು. ದೀಪ್ತಿ ಶರ್ಮಾ ಇಂಗ್ಲೆಂಡ್ನ ಚಾರ್ಲಿ ಡೀನ್ ಅವರನ್ನು ಮಂಕಡಿಂಗ್ ಮಾಡಿದ್ದರು. ದೀಪ್ತಿ ಶರ್ಮಾ ಬೌಲಿಂಗ್ ಮಾಡುವ ಮುನ್ನವೇ ಕ್ರೀಸ್ ಬಿಟ್ಟಿದ್ದ ಚಾರ್ಲಿ ಡೀನ್ ಅದಕ್ಕೆ ಬೆಲೆ ತೆತ್ತರು. ಆರಂಭದಿಂದಲೂ ಚಾರ್ಲಿ ಡೀನ್ ಬೌಲರ್ ಬಾಲ್ ಎಸೆಯುವ ಮುನ್ನವೇ ಕ್ರೀಸ್ ಬಿಡುತ್ತಿದ್ದರು. ಇದನ್ನು ಗಮನಿಸಿದ್ದ ದೀಪ್ತಿ ಶರ್ಮಾ ಅವರನ್ನು ಔಟ್ ಮಾಡಿದ್ದರು.
ಇಷ್ಟು ದಿನ ಈ ಬಗ್ಗೆ ಹಲವರು ಪ್ರತಿಕ್ರಿಯೆ ನೀಡಿದ್ದರು. ಆದರೆ, ಈಗ ಸ್ವತಃ ಚಾರ್ಲಿ ಡೀನ್ ಈ ಬಗ್ಗೆ ಮಾತನಾಡಿದ್ದಾರೆ.

ಇನ್ನು ಮುಂದೆ ಆ ತಪ್ಪು ಮಾಡಲ್ಲ
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ಚಾರ್ಲಿ ಡೀನ್ ತಮ್ಮ ತಪ್ಪು ತಿದ್ದಿಕೊಳ್ಳುವುದಾಗಿ ಹೇಳಿದ್ದಾರೆ. ಕ್ರೀಸ್ನಲ್ಲಿ ಮುಂದುವರಿಯಲು ಪ್ರತಿಜ್ಞೆ ಮಾಡಿದ್ದಾರೆ. ಲಾರ್ಡ್ಸ್ ಮೈದಾನದಲ್ಲಿ ಆಡುವುದು ದೊಡ್ಡ ಗೌರವ ಎಂದು ಹೇಳಿದ್ದಾರೆ.
"ಬೇಸಿಗೆಗೆ ಒಂದು ಕುತೂಹಲಕಾರಿ ಅಂತ್ಯ. ಇಂಗ್ಲೆಂಡ್ ತಂಡದ ಪರವಾಗಿ ಲಾರ್ಡ್ಸ್ನಲ್ಲಿ ಆಡುವುದು ತುಂಬಾ ಗೌರವದ ವಿಷಯ. ನಾನು ಇನ್ನು ಮುಂದೆ ಕ್ರೀಸ್ನಲ್ಲೇ ಉಳಿಯುತ್ತೇನೆ ಎಂದು ಭಾವಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ಟಿ20 ವಿಶ್ವಕಪ್ಗಾಗಿ ಆಸ್ಟ್ರೇಲಿಯಾದ ಆಡುವ ತಂಡದಲ್ಲಿ ಈತ ಸ್ಥಾನ ಪಡೆಯಲಿ: ಆಡಮ್ ಗಿಲ್ಕ್ರಿಸ್ಟ್

ಔಟ್ ಆಗುತ್ತಿದ್ದಂತೆ ಚಾರ್ಲಿ ಡೀನ್ ಕಣ್ಣೀರು
ಇಂಗ್ಲೆಂಡ್ ತಂಡ ಸೋಲುವ ಭೀತಿಯಲ್ಲಿದ್ದಾಗ ಉತ್ತು ಬ್ಯಾಟಿಂಗ್ ಮಾಡಿದ ಚಾರ್ಲಿ ಡೀನ್ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಅತ್ಯಮೂಲ್ಯ 47 ರನ್ ಗಳಿಸಿದ್ದ ಚಾರ್ಲಿ ಡೀನ್ ಇಂಗ್ಲೆಂಡ್ ತಂಡದ ಕೊನೆಯ ಭರವಸೆಯಾಗಿದ್ದರು.
ಭಾರತ ನೀಡಿದ 169 ರನ್ಗಳ ಗುರಿ ಮುಟ್ಟಲು ಇನ್ನೇನು 17 ರನ್ಗಳು ಮಾತ್ರ ಬೇಕಿತ್ತು. ಆದರೆ, ಆಫ್ ಸ್ಪಿನ್ನರ್ ದೀಪ್ತಿ ಶರ್ಮಾ ಬೌಲಿಂಗ್ನಲ್ಲಿ ಬಾಲ್ ಎಸೆಯುವ ಮುನ್ನವೇ ಕ್ರೀಸ್ ಬಿಟ್ಟರು, ಇದನ್ನು ಗಮನಿಸಿದ ದೀಪ್ತಿ ಶರ್ಮಾ ಬೇಲ್ ಎಗರಿಸಿದರು. ಮೂರನೇ ಅಂಪೈರ್ ಇದನ್ನು ಪರಿಶೀಲಿಸಿ ಔಟ್ ಎಂದು ತೀರ್ಪು ನೀಡಿದರು. ಔಟಾದ್ದಕ್ಕೆ ದಿಗ್ಭ್ರಮೆಗೊಂದ ಚಾರ್ಲಿ ಡೀನ್ ಮೈದಾನದಲ್ಲೇ ಕಣ್ಣೀರು ಹಾಕಿದರು.

ಕ್ರಿಕೆಟ್ ಜಗತ್ತಿನಲ್ಲಿ ಭಾರಿ ಚರ್ಚೆ
ಚಾರ್ಲಿ ಡೀನ್ ಔಟ್ ಮಾಡಿದ್ದ ರೀತಿ ಸರಿಯಿಲ್ಲ ಇದು ಕ್ರೀಡಾಸ್ಫೂರ್ತಿ ಅಲ್ಲ ಎಂದು ಇಂಗ್ಲೆಂಡ್ ಮಾಧ್ಯಮಗಳು ಬೊಬ್ಬೆ ಹೊಡೆದವು. ಅನೇಕ ಕ್ರಿಕೆಟರ್ ಗಳು ಕೂಡ ಇದು ಉತ್ತಮ ನಡೆಯಲ್ಲ ಎಂದು ಹೇಳಿದರೆ, ಮತ್ತೆ ಕೆಲವರು ನಿಯಮದ ಪ್ರಕಾರವೇ ಅವರನ್ನು ಔಟ್ ಮಾಡಲಾಗಿದೆ ಎಂದು ಸಮರ್ಥನೆ ಮಾಡಿಕೊಂಡರು.
ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಕೂಡ ದೀಪ್ತಿ ಶರ್ಮಾರನ್ನು ಸಮರ್ಥಿಸಿಕೊಂಡರು ನಿಯಮದಂತೆಯೇ ಅವರನ್ನು ಔಟ್ ಮಾಡಲಾಗಿದೆ, ಅಗತ್ಯ ಬಿದ್ದರೆ ಮುಂದಿನ ದಿನಗಳಲ್ಲಿ ಕೂಡ ಇದನ್ನು ಮಾಡುತ್ತೇವೆ ಎಂದು ಇಂಗ್ಲೆಂಡ್ ಮಾಧ್ಯಮಗಳಿಗೆ ದಿಟ್ಟವಾಗಿ ಉತ್ತರ ನೀಡಿದ್ದರು.

ಚಾರ್ಲಿ ಡೀನ್ಗೆ ಎಚ್ಚರಿಕೆ ನೀಡಿರಲಿಲ್ಲ
ಚಾರ್ಲಿ ಡೀನ್ರನ್ನು ಔಟ್ ಮಾಡುವ ಮುನ್ನ ಎಚ್ಚರಿಕೆ ನೀಡಲಾಗಿತ್ತು ಎಂದು ದೀಪ್ತಿ ಶರ್ಮಾ ಹೇಳಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಂಗ್ಲೆಂಡ್ ಆಟಗಾರ್ತಿ ಹೀದರ್ ನೈಟ್, ಚಾರ್ಲಿ ಡೀನ್ಗೆ ಎಚ್ಚರಿಕೆ ನೀಡಿರಲಿಲ್ಲ ಎಂದು ಹೇಳಿದ್ದಾರೆ.
ಗಾಯದ ಕಾರಣದಿಂದ ಸರಣಿಯಿಂದ ಹೊರಗುಳಿದಿದ್ದ ಹೀದರ್ ನೈಟ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಆಟ ಮುಗಿದಿದೆ, ಚಾರ್ಲಿಯನ್ನು ನ್ಯಾಯಸಮ್ಮತವಾಗಿ ಔಟ್ ಮಾಡಲಾಗಿದೆ. ಭಾರತವು ಪಂದ್ಯ ಮತ್ತು ಸರಣಿಯನ್ನು ಜಯಿಸಲು ಅರ್ಹವಾಗಿದೆ. ಆದರೆ ಯಾವುದೇ ಡೀನ್ಗೆ ಎಚ್ಚರಿಕೆ ನೀಡಲಾಗಿಲ್ಲ. ಅದರ ಅಗತ್ಯವೂ ಕೂಡ ಇಲ್ಲ, ಅದು ರನ್ಔಟ್ ಎಂದು ಹೇಳಿದ ಮೇಲೆ, ಎಚ್ಚರಿಕೆ ನೀಡಿದ್ದೇವೆ ಎಂದು ಸುಳ್ಳು ಹೇಳುವ ಅಗತ್ಯವಿಲ್ಲ" ಎಂದು ಹೇಳಿದರು.
ಐಸಿಸಿ ಹೊಸ ನಿಯಮಗಳ ಪ್ರಕಾರ ಮಂಕಡಿಂಗ್ ಅನ್ನು ಇನ್ನು ಮುಂದೆ ಅಧಿಕೃತವಾಗಿ ರನ್ ಔಟ್ ಎಂದು ಪರಿಗಣಿಸಲಾಗುತ್ತದೆ. ಅಕ್ಟೋಬರ್ 1ರಿಂದ ನೂತನ ನಿಯಮ ಜಾರಿಗೆ ಬರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications