
ನವದೆಹಲಿ, ಜನವರಿ 9: ಕಾಫೀ ವಿತ್ ಕರಣ್ ಜನಪ್ರಿಯ ಟಿವಿ ಶೋನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದ ಭಾರತದ ಆಲ್ ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯಗೆ ಸುಪ್ರೀಮ್ ಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಮಂಡಳಿ (ಸಿಒಎ) ಶೋ ಕಾಸ್ ನೋಟಿಸ್ ನೀಡಿದೆ. ಪಾಂಡ್ಯ ಜೊತೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಕನ್ನಡಿಗ ಕೆಎಲ್ ರಾಹುಲ್ಗೂ ನೋಟಿಸ್ ಬಿಸಿ ತಾಗಿದೆ.
ಬಾಲಿವುಡ್ ಚಿತ್ರ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಸ್ಟಾರ್ ಚಾನೆಲ್ನ ಕಾಫೀ ವಿತ್ ಕರಣ್ ಟಾಕ್ ಶೋನಲ್ಲಿ ಹಾರ್ದಿಕ್ ಮತ್ತು ರಾಹುಲ್ ಪಾಲ್ಗೊಂಡಿದ್ದರು. ಆ ವೇಳೆ ಪಾಂಡ್ಯ ಮಹಿಳೆ ಬಗ್ಗೆ ಪೂರ್ವಾಗ್ರಹ ಪೀಡಿತನಂತೆ ವರ್ತಿಸಿದ್ದರು. ಲೈಂಗಿಕತೆ ಬಗ್ಗೆ ಮಾತನಾಡಿ ವಿವಾದಕ್ಕೆ ಗುರಿಯಾಗಿದ್ದರು. ಸಚಿನ್ಗಿಂತ ಕೊಹ್ಲಿಯೇ ಶ್ರೇಷ್ಠ ಬ್ಯಾಟ್ಸ್ಮನ್ ಎಂದಿದ್ದರು. ಇದೂ ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿಸಿತ್ತು.
ಪಾಂಡ್ಯ ಹೇಳಿಕೆಗೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಾರ್ದಿಕ್ ಕ್ಷಮೆಯೂ ಕೇಳಿದ್ದರು. ಈಗ ಬಿಸಿಸಿಐ ಕೂಡ ಇಬ್ಬರೂ ಆಟಗಾರರಿಗೆ ನೋಟಿಸ್ ಮೂಲಕ 'ಎಲ್ಲೆ ಮೀರಿ ನಡೆದುಕೊಳ್ಳುವಂತಿಲ್ಲ' ಎಂಬ ಖಡಕ್ ಸಂದೇಶ ರವಾನಿಸಿದೆ. ಜೊತೆಗೆ ಕ್ರಿಕೆಟ್ಗೆ ಹೊರತಾಗಿ ಆಟಗಾರರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆಗೆ ಕಡಿವಾಣ ಹಾಕುವತ್ತಲೂ ಬಿಸಿಸಿಐ ಯೋಚಿಸಿದೆ.