ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದನೇ ಟೆಸ್ಟ್ ಸಿಡ್ನಿ ಅಂಗಳದಲ್ಲಿ ನಡೆಯಲಿದೆ. ಬಾರ್ಡರ್ ಗವಾಸ್ಕರ್ ಸರಣಿಯ ಕೊನೆಯ ಪಂದ್ಯ ಇದಾಗಿದ್ದು, ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈಗಾಗಲೇ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿರುವ ಆಸ್ಟ್ರೇಲಿಯಾ, ಕೊನೆಯ ಪಂದ್ಯದಲ್ಲಿ ಡ್ರಾ ಅಥವಾ ಗೆಲುವು ಸಾಧಿಸಿ ಬಾರ್ಡರ್ ಗವಾಸ್ಕರ್ ಸರಣಿಯನ್ನು ಬಹು ವರ್ಷಗಳ ಬಳಿಕ ಗೆಲ್ಲುವ ಇರಾದೆಯನ್ನು ಹೊಂದಿದೆ. ಇನ್ನು ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸುವ ಕನಸು ಕಾಣುತ್ತಿದೆ.
ಬಾರ್ಡರ್ ಗವಾಸ್ಕರ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿತ್ತು. ಆಡಿಲೇಡ್ನಲ್ಲಿ ನಡೆದಿದ್ದ ಎರಡನೇ ಟೆಸ್ಟ್ನಲ್ಲಿ ರೋಹಿತ್ ಪಡೆ ನಿರಾಸೆಯನ್ನು ಅನುಭವಿಸಿತು. ಮೂರನೇ ಟೆಸ್ಟ್ ಡ್ರಾನಲ್ಲಿ ಅಂತ್ಯವಾಗಿತ್ತು. ನಾಲ್ಕನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳ ಕಳಪೆ ಆಟದ ಪರಿಣಾಮ ಪಂದ್ಯ ಕೈ ಚೆಲ್ಲುವಂತೆ ಆಯಿತು.

ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದಾರೆ. ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡುವುದು ಎಂದರೆ ಆಸೀಸ್ ಬೌಲರ್ಗಳಿಗೆ ನೀರು ಕುಡಿದಷ್ಟೇ ಸುಲಭ. ಇವರು ಆಫ್ ಸ್ಟಂಪ್ ಆಚೆಗಿನ ಚೆಂಡನ್ನು ಸ್ಲೀಪ್ನಲ್ಲೇ ಔಟ್ ಆಗುತ್ತಿದ್ದಾರೆ. ಈ ಚಾಳಿ ಈ ಸರಣಿಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಹೀಗಾಗಿ ಟೀಮ್ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ. ಇನ್ನು ರಿಷಭ್ ಪಂತ್ ಪ್ರಸಕ್ತ ಸರಣಿಯಲ್ಲಿ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ.
ಮೆಲ್ಬೋರ್ನ್ ಟೆಸ್ಟ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದ ಪಂತ್, ಲೂಸ್ ಶಾಟ್ಗೆ ಬಲಿಯಾದರು. ಇವರು ಈ ಹೊಡೆತಕ್ಕೆ ವೀಕ್ಷಕ ವಿವರಣೆ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಸಹ ಟೀಕಿಸಿದರು. ಈಗ ಈ ಇಬ್ಬರೂ ಆಟಗಾರರಿಗೆ ತಮ್ಮ ಮೇಲಿನ ಟೀಕೆಗಳಿಗೆ ಮೈದಾನದಲ್ಲಿ ಉತ್ತರ ನೀಡುವ ಸದಾವಕಾಶ ಬಂದು ಒದಗಿದೆ.

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಈ ಇಬ್ಬರು ಆಟಗಾರರು ಸ್ಥಿರ ಪ್ರದರ್ಶನವನ್ನು ನೀಡಿ ರನ್ಗಳನ್ನು ಕಲೆ ಹಾಕಿದ್ದೇ ಆದಲ್ಲಿ ಇಬ್ಬರು ದಾಖಲೆ ನಿರ್ಮಿಸಿಬಹುದು. ಅಂದಹಾಗೆ ಸಿಡ್ನಿ ಅಂಗಳದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಕಲೆ ಹಾಕಿರುವ ಕೀರ್ತಿ ಸಚಿನ್ ತೆಂಡೂಲ್ಕರ್ ಅವರಿಗೆ ಸಲ್ಲುತ್ತದೆ. ಸಚಿನ್ ಈ ಅಂಗಳದಲ್ಲಿ 785 ರನ್ ಸಿಡಿಸಿದ್ದರೆ, ವಿವಿಎಸ್ ಲಕ್ಷ್ಮಣ 549 ರನ್ ಕಲೆ ಹಾಕಿದ್ದಾರೆ. ಇನ್ನು ಚೇತೇಶ್ವರ್ ಪೂಜಾರ 320, ರಾಹುಲ್ ದ್ರಾವಿಡ್ 306 ರನ್ ಕಲೆ ಹಾಕಿದ್ದಾರೆ.
ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಅವರು ರಾಹುಲ್ ದ್ರಾವಿಡ್, ಚೇತೇಶ್ವರ್ ಪೂಜಾರ ದಾಖಲೆ ಅಳಿಸುವ ಸನಿಹದಲ್ಲಿದ್ದಾರೆ. ಈ ಅಂಗಳದಲ್ಲಿ ಪಂತ್ 292 ರನ್ ಸಿಡಿಸಿದರೆ, ವಿರಾಟ್ 248 ರನ್ ಕಲೆ ಹಾಕಿದ್ದಾರೆ. ಯಾರು ಎಷ್ಟು ಬೇಗ ಈ ದಾಖಲೆ ಅಳಿಸಿ ಹಾಕುತ್ತಾರೆ ಕಾದು ನೋಡಬೇಕಿದೆ.