
ಸಿಡ್ನಿ, ಜನವರಿ 11: ಟಿವಿ ಶೋವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಮಹಿಳೆಯರ ಬಗ್ಗೆ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್. ರಾಹುಲ್ ನೀಡಿದ್ದ ಹೇಳಿಕೆ ವಿವಾದ ಹುಟ್ಟಿಹಾಕಿದ್ದು, ಇಬ್ಬರ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ. ಈ ವಿವಾದ ಬಗ್ಗೆ ನಾಯಕ ವಿರಾಟ್ಕೊಹ್ಲಿ ಅವರು ಇದೆ ಮೊದಲ ಬಾರಿಗೆ ಮಾತನಾಡಿದ್ದಾರೆ.
ಬಾಲಿವುಡ್ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಅವರ ನಡೆಸಿಕೊಡುವ "ಕಾಫಿ ವಿತ್ ಕರಣ್" ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಪಾಂಡ್ಯ ಮತ್ತು ರಾಹುಲ್,ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಹಿಳೆಯರ ಕುರಿತಾಗಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಈ ಬಗ್ಗೆ ವ್ಯಾಪಕವಾಗಿ ಟೀಕೆಗಳು ಕೇಳಿ ಬಂದವು, ಬಿಸಿಸಿಐ ಕೂಡಾ ಇಬ್ಬರನ್ನು ಏಕದಿನ ಪಂದ್ಯ ಆಡದಂತೆ ನಿಷೇಧ ಹೇರಿದೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಜನವರಿ 12ರಂದು ನಡೆಯಲಿದ್ದು, ಈ ಬಗ್ಗೆ ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಹೇಳಿಕೆ ಬಗ್ಗೆ ಬಿಸಿಸಿಐ ನೀಡುವ ನಿರ್ಧಾರವನ್ನು ಎದುರು ನೋಡುತ್ತಿದ್ದೇವೆ, ಅವರು ಬಳಸಿದ ಪದಗಳು ಸಮರ್ಪಕವಾಗಿಲ್ಲ ಹಾಗೂ ಇದು ತಂಡದ ಧೀಶಕ್ತಿಯನ್ನು ಪ್ರತಿಬಿಂಬಿಸಲ್ಲ ಎಂದು ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದಿಂದ ಇಂಥ ಹೇಳಿಕೆಗಳಿಗೆ ಎಂದಿಗೂ ಬೆಂಬಲವಿರುವುದಿಲ್ಲ. ಈ ಬದಲಾವಣೆ ತಂಡದ ನಂಬಿಕೆಗಳನ್ನು ಬದಲಾಯಿಸುವುದಿಲ್ಲ. ನಮ್ಮ ತಂಡದ ಸ್ಪೂರ್ತಿಗೆ ಇದರಿಂದ ಏನು ಆಗುವುದಿಲ್ಲ. ನಿರ್ಧಾರ ಹೊರಬಂದ ನಂತರ ಆ ಬಗ್ಗೆ ಒಟ್ಟಾಗಿ ಯೋಚಿಸಬೇಕಾಗುತ್ತದೆ. ತಂಡಡದ ಸಮತೋಲನ ಮುಖ್ಯ ಎಂದು ಕೊಹ್ಲಿ ಹೇಳಿದರು.