
ಹೊಸದಿಲ್ಲಿ, ಆಗಸ್ಟ್ 02: ಬಿರಿಯಾನಿ ಎಂದರೆ ಬಾಯ್ ಚಪ್ಪರಿಸಿ ತಟ್ಟೆ ತುಂಬಾ ಬಾರಿಸುತ್ತಿದ್ದ ತಿಂಡಿ ಪೋತ ವಿರಾಟ್ ಕೊಹ್ಲಿ ಇಂದು ಟೀಮ್ ಇಂಡಿಯಾದಲ್ಲಿ ಡಯೆಟ್ ಮತ್ತು ಫಿಟ್ನೆಸ್ ವಿಚಾರದಲ್ಲಿ ಗುಣಮಟ್ಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ.
ವಿದೇಶಿ ಆಟಗಾರರನ್ನೂ ಮೀರಿಸುವಂತಹ ಫಿಟ್ನೆಸ್ ವಿರಾಟ್ ಕೊಹ್ಲಿ ಅವರದ್ದು. ಇದಕ್ಕಾಗಿ ಅವರು ಹಲವು ಕಠಿಣ ಫಿಟ್ನೆಸ್ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವೇಟ್ ಲಿಫ್ಟಿಂಗ್ ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಗುಟ್ಟು ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿದೆ. ತಮ್ಮ ಲಿಫ್ಟಿಂಗ್ ವಿಡಿಯೊವನ್ನು ಕೊಹ್ಲಿ ಅವರೇ ಹಲವು ಬಾರಿ ಶೇರ್ ಮಾಡಿದ್ದಾರೆ.
ಅಂದಹಾಗೆ ಫಿಟ್ನೆಸ್ ಸಲುವಾಗಿ ನಡೆಸುವ ಎಲ್ಲಾ ಕಸರತ್ತಿನ ಜೊತೆಗೆ ಉತ್ತಮ ದೇಹ ಸ್ಥಿತಿ ಕಾಯ್ದುಕೊಳ್ಳಲು ಡಯೆಟ್ (ಆಹಾರ ಪದ್ದತಿ) ಕೂಡ ಅಷ್ಟೇ ಮುಖ್ಯ. ಡಯೆಟ್ ವಿಚಾರದಲ್ಲಿ ಕೊಹ್ಲಿ ಅವರನ್ನು ಸಂಪೂರ್ಣ ಬದಲಾಯಿಸಿದ ವ್ಯಕ್ತಿ ಭಾರತ ತಂಡದ ಮಾಜಿ ಸ್ಟ್ರೆಂತ್ ಅಂಡ್ ಕಂಡೀಷನಿಂಗ್ ಕೋಚ್ ಶಂಕರ್ ಬಸು ಎಂಬುದು ವಿಶೇಷ. ಭಾರತ ತಂಡದ ಜೊತೆಗೆ ಶಂಕರ್ ಬಸು ಅವರ ನಾಲ್ಕು ವರ್ಷಗಳ ಒಪ್ಪಂದ ಕಳೆದ ತಿಂಗಳು ಅಂತ್ಯಗೊಂಡ ವಿಶ್ವಕಪ್ ಟೂರ್ನಿಯೊಂದಿಗೆ ಅಂತ್ಯಗೊಂಡಿದೆ.
ಈ ಸಂದರ್ಭದಲ್ಲಿ ಮಾತನಾಡಿರುವ 50 ವರ್ಷದ ಫಿಟ್ನೆಸ್ ಗುರು ಶಂಕರ್ ಬಸು, ಕಳೆದ ನಾಲ್ಕು ವರ್ಷಗಳಲ್ಲಿನ ಟೀಮ್ ಇಂಡಿಯಾ ಜೊತೆಗಿನ ತಮ್ಮ ಒಡನಾಟವನ್ನು ಹಂಚಿಕೊಂಡಿದ್ದಾರೆ. ತಮ್ಮ ಕಾರ್ಯಾವಧಿಯಲ್ಲಿ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ಅವರ ಫಿಟ್ನೆಸ್ ಮಟ್ಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದದ್ದು, ತಮ್ಮ ಬಹುದೊಡ್ಡ ಸಾಧನೆ ಎಂದು ಶಂಕರ್ ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಫಿಟ್ನೆಸ್ ಸಾಧಿಸುವ ಸಲುವಾಗಿ ವಿರಾಟ್ ತಮ್ಮ ಡಯೆಟ್ ಕಟ್ಟು ನಿಟ್ಟಿನಿಂದ ಪಾಲಿಸುತ್ತಿದ್ದರು. ಅದು ಯಾವ ಮಟ್ಟಿಗೆ ಎಂದರೆ ಕಳೆದ 2 ವರ್ಷಗಳಲ್ಲಿ ಒಮ್ಮೆಯೂ ಅವರು ತಮ್ಮ ಡಯೆಟ್ ಹೊರತಾಗಿ ಬೇರೆಯದ್ದನ್ನು ತಿಂದು (ಚೀಟ್ ಡೇ) ತಮ್ಮ ದೇಹಕ್ಕೆ ಮೋಸ ಮಾಡಿದವರಲ್ಲ ಎಂದು ಹೇಳಿದ್ದಾರೆ.
"ಆರಂಭದಲ್ಲಿ ಟೀಮ್ ಇಂಡಿಯಾದಲ್ಲಿ ಫಿಟ್ನೆಸ್ ಸಂಸ್ಕೃತಿ ತರುವ ಸವಾಲು ನನ್ನೆದುರಿತ್ತು. ಅದೃಷ್ಟವಶಾತ್ ತಂಡದಲ್ಲಿದ್ದ ಬಹುತೇಕ ಎಲ್ಲಾ ಆಟಗಾರರು ಇದನ್ನೇ ಎದುರು ನೋಡುತ್ತಿದ್ದರು. ಹೀಗಾಗಿ ಈ ಕಾರ್ಯಸಾಧನೆಗಾಗಿ ಕಠಿಣ ಪರಿಶ್ರಮವಹಿಸುವ ಕಡೆಗೆ ಪ್ರೇರಿತನಾದೆ. ಕೊಹ್ಲಿಯಂತ ನಾಯಕನಿಂದ ನನ್ನ ಕೆಲಸ ಸುಲಭವಾಯಿತು. ಅವರಂತಹ ಆಟಗಾರನಿಂದ ಮತ್ತೊಬ್ಬರು ಪ್ರೇರಿರತಾಗುವುದು ಬಹಳ ಸುಲಭ," ಎಂದು ಶಂಕರ್ ಹೇಳಿದ್ದಾರೆ.
"ವಿರಾಟ್ ತಾವು ತೆಗೆದುಕೊಳ್ಳುವ ಆಹಾರ ವಿಚಾರದಲ್ಲಿ ಎಂದಿಗೂ ಮೋಸ ಮಾಡುವುದಿಲ್ಲ. ಅವರು ಕಳೆದ ಎರಡು ವರ್ಷಗಳಿಂದ 'ಚೀಟ್ ಡೇ' ನಡೆಸಿಲ್ಲ. ಫಿಟ್ನೆಸ್ ಮತ್ತು ಡಯೆಟ್ ವಿಚಾರದಲ್ಲಿ ಈ ಆಟಗಾರ ನಿಜಕ್ಕೂ ಹುಚ್ಚ ಎಂದೇ ಹೇಳಬಯಸುತ್ತೇನೆ. ನಾನೇ ಬಲವಂತದಿಂದ ಆತನಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಒತ್ತಯಿಸಬೇಕು," ಎಂದು ಟೀಮ್ ಇಂಡಿಯಾ ನಾಯಕ ಬದ್ಧತೆ ಕುರಿತಾಗಿ ಶಂಕರ್ ಗುಣಗಾನ ಮಾಡಿದ್ದಾರೆ.
ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ವಿಶ್ವದ ಅತ್ಯಂತ ಫಿಟ್ತಂಡಗಳಲ್ಲಿ ಮುಂಚೂಣಿಯಲ್ಲಿದೆ. ಶಂಕರ್ ಅವರ ಮಾರ್ಗದರ್ಶನದಲ್ಲಿ ಆರ್. ಅಶ್ವಿನ್, ಇಶಾಂತ್ ಶರ್ಮಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಭಾರತ ತಂಡದ ಪ್ರಮುಖ ಆಟಗಾರರೆಲ್ಲಾ ಫಿಟ್ನೆಸ್ ಹಾದಿ ತುಳಿದಿದ್ದಾರೆ.
2017ರ ಐಪಿಎಲ್ ವೇಳೆ ಶಂಕರ್ ಬಸು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಸ್ಟ್ರೆಂತ್ ಅಂಡ್ ಕಂಡೀಷನಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ವಿರಾಟ್ ತಮ್ಮ ಫಿಟ್ನೆಸ್ ಮಟ್ಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ನೆರವಾದ ಗುರುವಿಗೆ ಟ್ವಿಟರ್ ಮೂಲಕ ನಮನ ಸಲ್ಲಿಸಿದ್ದರು.