
ನವದೆಹಲಿ, ಜೂನ್ 17: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ, ಫುಟ್ಬಾಲ್ ತಂಡದ ಮಾಜಿ ನಾಯಕ ಭೈಚುಂಗ್ ಭುಟಿಯಾ ಸೇರಿದಂತೆ ಅನೇಕ ಕ್ರೀಡಾಪಟುಗಳು ಗಾಲ್ವಾನ್ ಘರ್ಷಣೆಯಲ್ಲಿ ಮಡಿದ ಭಾರತೀಯ ಸೈನಿಕರಿಗೆ ಗೌರವ ಸೂಚಿಸಿದ್ದಾರೆ.
ಭಾರತ-ಚೀನಾ ಮಧ್ಯೆಯಿದ್ದ ಗಡಿ ವಿವಾದ ಈಗ ಸಂಘರ್ಷದತ್ತ ಸಾಗಿದೆ. ಗಾಲ್ವಾನ್ ಕಣಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಹಿಂದಿನಿಂದಲೂ ಜಟಾಪಟಿ ನಡೆಯುತ್ತಿದೆ. ಈ ಸಂಘರ್ಕ್ಕೆ ಸುಮಾರು 5 ದಶಕಗಳ ಇತಿಹಾಸವಿದೆ. ಇತ್ತೀಚೆಗೆ ತೀವ್ರಗೊಂಡಿರುವ ಸಂಘರ್ಷದಿಂದಾಗಿ ಸುಮಾರು 20 ಭಾರತೀಯ ಯೋಧರು ಮೃತರಾಗಿದ್ದಾರೆ.
'ಗಾಲ್ವಾನ್ ಕಣಿವೆಯಲ್ಲಿ ನಮ್ಮ ದೇಶ ಉಳಿಸಲು ತಮ್ಮ ಪ್ರಾಣ ಅರ್ಪಿಸಿದ ಭಾರತದ ಯೋಧರಿಗೆ ಸೆಲ್ಯೂಟ್ ಮಾಡುತ್ತೇನೆ ಮತ್ತು ನನ್ನ ತುಂಬು ಮನದ ಗೌರವ ಸಲ್ಲಿಸುತ್ತೇನೆ. ಸೈನಿಕರಿಗಿಂತ ಯಾರೂ ನಿಸ್ವಾರ್ಥಿ ಮತ್ತು ಧೈರ್ಯಶಾಲಿಗಳಿಲ್ಲ. ಸೈನಿಕರ ಕುಟುಂಬಸ್ಥರಿಗೂ ಸಂತಾಪ ಸೂಚಿಸುತ್ತೇನೆ. ಇಂಥ ಸಂಕಷ್ಟದ ಸಂದರ್ಭದಲ್ಲಿ ಮಡಿದ ಸೈನಿಕರಿಗೆ ನಮ್ಮ ಪ್ರಾರ್ಥನೆಯಿಂದ ಶಾಂತಿ ಸಿಗಲಿ,' ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ಇನ್ನು ಕ್ರಿಕೆಟಿಗರಾದ ರೋಹಿತ್ ಶರ್ಮಾ, ದಿಗ್ಗಜ ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಮೊಹಮ್ಮದ್ ಕೈಪ್, ಶಿಖರ್ ಧವನ್, ಆಕಾಶ್ ಚೋಪ್ರಾ, ಸುಬ್ರಮಣಿ ಬದ್ರಿನಾಥ್, ಇಶಾಂತ್ ಶರ್ಮಾ, ಅಮಿತ್ ಮಿಶ್ರಾ, ಇರ್ಫಾನ್ ಪಠಾಣ್, ವಿಜಯ್ ಶಂಕರ್, ಫುಟ್ಬಾಲರ್ ಭೈಚುಂಗ್ ಭುಟಿಯಾ ಸೇರಿದಂತೆ ಅನೇಕರು ಸೈನಿಕರ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.