
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡ ಸೋಲು ಕಂಡ ನಂತರ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿಯ ನಿರ್ಧಾರವೊಂದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ತಂಡದಲ್ಲಿ ಉತ್ತಮ ಫಾರ್ಮ್ನಲ್ಲಿರುವ ಡಿವಿಲಿಯರ್ಸ್ ಅವರನ್ನು ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಗಿತ್ತು. ಟ್ವಿಟ್ಟರ್ನಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಈ ಬಗ್ಗೆ ಪ್ರಶ್ನಿಸಿದ್ದಾರೆ.
ಪವರ್ಪ್ಲೇನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ ಆರಂಭಿಕ ಜೊಡಿಯಾದ ದೇವದತ್ ಪಡಿಕ್ಕಲ್ ಹಾಗೂ ಆರೋನ್ ಫಿಂಚ್ ವಿಕೆಟ್ ಒಪ್ಪಿಸಿದ ಬಳಿಕ ಕ್ರೀಸ್ನಲ್ಲಿದ್ದ ಕೊಹ್ಲಿಯನ್ನು ವಾಶಿಂಗ್ಟನ್ ಸುಂದರ್ ಹಾಗೂ ಶಿವಮ್ ದುಬೆ ಕೂಡಿಕೊಂಡಿದ್ದರು. ಬಳಿಕ ಅಂತಿಮ ನಾಲ್ಕು ಓವರ್ಗಳು ಇದ್ದಾಗ ಬ್ಯಾಟಿಂಗ್ಗೆ ಇಳಿದ ಡಿವಿಲಿಯರ್ಸ್ ಶೀಘ್ರವಾಗಿ ವಿಕಟ್ ಒಪ್ಪಿಸಿ ಫೆವಿಲಿಯನ್ ಸೇರಿಕೊಂಡಿದ್ದರು.
ಕ್ರಿಕ್ ಬಜ್ ಜೊತೆಗೆ ಮಾತನಾಡಿದ ವೀರೇಂದ್ರ ಸೆಹ್ವಾಗ್ 'ಕಳೆದ ಪಂದ್ಯದಲ್ಲಿ ಇದೇ ಅಂಗಳದಲ್ಲಿ 33 ಎಸೆತಗಳಲ್ಲಿ 73 ರನ್ಗಳಿಸಿದ್ದರು ಎಬಿ ಡಿವಿಲಿಯರ್ಸ್. ಅವರಿಗೆ ಇನ್ನಷ್ಟು ಹೆಚ್ಚಿನ ಎಸೆತಗಳು ದೊರೆಯುತ್ತಿದ್ದರೆ ಇನ್ನಷ್ಟು ರನ್ ಗಳಿಸಲು ಸಾಧ್ಯವಾಗುತ್ತಿತ್ತು ಎಂದು ಸೆಹ್ವಾಗ್ ಹೇಳಿದ್ದಾರೆ.
ಇನ್ನು ತಮ್ಮ ನಿರ್ಧಾರವನ್ನು ವಿರಾಟ್ ಕೊಹ್ಲಿ ಸಮರ್ಥಿಸಿಕೊಳ್ಳುತ್ತಾ ಎಡಗೈ ಬಲಗೈ ಆಟಗಾರರ ಸಂಯೋಜನೆಯನ್ನು ಮಾಡಿಕೊಂಡ ಸಂಗತಿಯನ್ನು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸೆಹ್ವಾಗ್, ನೀವು ಎಡಗೈ ಬಲಗೈ ಕಾಂಬಿನೇಶನ್ ಬಗ್ಗೆ ಹೇಳುತ್ತೀರಾ ಎಂದಾದರೆ, ದೇವದತ್ ಪಡಿಕ್ಕಲ್ ಔಟಾದಾಗ ವಿರಾಟ್ ಕೊಹ್ಲಿ ಬ್ಯಾಟಿಂಗ್ಗೆ ಇಳಿದಿದ್ದರು. ಆ ಸಂದರ್ಭದಲ್ಲಿ ಈ ಸಂಯೋಜನೆಯ ಬಗ್ಗೆ ಯೋಚಿಸಿರಲಿಲ್ಲವೇ? ಮೂರನೇ ಕ್ರಮಾಂಕದಲ್ಲಿ ಯಾಕೆ ವಾಶಿಂಗ್ಟನ್ ಸುಂದರ್ ಅವರನ್ನು ಕಣಕ್ಕಿಳಿಸಿರಲಿಲ್ಲ. ನನಗೆ ಇದು ಅರ್ಥವಾಗುತ್ತಿಲ್ಲ ಎಂದು ಸೆಹ್ವಾಗ್ ಪ್ರತಿಕ್ರಿಯಿಸಿದ್ದಾರೆ.