

ಬರ್ಮಿಂಗ್ಹ್ಯಾಂ, ಆಗಸ್ಟ್ 8: ಇಂಗ್ಲೆಂಡ್ ನೆಲದಲ್ಲಿನ ಸತತ ವೈಫಲ್ಯದ ವಿರುದ್ಧ ಟೀಕೆಗಳಿಗೆ ಶತಕ ಹಾಗೂ ಅರ್ಧ ಶತಕಗಳ ಹೋರಾಟದ ಆಟದ ಬಳಿಕ ನಾಯಕ ವಿರಾಟ್ ಕೊಹ್ಲಿ ಉತ್ತರ ನೀಡಿದ್ದರು.
ಭಾರತ ತಂಡದ ಯಾವ ಆಟಗಾರನೂ ತೋರದ ಕೆಚ್ಚೆದೆಯ ಆಟವನ್ನು ಪ್ರದರ್ಶಿಸಿದ್ದ ವಿರಾಟ್ ಕೊಹ್ಲಿ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.
ಆದರೆ, ಭಾರತ ತಂಡದ ಕಟು ವಿಮರ್ಶಕರಾದ ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್, ಭಾರತದ ಸೋಲಿಗೆ ಕೊಹ್ಲಿ ಹೊಣೆಗಾರಿಕೆ ಹೊತ್ತುಕೊಳ್ಳಬೇಕು ಎಂದು ಹೇಳಿದ್ದಾರೆ.
ಕೊಹ್ಲಿ ಅವರು ಮೈದಾನದಲ್ಲಿ ತೆಗೆದುಕೊಂಡು ಕೆಲವು ಪ್ರಶ್ನಾರ್ಹ ನಿರ್ಧಾರಗಳೇ ಒಂದು ಐತಿಹಾಸಿಕ ಜಯಕ್ಕೆ ಅಡ್ಡಿಯುಂಟುಮಾಡಿತು. ಹೀಗಾಗಿ ಅದರ ತಪ್ಪನ್ನು ಅವರೂ ಹೊತ್ತುಕೊಳ್ಳಬೇಕು ಎಂದಿದ್ದಾರೆ.

ಈ ಪಂದ್ಯದಲ್ಲಿ ಕೊಹ್ಲಿ ಅದ್ಭುತವಾಗಿ ಆಡಿದರು. ಕೊನೆಯ ಬ್ಯಾಟ್ಸ್ಮನ್ಗಳ ಜತೆಗೆ ಅವರು ಆಡಿದ ಬಗೆಯನ್ನು ನೋಡಿದಾಗ ಅವರು ಪಂದ್ಯ ಗೆಲ್ಲಲು ಅರ್ಹರಾಗಿದ್ದರು. ಏಕಾಂಗಿಯಾಗಿ ಭಾರತವನ್ನು ಪಂದ್ಯದೆಡೆಗೆ ನಡೆಸಿಕೊಂಡು ತಂದರು.
ಇಷ್ಟೆಲ್ಲಾ ಇದ್ದರೂ, ಸೋಲಿಗೆ ಅವರು ಹೊಣೆಯನ್ನು ಹೊತ್ತುಕೊಳ್ಳಲೇಬೇಕು ಎಂದು ನಾಸಿರ್ ಹುಸೇನ್ ಹೇಳಿದ್ದಾರೆ.
ಎರಡನೆಯ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ 87ಕ್ಕೆ 7 ವಿಕೆಟ್ ಕಳೆದುಕೊಂಡಿತ್ತು. ಕುರ್ರನ್ ಮತ್ತು ಆದಿಲ್ ರಶೀದ್ ಕ್ರೀಸ್ನಲ್ಲಿದ್ದರು. ಇಂತಹ ಮಹತ್ವದ ಸಂದರ್ಭದಲ್ಲಿ ರವಿಚಂದ್ರನ್ ಅಶ್ವಿನ್ ಅವರಿಗೆ ಒಂದು ಗಂಟೆ ಬೌಲಿಂಗ್ ಕೊಡಲೇ ಇಲ್ಲ.
ಅಲ್ಲಿಂದ ಭಾರತ ಹಿಡಿತ ಕಳೆದುಕೊಂಡಿತು. ಅವರು ತಮ್ಮ ನಾಯಕತ್ವದ ಬಗ್ಗೆ ಗಮನ ಹರಿಸಬೇಕು. 20 ವರ್ಷದ ಎಡಗೈ ಬ್ಯಾಟ್ಸ್ಮನ್ ಕ್ರೀಸ್ನಲ್ಲಿದ್ದಾಗ ಎಡಗೈ ಬ್ಯಾಟ್ಸ್ಮನ್ಗಳ ವಿರುದ್ಧ 19ರ ಸರಾಸರಿ ಹೊಂದಿರುವ ಬೌಲರ್ ಅನ್ನು ಏಕೆ ಬೌಲಿಂಗ್ನಿಂದ ದೂರವಿಟ್ಟೆ ಎಂಬುದನ್ನು ಅವರು ಮತ್ತೆ ಕೇಳಿಕೊಳ್ಳಬೇಕಿದೆ ಎಂದು ಹುಸೇನ್ ಹೇಳಿದ್ದಾರೆ.