ಬೆಂಗಳೂರು, ಜೂನ್ 15: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಮಾಜಿ ನಾಯಕ ಮಹೇಂದ್ರ ಸಿಂಗ್ ಅವರೊಂದಿಗೆ ಶುಕ್ರವಾರ ಫಿಟ್ನೆಸ್ ಪರೀಕ್ಷೆಗೆ ಒಳಗಾದರು.
ಜೂನ್ 27ರಿಂದ ಆರಂಭವಾಗಲಿರುವ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲು ಕೊಹ್ಲಿ ಅವರು ಸಜ್ಜಾಗಿದ್ದಾರೆಯೇ ಇಲ್ಲವೇ ಎಂಬುದು ಈ ಪರೀಕ್ಷೆಯಿಂದ ದೃಢಪಡಲಿದೆ.
ಐಪಿಎಲ್ ಟೂರ್ನಿಯ ವೇಳೆ ಕೊಹ್ಲಿ ಕತ್ತಿನ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಅಫ್ಘಾನಿಸ್ತಾನದ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ಆಡದೆಯೇ ಇಂಗ್ಲೆಂಡ್ಗೆ ತೆರಳಿ ಅಲ್ಲಿನ ಸರ್ರೆ ಕೌಂಟಿ ತಂಡದ ಪರ ಆಡುವ ಮೂಲಕ ಇಂಗ್ಲೆಂಡ್ ಪಿಚ್ಗಳಲ್ಲಿ ಅನುಭವ ಪಡೆದುಕೊಳ್ಳಲು ಕೊಹ್ಲಿ ಉದ್ದೇಶಿಸಿದ್ದರು.
ಟೆಸ್ಟ್ ಕ್ರಿಕೆಟ್ನಲ್ಲಿ ಉಮೇಶ್ ಯಾದವ್ 100 ವಿಕೆಟ್ ಸಾಧನೆ
ಆದರೆ, ಗಾಯದ ಸಮಸ್ಯೆಗೆ ತುತ್ತಾಗಿದ್ದು, ಕೊಹ್ಲಿ ಅವರ ಇಂಗ್ಲೆಂಡ್ ಪ್ರವಾಸಕ್ಕೆ ಹಿನ್ನಡೆ ಉಂಟುಮಾಡಿತ್ತು.
ಯಾವುದೇ ಪ್ರವಾಸಕ್ಕೂ ಮುನ್ನ ಯೋಯೋ ಫಿಟ್ನೆಸ್ ಪರೀಕ್ಷೆಯಲ್ಲಿ ಪ್ರತಿ ಆಟಗಾರನೂ ಉತ್ತೀರ್ಣನಾಗಬೇಕು ಎಂದು ಬಿಸಿಸಿಐ ನಿಯಮ ರೂಪಿಸಿದೆ.
ಶುಕ್ರವಾರ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಭಾರತ ತಂಡದ ತರಬೇತುದಾರ ಶಂಕರ್ ಬಸು ಮತ್ತು ಇತರೆ ಸಿಬ್ಬಂದಿಯ ಸಮ್ಮುಖದಲ್ಲಿ ಯೋಯೋ ಪರೀಕ್ಷೆ ನಡೆಯಿತು.
ಬೆಂಗಳೂರಿನಲ್ಲಿ ಭಾರತಕ್ಕೆ ಸುಲಭದ ತುತ್ತಾದ ಅಫ್ಘಾನಿಸ್ತಾನ
ಕೊಹ್ಲಿ, ಎಂ.ಎಸ್. ಧೋನಿ, ಸುರೇಶ್ ರೈನಾ ಮತ್ತು ಭುವನೇಶ್ವರ್ ಕುಮಾರ್ ಪರೀಕ್ಷೆಗೆ ಒಳಗಾದರು. ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗದಿದ್ದರೂ, ಗಾಯಾಳು ಕೇದಾರ್ ಜಾಧವ್ ಕೂಡ ಮೊದಲ ಬ್ಯಾಚ್ನಲ್ಲಿ ಪರೀಕ್ಷೆಗೆ ಒಳಗಾದರು.
ಯೋಯೋ ಪರೀಕ್ಷೆಯಲ್ಲಿ ಪಾಸಾಗಲು ಕನಿಷ್ಠ 16.1 ಅಂಕಗಳನ್ನು ಪಡೆದುಕೊಳ್ಳಬೇಕು. ಆದರೆ, ಕೊಹ್ಲಿ ಎಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ ಎಂಬುದು ತಿಳಿಯದಿದ್ದರೂ, ಧೋನಿ ಅವರೊಂದಿಗೆ ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆಯಿಲ್ಲದ ಪಾಲ್ಗೊಂಡರು.
ಪರೀಕ್ಷೆ ಮುಗಿದ ಬಳಿಕ ಅವರ ಭುಜ ಮತ್ತು ಹಿಂಭಾಗದಲ್ಲಿ ಸಮಸ್ಯೆ ಕಂಡು ಬಂದಿತು.
ಯೋಯೋ ಪರೀಕ್ಷೆ ಮೂಲ ಮಾನದಂಡವಾಗಿದೆ. ಆದರೆ, ಕೊಹ್ಲಿ ಅವರ ಕತ್ತಿನ ಗಾಯದ ಸಮಸ್ಯೆಯು ಜೂನ್ 27-29ರವರೆಗೆ ಐರ್ಲೆಂಡ್ನಲ್ಲಿ ನಡೆಯಲಿರುವ ಟಿ 20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಅವರು ಪಾಲ್ಗೊಳ್ಳುವುದನ್ನು ನಿರ್ಧರಿಸಲಿದೆ.
ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡವು ಜುಲೈ 3ರಿಂದ ಮೂರು ಟಿ 20, ಮೂರು ಏಕದಿನ ಮತ್ತು ಐದು ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ಕೊಹ್ಲಿ, ಧೋನಿ ಮತ್ತಿತರ ಮೊದಲ ಬ್ಯಾಚ್ನ ಆಟಗಾರರು ಪರೀಕ್ಷೆ ಮುಗಿಸಿದ ಬಳಿಕ ಜಸ್ಪ್ರೀತ್ ಬೂಮ್ರಾ, ಸಿದ್ಧಾರ್ಥ ಕೌಲ್, ವಾಷಿಂಗ್ಟನ್ ಸುಂದರ್, ಯುರ್ವೇಂದ್ರ ಚಾಹಲ್, ಮನೀಶ್ ಪಾಂಡೆ ಅವರು ಪರೀಕ್ಷೆಗೆ ಒಳಗಾದರು.
ಭಾರತ ತಂಡದ ಮ್ಯಾನೇಜ್ಮೆಂಟ್ ಎನ್ಸಿಎ ಆವರಣದಿಂದ ಮಾಧ್ಯಮದವರನ್ನು ದೂರವೇ ಇರಿಸಲು ಪ್ರಯತ್ನಿಸಿತು. ತಂಡದ ಭದ್ರತಾ ಅಧಿಕಾರಿಗಳು ಸಹ ಪತ್ರಕರ್ತರನ್ನು ಪರೀಕ್ಷೆ ವೇಳೆ ದೂರ ಇರುವಂತೆ ಸೂಚಿಸಿದರು.