ಕೊಹ್ಲಿ ಮಾಡುತ್ತಿದ್ದ ಈ ತಪ್ಪನ್ನು ಡು ಪ್ಲೆಸಿಸ್ ಮಾಡಲಿಲ್ಲ ಹೀಗಾಗಿ ಆರ್ಸಿಬಿ ಯಶಸ್ಸು ಕಂಡಿದೆ ಎಂದ ಸೆಹ್ವಾಗ್!

ಕಳೆದ ಮಾರ್ಚ್ ತಿಂಗಳ ಅಂತ್ಯದಲ್ಲಿ ಆರಂಭವಾಗಿದ್ದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 70 ಪಂದ್ಯಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಇದೀಗ ಪ್ಲೇಆಫ್ ಪಂದ್ಯಗಳು ಆರಂಭಗೊಳ್ಳುತ್ತಿವೆ. ಈ ಬಾರಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್, ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್, ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ಲೇಆಫ್ ಸುತ್ತಿಗೆ ಪ್ರವೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ.
ಅದರಲ್ಲಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ ಪ್ರವೇಶ ಪಡೆದುಕೊಳ್ಳುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪೈಪೋಟಿ ನಡೆಸಿ ಅಂತಿಮ ಕ್ಷಣದಲ್ಲಿ ಯಶಸ್ವಿಯಾಯಿತು. ಹೌದು, ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಗೆಲುವನ್ನು ಸಾಧಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಪ್ರವೇಶಿಸಬೇಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲಬೇಕಿತ್ತು. ಅದರಂತೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲುವನ್ನು ಸಾಧಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಶಸ್ವಿಯಾಗಿ ಪ್ಲೇಆಫ್ ತಲುಪಿದೆ.
ಇನ್ನು ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ತಲುಪಿದ್ದಕ್ಕೆ ನಾಯಕ ಫಾಫ್ ಡು ಪ್ಲೆಸಿಸ್ ಕೂಡ ಪ್ರಮುಖ ಕಾರಣ ಎಂದೇ ಹೇಳಬಹುದು. ತನ್ನ ಉತ್ತಮ ನಾಯಕತ್ವದ ಜತೆಗೆ ಲೀಗ್ ಹಂತದಲ್ಲಿ ತಂಡದ ಪರ ಅತಿಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಕೂಡ ಆಗಿರುವ ಫಾಫ್ ಡು ಪ್ಲೆಸಿಸ್ ಹಲವು ಪಂದ್ಯಗಳಲ್ಲಿ ತಂಡಕ್ಕೆ ಜಯ ತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇನ್ನು ಫಾಫ್ ಡು ಪ್ಲೆಸಿಸ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ವಿರಾಟ್ ಕೊಹ್ಲಿ ಜತೆ ಹೋಲಿಕೆ ಮಾಡಿ ಮಾತನಾಡಿ ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ಕೊಹ್ಲಿ ತಪ್ಪನ್ನು ಕಂಡಿದ್ದೇವೆ, ಡು ಪ್ಲೆಸಿಸ್ ಮತ್ತು ಸಂಜಯ್ ಬಂಗರ್ ಆಗಮನ ಆರ್ಸಿಬಿಯನ್ನು ಬದಲಿಸಿದೆ
ಕೋಚ್ ಆಗಿ ಸಂಜಯ್ ಬಂಗರ್ ಮತ್ತು ನಾಯಕನಾಗಿ ಫಾಫ್ ಡು ಪ್ಲೆಸಿಸ್ ಆಗಮಿಸಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯೋಚನೆಗಳು ಬದಲಾಗಿವೆ ಎಂದು ವಿರೇಂದ್ರ ಸೆಹ್ವಾಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ನಾಯಕನಾಗಿದ್ದಾಗ ಆಟಗಾರನೋರ್ವ ಒಂದೆರಡು ಪಂದ್ಯಗಳಲ್ಲಿ ಕೆಟ್ಟ ಪ್ರದರ್ಶನ ನೀಡಿದರೆ ಸಾಕು ಆತನನ್ನು ವಿರಾಟ್ ಕೊಹ್ಲಿ ತಂಡದಿಂದ ಕೈಬಿಡುತ್ತಿದ್ದರು. ಆದರೆ, ಫಾಫ್ ಡು ಪ್ಲೆಸಿಸ್ ಆ ರೀತಿ ಮಾಡದೇ ಆಟಗಾರರಿಗೆ ಪದೇ ಪದೇ ಅವಕಾಶಗಳನ್ನು ನೀಡಿದರು, ಅನುರಾಜ್ ರಾವತ್ ಬದಲಾಗಿ ರಜರ್ ಪಾಟಿದರ್ ಅವರನ್ನು ಕಣಕ್ಕಿಳಿಸಿದ್ದನ್ನು ಬಿಟ್ಟರೆ ಫಾಫ್ ಮತ್ತು ಬಂಗರ್ ಜೋಡಿ ಹೆಚ್ಚೇನೂ ಬದಲಾವಣೆಗೆ ಕೈ ಹಾಕಲಿಲ್ಲ ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ. ಈ ಮೂಲಕ ಈ ಬದಲಾವಣೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯಶಸ್ಸಿಗೆ ಸಹಾಯ ಮಾಡಿದೆ ಎಂದು ಸೆಹ್ವಾಗ್ ಪರೋಕ್ಷವಾಗಿ ತಿಳಿಸಿದ್ದಾರೆ.

ಆರ್ಸಿಬಿ ಈ ಬಾರಿ ಮತ್ತಷ್ಟು ಬಲಿಷ್ಠ
ಇನ್ನೂ ಮುಂದುವರೆದು ಮಾತನಾಡಿದ ವಿರೇಂದ್ರ ಸೆಹ್ವಾಗ್ ಇಷ್ಟು ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರಾಳಿಗಳು ಎಬಿ ಡಿ ವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿಯನ್ನು ಮಾತ್ರ ಕಟ್ಟಿಹಾಕಬೇಕಿತ್ತು ಆದರೆ, ಈ ಬಾರಿ ನಾಲ್ವರು ಬಲಿಷ್ಠ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ. ಈ ಆಟಗಾರರಲ್ಲಿ ನಾನು ಬೌಲರ್ಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದಿರುವ ಸೆಹ್ವಾಗ್ ಕೊಹ್ಲಿ, ಡು ಪ್ಲೆಸಿಸ್, ಮ್ಯಾಕ್ಸ್ವೆಲ್ ಮತ್ತು ದಿನೇಶ್ ಕಾರ್ತಿಕ್ ಈ ನಾಲ್ವರು ಆಟಗಾರರನ್ನು ಕಟ್ಟಿಹಾಕುವುದು ಎದುರಾಳಿಗಳಿಗೆ ಕಷ್ಟವಾಗಿದೆ ಎಂದಿದ್ದಾರೆ.

ಆರ್ಸಿಬಿ ಕಪ್ ಗೆಲ್ಲಲು ಇನ್ನೂ ಮೂರು ಪಂದ್ಯ ಗೆಲ್ಲಬೇಕು
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇಆಫ್ ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬುಧವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಾಡಲಿದೆ. ಈ ಪಂದ್ಯದಲ್ಲಿ ಗೆದ್ದರೆ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಆರ್ಸಿಬಿ ಅರ್ಹತೆ ಪಡೆದುಕೊಳ್ಳಲಿದ್ದು, ಆ ಪಂದ್ಯದಲ್ಲಿ ಒಂದನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತು ಬರುವ ತಂಡದ ವಿರುದ್ಧ ಆರ್ಸಿಬಿ ಸೆಣಸಾಡಬೇಕಿದೆ. ಇನ್ನು ಈ ಪಂದ್ಯದಲ್ಲಿಯೂ ಗೆದ್ದರೆ ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಶಸ್ವಿಯಾಗಿ ಫೈನಲ್ ಪಂದ್ಯಕ್ಕೆ ಲಗ್ಗೆ ಇಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications