ಮೈಸೂರು, ಸೆ.16: ಬಳ್ಳಾರಿ ಟಸ್ಕರ್ಸ್ ವಿರುದ್ಧ ರೋಚಕ ಜಯ ದಾಖಲಿಸಿದ ಹುಬ್ಬಳ್ಳಿ ಟೈಗರ್ಸ್ ತಂಡ ಈ ಬಾರಿಯ ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ನ ಪ್ಲೇ ಆಫ್ ಹಂತ ಪ್ರವೇಶಿಸಿದೆ. ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದ ಅಂತಿಮ ಓವರ್ ನಲ್ಲಿ ಹುಬ್ಬಳ್ಳಿಯ ವೇಗಿ ಅಕ್ಷಯ್ ತಮ್ಮ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ.
ಕೇವಲ 110ರನ್ ಅಲ್ಪಮೊತ್ತ ಗಳಿಸಿದ್ದ ಟೈಗರ್ಸ್ ತಂಡ, ಪ್ಲೇ ಆಫ್ ತಲುಪಲು ಬಲಗೈ ವೇಗಿ ಎಸ್ ಎಲ್ ಅಕ್ಷಯ್ ಎಸೆದ ಕೊನೆ ಓವರ್ ಕಾರಣ ಎಂದರೆ ತಪ್ಪಾಗಲಾರದು. 4 ಓವರ್ ಗಳಲ್ಲಿ ಒಂದು ಮೇಡನ್ ಸಹಿತ 12ರನ್ನಿತ್ತು 1 ವಿಕೆಟ್ ಪಡೆದ ಅಕ್ಷಯ್ ಕೊನೆಯ ಓವರ್ ನಲ್ಲಿ ಬಳ್ಳಾರಿಯ ಆನೆಗಳನ್ನು ಕಟ್ಟಿಹಾಕಿದರು. ತಂಡದ ಗೆಲುವಿಗೆ ಕಾರಣರಾದ ಅಕ್ಷಯ್ ಗೆ ಅರ್ಹ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.
ಕೊನೆ ಓವರ್ ನಲ್ಲಿ ಟಸ್ಕರ್ಸ್ ತಂಡಕ್ಕೆ ಗೆಲ್ಲಲು10 ರನ್ ಬೇಕಿತ್ತು. 5 ವಿಕೆಟ್ ಉಳಿಸಿಕೊಂಡಿತ್ತು. ಆದರೆ, ಅಕ್ಷಯ್ ತಮ್ಮ ಕಾರಾರುವಾಕ್ ಬೌಲಿಂಗ್ ನಿಂದ ಕೇವಲ 6 ರನ್ ಮಾತ್ರ ನೀಡಿ, ಟಸ್ಕರ್ಸ್ ತಂಡಕ್ಕೆ ಆಘಾತ ನೀಡಿದರು. ಈ ಗೆಲುವಿನ ಮೂಲಕ ಹುಬ್ಬಳ್ಳಿ ತಂಡ ಪ್ಲೇ ಆಫ್ ಗೆ ಅರ್ಹತೆ ಪಡೆದ ಮೂರನೇ ತಂಡ ಎನಿಸಿದೆ.
ಈಗಾಗಲೇ ಬೆಳಗಾವಿ ಪ್ಯಾಂಥರ್ಸ್, ಬಿಜಾಪುರ್ ಬುಲ್ಸ್ ತಂಡ ಪ್ಲೇ ಆಫ್ ತಲುಪಿವೆ. ನಾಲ್ಕನೇ ತಂಡ ಯಾವುದು ಎಂಬುದು ನಾಳೆ ನಡೆಯಲಿರುವ ನಮ್ಮ ಶಿವಮೊಗ್ಗ ಹಾಗೂ ಮಂಗಳೂರು ಯುನೈಟೆಡ್ ನಡುವಿನ ಪಂದ್ಯದ ನಂತರ ತಿಳಿಯಲಿದೆ. ಕೆಪಿಎಲ್ ಫೈನಲ್ ಪಂದ್ಯ ಸೆಪ್ಟೆಂಬರ್ 20(ಭಾನುವಾರ) ಮೈಸೂರಿನಲ್ಲಿ ನಡೆಯಲಿದೆ.